ಹಣ್ಣಿನ ವ್ಯಾಪಾರಿ ಶಂಕಿತ ಉಗ್ರ ಶಬೀರ್ ಅರೆಸ್ಟ್ | ಚುರುಕುಗೊಂಡ ತನಿಖೆ, ಮಹತ್ತರ ಮಾಹಿತಿ ಲಭ್ಯ

ಕೆಲವೊಂದು ದಿನದಿಂದ ಭಾರೀ ಚುರುಕುಗೊಂಡ ಶಂಕಿತ ಉಗ್ರರ ಸೆರೆ ಪ್ರಕರಣದಲ್ಲಿ ಈಗ ಮತ್ತೋರ್ವನ ಬಂಧನವಾಗಿದೆ. ಇತ್ತೀಚಿಗಷ್ಟೇ ಶಂಕಿತ ಉಗ್ರರಾದ ಮಾಜ್, ಯಾಸೀನ್ ಬಂಧನ ಮಾಡಲಾಗಿತ್ತು. ಈಗ ಈ ಪ್ರಕರಣಕ್ಕೆ ಸಂಬಂಧಿಸಿ ಶಂಕಿತ ಉಗ್ರರ ಜೊತೆ ಸಂಪರ್ಕ ಹೊಂದಿದ್ದ ಶಬೀರ್‌ನನ್ನು ಶಿವಮೊಗ್ಗ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದ, ಹಣ್ಣಿನ ವ್ಯಾಪಾರ ಮಾಡುತ್ತಿದ್ದ ಆರೋಪಿ ಶಬೀರ್ ಅರೆಸ್ಟ್ ಆಗಿದ್ದಾನೆ. ಈತ ಗಂಗಾವತಿಯ ಬನ್ನಿಗಿಡ ಕ್ಯಾಂಪ್‌ನಲ್ಲಿ ಹೋಲ್ ಸೇಲ್ ಹಣ್ಣಿನ ಅಂಗಡಿ ಇಟ್ಟುಕೊಂಡಿದ್ದು, ಹಣ್ಣಿನ ವ್ಯಾಪಾರದ ನೆಪದಲ್ಲಿ ಶಂಕಿತರೊಂದಿಗೆ ಸಂಪರ್ಕ ಹೊಂದಿರುವ ಅನುಮಾನ ವ್ಯಕ್ತವಾಗಿದೆ.

ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಶಂಕಿತ ಉಗ್ರನ ಬಂಧನಕ್ಕೆ ಸಂಬಂಧಿಸಿ ಗಂಗಾವತಿ ಪಟ್ಟಣದಲ್ಲಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿದ್ದು, ಇನ್ನೂ ಕೆಲವು ಶಂಕಿತ ಉಗ್ರರು ಇರುವ ಅನುಮಾನ ಇದೆ. ಶಂಕಿತ ಉಗ್ರ ಬಂಧನದಿಂದ ಜನರು ಭಯಭೀತರಾಗಿದ್ದಾರೆ. ಉನ್ನತ ತನಿಖಾ ತಂಡ ತನಿಖೆ ನಡೆಸಬೇಕು. ಶಾಂತಿ ಕದಡುವ ನಿಟ್ಟಿನಲ್ಲಿ ದುಷ್ಕೃತ್ಯ ಎಸಗುವ ಸಾಧ್ಯತೆ ಇದೆ. ಪೊಲೀಸ್ ಇಲಾಖೆ ವಿಶೇಷ ಕಾರ್ಯಾಚರಣೆ ಮಾಡಬೇಕು. ರಾಷ್ಟ್ರೀಯ ತನಿಖಾ ದಳದಿಂದ ಸಮಗ್ರ ತನಿಖೆ ಮಾಡಬೇಕು ಎಂದು ಆಗ್ರಹಿಸಿದರು. ಶಿವಮೊಗ್ಗ ಗ್ರಾಮಾಂತರ ಠಾಣೆ ಪೊಲೀಸರು ಮತ್ತು ದೆಹಲಿಯಿಂದ ಬಂದಿರೋ RAW ಅಧಿಕಾರಿಗಳು ಶಂಕಿತರ ವಿಚಾರಣೆ ನಡೆಸಿದ್ದಾರೆ.

