Yashaswini Health Scheme : ಯಶಸ್ವಿನಿ ಯೋಜನೆ ಮರು ಜಾರಿಗೊಳಿಸಿ ಸರಕಾರದ ಆದೇಶ | ನವೆಂಬರ್ 1 ರಿಂದ ಸದಸ್ಯರ ನೋಂದಣಿ ಪ್ರಾರಂಭ

2022-23 ನೇ ಸಾಲಿನ ಆಯವ್ಯಯದಲ್ಲಿ ಮುಖ್ಯಮಂತ್ರಿಗಳು ಘೋಷಿಸಿದಂತೆ ಯಶಸ್ವಿನಿ ಯೋಜನೆ ಯನ್ನು ಪರಿಷ್ಕರಿಸಿ ಮರು ಜಾರಿ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಹಾಗೂ ಸದಸ್ಯರ ನೋಂದಣಿ ನವೆಂಬರ್ 1 ರಿಂದ ಪ್ರಾರಂಭವಾಗಲಿದೆ.

ಈ ಕುರಿತು ಬುಧವಾರ ಸರ್ಕಾರಿ ಆದೇಶ ಹೊರಡಿಸಲಾಗಿದೆ. ಗ್ರಾಮೀಣ ಪ್ರದೇಶದ ಸಹಕಾರಿ ಸಂಘಗಳ ಸದಸ್ಯರಿಗೆ ನಾಲ್ಕು ಜನರ ಕುಟುಂಬಕ್ಕೆ ತಲಾ 500 ರೂ. ಹಾಗೂ ನಗರ ಪ್ರದೇಶದ ಸಹಕಾರಿಗಳಿಗೆ 1000 ರೂ. ವಂತಿಗೆ ನಿಗದಿ ಪಡಿಸಲಾಗಿದೆ. ನಾಲ್ಕು ಮಂದಿಗಿಂತ ಹೆಚ್ಚಿನ ಸದಸ್ಯರು ಇರುವ ಕುಟುಂಬಗಳಿಗೆ ಹೆಚ್ಚುವರಿ ಸದಸ್ಯರಿಗೆ ತಲಾ 200 ರೂ. ವಂತಿಗೆ ಪಾವತಿಸಿ, ನೊಂದಾಯಿಸಬಹುದು.

ರಾಜ್ಯ ಸರ್ಕಾರವು ಇದಕ್ಕಾಗಿ ಪ್ರಸಕ್ತ ಆಯವ್ಯಯದಲ್ಲಿ 300 ಕೋಟಿ ರೂ. ಅನುದಾನ ನಿಗದಿ ಪಡಿಸಿದೆ. ಇದರಲ್ಲಿ ಯಶಸ್ವಿನಿ ನೆಟ್ ವರ್ಕ್ ಆಸ್ಪತ್ರೆಗಳಲ್ಲಿ ಒಂದು ಕುಟುಂಬಕ್ಕೆ 5 ಲಕ್ಷ ರೂ. ವರೆಗಿನ ವೆಚ್ಚದಲ್ಲಿ ನಗದು ರಹಿತ ಚಿಕಿತ್ಸೆ ಪಡೆಯಬಹುದು.

ರಾಜ್ಯ ಸರಕಾರ, 2003 ರಲ್ಲಿ ಸಹಕಾರಿ ಸಂಘಗಳ ಸದಸ್ಯರಿಗೆ ಆರೋಗ್ಯ ಸೇವೆ ನೀಡಲು ಯಶಸ್ವಿನಿ ಯೋಜನೆಯನ್ನು ಜಾರಿಗೆ ಮಾಡಿತ್ತು. ಆದರೆ 2018 ರಲ್ಲಿ ರಾಜ್ಯದ ಎಲ್ಲರಿಗೂ ಸಾರ್ವತ್ರಿಕ ಆರೋಗ್ಯ ರಕ್ಷಣೆ ನೀಡಲು ಆರೋಗ್ಯ ಕರ್ನಾಟಕ ಯೋಜನೆಯನ್ನು ಅನುಷ್ಠಾನಗೊಳಿಸಿತು. ಅನಂತರ ಸರ್ಕಾರ 2018ರ ಮೇ 31 ರಂದು ಯಶಸ್ವಿನಿ ಆರೋಗ್ಯ ಯೋಜನೆಯನ್ನು ರದ್ದು ಮಾಡಿತ್ತು. ಈಗ ಇದೇ ಯೋಜನೆಗೆ ಮತ್ತೆ ಚಾಲನೆ ನೀಡುತ್ತಿದೆ ಸರಕಾರ.

ಹಿಂದಿನ ಯಶಸ್ವಿನಿ ಯೋಜನೆಯಡಿಯಲ್ಲಿ ವಾರ್ಷಿಕವಾಗಿ ಸಹಕಾರ ಗ್ರಾಮೀಣ ಸದಸ್ಯರು ರೂ.300 ಮತ್ತು ನಗರ ಪ್ರದೇಶದವರು ರೂ.710 ವಂತಿಗೆ ಪಾವತಿ ಮಾಡುವ ಕ್ರಮ ಇತ್ತು. ಈ ವಂತಿಗೆಯಲ್ಲಿ ರಾಜ್ಯ ಸರಕಾರ, ಎಸ್.ಸಿ ಎಸ್.ಟಿ ಸಮುದಾಯಗಳಿಗೆ ರೂ.250 ಹಾಗೂ ಇತರೆ ವರ್ಗಗಳಿಗೆ 50ರೂ. ಸಬ್ಸಿಡಿ ನೀಡುತ್ತಿತ್ತು. ಹಾಗೆನೇ ನೋಂದಾಯಿತ ರಾಜ್ಯದ ಯಾವುದೇ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಅವಕಾಶ ನೀಡಲಾಗಿತ್ತು.

