ಮಾವಿನಕಾಯಿ ಕದ್ದು ಅಮಾನತು ಆದ ಕಳ್ಳ ಪೊಲೀಸ್ ಅಧಿಕಾರಿ!

ಪೊಲೀಸ್ ಅಂದರೇನೇ ಶಿಸ್ತುಗೆ ಬದ್ಧವಾಗಿರುವವರು. ಇನ್ನೊಬ್ಬರು ತಪ್ಪು ಕೆಲಸ ಮಾಡಿದಾಗ ಅದನ್ನ ತಿದ್ದಿ ಶಿಕ್ಷಿಸುವವರು ಅವರಾಗಿರುತ್ತಾರೆ. ಆದ್ರೆ, ಇಲ್ಲೊಂದು ಕಡೆ ಪೊಲೀಸ್ ಅಧಿಕಾರಿಯೇ ತಪ್ಪು ಹಾದಿ ಹಿಡಿದಿದ್ದಾರೆ.

ಹೌದು. ಮಾವಿನಕಾಯಿ ಕಳ್ಳ ಎಂಬ ಆರೋಪದ ಮೇಲೆ ಪೊಲೀಸ್ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ. ಇಂತಹದೊಂದು ಘಟನೆ ಕೇರಳದ ಕಂಜಿರಪಲ್ಲಿಯಲ್ಲಿ ನಡೆದಿದ್ದು, ಅಂಗಡಿಯೊಂದರಲ್ಲಿ ಶಿಹಾಬ್ ಎಂಬ ಅಧಿಕಾರಿ ಮಾವಿನ ಹಣ್ಣುಗಳನ್ನು ಕಳ್ಳತನ ಮಾಡಿದ್ದ. ಇವರು ಇಡುಕ್ಕಿಯಲ್ಲಿರುವ ಎಆರ್​ ಕ್ಯಾಂಪ್​ನಲ್ಲಿ ಸಿವಿಲ್​ ಪೊಲೀಸ್​ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಇದೀಗ ಮಾವಿನ ಕಾಯಿ ಕದ್ದ ಆರೋಪದಿಂದಾಗಿ ಪೊಲೀಸ್​ ಅಧಿಕಾರಿಯನ್ನು ಕೇರಳದ ಡಿಜಿಪಿ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಆದ್ರೆ, ಈತನನ್ನು ಅಮಾನತುಗೊಳಿಸಿದ ಮೇಲೆ ತಿಳಿದು ಬಂದಿದ್ದು, ಈತ ಕೇವಲ ಮಾವಿನಕಾಯಿ ಕಳ್ಳ ಅಲ್ಲ ಎಂಬುದು. ಯಾಕಂದ್ರೆ, ಈತನೊಬ್ಬ ಮಹಾ ಕಳ್ಳ ಅಧಿಕಾರಿ. ಹೌದು. ಆತನ ಹಿನ್ನೆಲೆಯನ್ನು ತಿಳಿದು ಹಿರಿಯ ಪೊಲೀಸ್​ ಅಧಿಕಾರಿಗಳೇ ದಂಗಾಗಿದ್ದಾರೆ. ಅಂತಹ ಕೆಲಸ ಏನು ಮಾಡಿದ್ದಾನೆ ಎಂಬುದು ಇಲ್ಲಿದೆ ನೋಡಿ.