ಕೆಲ ದಿನಗಳ ಹಿಂದೆ ಶಂಕಿತರಾದ ಮಾಜ್ ಮತ್ತು ಸೈಯದ್ ಯಾಸೀನ್ ಮೊಬೈಲ್ ಹುಡುಕಾಡಿದಾಗ ಪಾಕಿಸ್ತಾನದ ಲಿಂಕ್ ಇರೋ ಬಗ್ಗೆ ಅನುಮಾನ ವ್ಯಕ್ತವಾಗಿತ್ತು. ಶಿವಮೊಗ್ಗದಲ್ಲಿ ಬಂಧಿತರಾದ ಶಂಕಿತ ಉಗ್ರರ ತನಿಖೆ ತೀವ್ರಗೊಂಡಿದೆ.
ಹೀಗಾಗಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಪಾಕಿಸ್ತಾನದ ಟೆರರ್ ಲಿಂಕ್ ಏನಾದರೂ ಶಂಕಿತ ಉಗ್ರ ಯಾಸೀನ್‌ಗೆ ಇದೆಯಾ ಎಂಬ ಅನುಮಾನ ಈಗ ವ್ಯಕ್ತವಾಗುತ್ತಿದೆ. ಬಂಧಿತ ಯಾಸೀನ್ ನ ಮೊಬೈಲ್ ನಲ್ಲಿ ಸ್ಫೋಟಕ ಮಾಹಿತಿ ಬಹಿರಂಗವಾಗಿದ್ದು, ಅದರಲ್ಲಿ ಪಾಕ್‌ಗೆ ಹೋಗಿ ಬಂದಿರುವ ಶಂಕೆ ವ್ಯಕ್ತವಾಗಿದೆ. ಅಷ್ಟು ಮಾತ್ರವಲ್ಲದೇ, ಸಾಮಾಜಿಕ ಜಾಲತಾಣದಲ್ಲಿ ಇದೇ ಯಾಸೀನ್ ಪಾಕ್ ಬಗ್ಗೆಯೇ ಹೆಚ್ಚಾಗಿ ಸರ್ಚ್ ಮಾಡಿದ್ದು, ಹಾಗಾಗಿ ಪಾಕಿಸ್ತಾನಕ್ಕೆ ಹೋಗಿ ಬಂದಿರೋ ಅನುಮಾನ ವ್ಯಕ್ತವಾಗಿದೆ.

ಶಂಕಿತ ಉಗ್ರರಾದ ಮಾಜ್ ಮತ್ತು ಯಾಸೀನ್
ಮೊಬೈಲ್ ಶೋಧಿಸಿದಾಗ ಕೇವಲ ವಿದೇಶಿ ಆ್ಯಪ್‌ಗಳೇ ಇರೋದು ಕಂಡು ಬಂದಿದೆ. ಅಷ್ಟು ಮಾತ್ರವಲ್ಲದೇ, ಬಾಂಬ್ ಟ್ರಯಲ್ ಬ್ಲಾಸ್ಟ್‌ಗೆ ಸ್ಫೋಟಕ ಮದ್ದು ಸಿಗದ ಕಾರಣ, ಇವರು ಬೆಂಕಿ ಪೊಟ್ಟಣದ ಮದ್ದನ್ನೇ ಬಳಸಿರುವ ಬಗ್ಗೆ ವರದಿಯಾಗಿದೆ. ಇದಕ್ಕಾಗಿ ಶಿವಮೊಗ್ಗದ ಗಾಂಧಿ ಬಜಾರ್‌ನಲ್ಲಿರೋ ರಾಮದೇವ ಪ್ರಾವಿಜನ್ ಸ್ಟೋರ್ ಹೋಗಿದ್ದ ಯಾಸೀನ್ ಬೆಂಕಿಪೊಟ್ಟ ಖರೀದಿಸಿದ್ದನಂತೆ. ಹಾಗಾಗಿ ಈ ಪ್ರಾವಿಜನ್ ಸ್ಟೋರ್‌ಗೆ ಪೊಲೀಸರು ಕರೆತಂದು ಮಹಜರು ನಡೆಸಿದ್ದಾರೆ.

Leave A Reply

Your email address will not be published.