ಈ ಯೋಜನೆ ವಿಶ್ವದ ಗಮನ ಸೆಳೆಯಲು ಕಾರಣವೊಂದಿದೆ. ಏನೆಂದರೆ ಕೇವಲ 300 ರೂಪಾಯಿ ವಂತಿಗೆಯಲ್ಲಿ ಹಲವು ಕಾಯಿಲೆಗಳಿಗೆ ಶಸ್ತ್ರ ಚಿಕಿತ್ಸೆ ನಡೆಸುವ ಈ ಯೋಜನೆ ಇದಾಗಿತ್ತು. ಆದರೆ, ಈಗಿನ ಯೋಜನೆಯಲ್ಲಿ ಹಳೆಯ ವಂತಿಗೆಯ ರೀತಿಯೇ ಮುಂದುವರಿಯುತ್ತೋ  ಅಥವಾ ವಂತಿಗೆ ಮೊತ್ತ ಹೆಚ್ಚಿಸುತ್ತಾರೋ ಎಂಬುದು ನಿರ್ಧಾರ ಆಗಬೇಕಷ್ಟೇ. ಈ ಯೋಜನೆಯಡಿಯಲ್ಲಿ ಈ ಹಿಂದೆ ಚಿಕಿತ್ಸೆಗೆ ಗುರುತಿಸಲಾಗಿದ್ದ ಕಾಯಿಲೆಗಳನ್ನು ಬಹುತೇಕ ಯಥಾವತ್ತಾಗಿ ಮುಂದುವರೆಸುವ ಸಾಧ್ಯತೆಯಿದೆ ಎನ್ನಲಾಗಿದೆ.

ಯಶಸ್ವಿನಿ ಯೋಜನೆ ಕುರಿತು ;

ಗ್ರಾಮೀಣ ಸಹಕಾರಿಗಳ ಆರೋಗ್ಯ ಸುರಕ್ಷತಾ ಯೋಜನೆ ಯಾವುದೇ ಸಹಕಾರ ಸಂಘದ ಸದಸ್ಯರು ಕನಿಷ್ಠ ಮೊತ್ತದ ಪ್ರಿಮಿಯಂ ಪಾವತಿಸಿ ತಮ್ಮ ಕುಟುಂಬದವರ ಹೆಸರು ನೋಂದಣಿ ಮಾಡಿಕೊಳ್ಳಬೇಕು. ಆಗ ಹಲವು ವಿಧದ ಶಸ್ತ್ರಚಿಕಿತ್ಸೆಗಳನ್ನು ಉಚಿತವಾಗಿ ಮಾಡಿಸಿಕೊಳ್ಳಬಹುದು.

ಗ್ರಾಮೀಣ ಸಹಕಾರ ಸಂಘ/ಬ್ಯಾಂಕ್ ಗಳೊಡನೆ ವ್ಯವಹರಿಸುತ್ತಿರುವ ಗ್ರಾಮೀಣ ಸ್ತ್ರೀ ಶಕ್ತಿ ಗುಂಪು, ಸ್ವ-ಸಹಾಯ ಗುಂಪಿನ ಸದಸ್ಯರು ಮತ್ತು ಅವರ ಕುಟುಂಬದ ಎಲ್ಲಾ ಸದಸ್ಯರು ಯೋಜನೆಯ ಫಲಾನುಭವಿಯಾಗಬಹುದು. 3 ತಿಂಗಳು ಮುಂಚಿತವಾಗಿ ಅರ್ಹ ಗ್ರಾಮೀಣ ಸಹಕಾರ ಸಂಘವೊಂದರ ಸದಸ್ಯರಾಗಿದ್ದರೆ ಯಶಸ್ವಿನಿ ಯೋಜನೆಯ ಫಲಾನುಭವಿಯಾಗಬಹುದು. 

ರೈತರಿಗೆ ಹೇಗೆ ಅನುಕೂಲ ಈ ಯೋಜನೆ?
ಈ ಯೋಜನೆಯ ಫಲಾನುಭವಿಯಾಗಿರುವ ರೈತರು ಖಾಸಗಿ ಆಸ್ಪತ್ರೆಗೆ ದಾಖಲಾಗಲು ಸರ್ಕಾರಿ ಆಸ್ಪತ್ರೆಯ ಅನುಮತಿಯ ಅಗತ್ಯವಿಲ್ಲ. ಇಲ್ಲಿ ಸಮಯದ ಉಳಿತಾಯವಾಗುವುದರ ಜೊತೆಗೆ ಉತ್ತಮ ಶಸ್ತ್ರ ಚಿಕಿತ್ಸೆ ಕೂಡಾ ದೊರಕುತ್ತದೆ. ನಗದು ರಹಿತ ಚಿಕಿತ್ಸೆಯು ರಾಜ್ಯದ ಬೃಹತ್ ಖಾಸಗಿ ಆಸ್ಪತ್ರೆಗಳಲ್ಲಿ ದೊರಕಲಿದೆ. ಹಾಗಾಗಿ ಯಾವುದೇ ಗಂಭೀರ ಕಾಯಿಲೆಗಳಿಗೆ ನಗದು ನೀಡಬೇಕಾದ ಸಂಕಷ್ಟದಿಂದ ಪಾರಾಗಬಹುದು.

Leave A Reply

Your email address will not be published.