ಮಾವಿನ ಹಣ್ಣುಗಳನ್ನು ಕದ್ದಿರುವ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಶಿಹಾಬ್​ ತಲೆಮರೆಸಿಕೊಂಡಿದ್ದು, ಅವರ ವಿರುದ್ಧ ಪೊಲೀಸರು ಪ್ರಕರಣವನ್ನು ದಾಖಲಿಸಿದ್ದಾರೆ. ಈ ವೇಳೆ, ಶಿಹಾಬ್​ ಅಪರಾಧ ಹಿನ್ನೆಲೆಯನ್ನು ಸಹ ಹೊಂದಿದ್ದಾರೆ ಎಂಬುದು ತಿಳಿದು ಬಂದಿದೆ. 2019ರಲ್ಲಿ ಕಂಜಿರಪಲ್ಲಿಯ ಜನರಲ್ ಹಾಸ್ಪಿಟಲ್​ನ ಮಹಿಳಾ ಉದ್ಯೋಗಿಯೊಬ್ಬರಿಗೆ ಮದುವೆ ಆಗುವುದಾಗಿ ನಂಬಿಸಿ, ಲೈಂಗಿಕವಾಗಿ ಬಳಸಿಕೊಂಡಿರುವ ಆರೋಪವಿದೆ. ಅಲ್ಲದೆ, ಜೈಲಿನಿಂದ ಹೊರಬಂದ ನಂತರ ಮಹಿಳೆಗೆ ಬೆದರಿಕೆ ಮತ್ತು ಹಲ್ಲೆಗೆ ಯತ್ನಿಸಿದ ಶಿಹಾಬ್ ವಿರುದ್ಧ ಮುಂಡಕ್ಕಯಂ ಪೊಲೀಸರು ದಾಖಲಿಸಿರುವ ಮತ್ತೊಂದು ಪ್ರಕರಣದ ವಿಚಾರಣೆ ನಡೆಯುತ್ತಿದೆ.

ಪೊಲೀಸ್​ ಕೆಲಸಕ್ಕೆ ಸೇರುವ ಮುನ್ನ ಅಂದರೆ, 2007ರಲ್ಲಿ ವ್ಯಕ್ತಿಯೊಬ್ಬರ ಮನೆಗೆ ನುಗ್ಗಿ ಹಲ್ಲೆ ಮಾಡಿದ್ದ ಆರೋಪದ ಮೇಲೆಯೂ ಶಿಹಾಬ್​ ವಿರುದ್ಧ ಕೇಸು ದಾಖಲಾಗಿತ್ತು. ಇದಿಷ್ಟೇ ಅಲ್ಲದೇ ಗಣಿಗಾರಿಕೆ ಮಾಫಿಯಾಗಳ ಸಂಪರ್ಕ, ಶಬರಿಮಲೆಯಲ್ಲಿ ವಿಐಪಿ ದರ್ಶನ ಆಮಿಷವೊಡ್ಡಿ ಭಕ್ತರಿಂದ ಹಣ ವಸೂಲಿ, ಕರ್ತವ್ಯವಿಲ್ಲದ ವೇಳೆ ಸಮವಸ್ತ್ರ ಧರಿಸಿ ಸ್ಥಳೀಯರಿಂದ ಹಣ ವಸೂಲಿ ಮುಂತಾದ ಪ್ರಕರಣಗಳು ದಾಖಲಾಗಿವೆ.

ಆದ್ರೆ, ಇಲ್ಲಿ ಬಹುದೊಡ್ಡ ಪ್ರಶ್ನೆಯಾಗಿ ಉಳಿದಿರುವುದೇ ಈತನ ಹುದ್ದೆ ಬಗ್ಗೆ. ಇಷ್ಟೊಂದು ಅಪರಾಧದ ಹಿನ್ನೆಲೆ ಇದ್ದರೂ ಈತನಿಗೆ ಹೇಗೆ ಕೆಲಸ ಸಿಕ್ಕಿತು ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಅಲ್ಲದೆ, ಈತನ ವಿರುದ್ಧ ಹಲವು ದೂರುಗಳು ಬಂದಿದ್ದರೂ ಉನ್ನತ ಮಟ್ಟದ ಪ್ರಭಾವದಿಂದ ಯಾವುದೇ ಕ್ರಮ ಕೈಗೊಂಡಿಲ್ಲ. ಒಟ್ಟಾರೆ, ಈ ಮಾವಿನಕಾಯಿ ಕಳ್ಳನಿಗೆ ದೊಡ್ಡ ಮಟ್ಟದ ಕೈವಾಡವೆ ಇದೆ ಎಂದರೆ ತಪ್ಪಾಗಲಾರದು…

Leave A Reply

Your email address will not be published.