ಚಲಿಸದ ವಾಹನದಲ್ಲಿ ಕುಳಿತಿದ್ದರೂ ಸಾಕು, ಸತ್ತರೆ ವಿಮೆ ಕೊಡಲೇ ಬೇಕು – ಹೈಕೋರ್ಟ್ ನೀಡಿದೆ ತೀರ್ಪು

ಲಾರಿ ಚಾಲಕ ಹೃದಯಾಘಾತದಿಂದ ಮೃತಪಟ್ಟ ಪ್ರಕರಣದಲ್ಲಿ , ಪರಿಹಾರ ನೀಡಲು ನಿರಾಕರಿಸಿದ ವಿಮಾ ಕಂಪನಿಯ ದೂರನ್ನು ತಿರಸ್ಕೃತಗೊಳಿಸಿರುವ ಹೈಕೋರ್ಟ್ ವರ್ಕ್‌ಮನ್ಸ್ ಕಮಿಷನ್​​ ಚಾಲಕನ ಕುಟುಂಬಕ್ಕೆ ಪರಿಹಾರ ನೀಡಲು ಆದೇಶಿಸಿ, ಕೆಲಸಗಾರರ ದ್ವನಿಯಾಗಿ ಬೆಂಬಲವಾಗಿ ನಿಂತಿದೆ. ವಿಮೆ ಹೊಂದಿರುವ ವಾಹನ ನಿಂತಿದ್ದಾಗ , ಹಠಾತ್ತನೆ ಚಾಲಕ ಹೃದಯಾಘಾತದಿಂದ ಸಾವನ್ನಪ್ಪಿದ್ದು, ಇವರ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.

ಲಾರಿ ಚಾಲಕರಾಗಿದ್ದ ಈರಣ್ಣ ಎಂಬುವರು ಸುರತ್ಕಲ್ ಸಮೀಪದ ಇದ್ಯಾ ಗ್ರಾಮದ ಬಳಿ ಲಾರಿ ನಿಲ್ಲಿಸಿ ವಾಹನದಲ್ಲಿಯೇ ಇದ್ದಾಗ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ. ಹಾಗಾಗಿ, ಮೃತರ ಅಪ್ರಾಪ್ತ ಮಕ್ಕಳು ಪರಿಹಾರ ಕೋರಿ ವಿಮಾ ಕಂಪನಿ ವಿರುದ್ಧ ವರ್ಕ್‌ಮನ್ಸ್ ಕಾಂಪೋನ್ಸೇಷನ್ ಕಮಿಷನರ್ ಎದುರು ಅರ್ಜಿ ಸಲ್ಲಿಸಿದ್ದಾರೆ.
2009ರಲ್ಲಿ ಅರ್ಜಿ ವಿಚಾರಣೆ ನಡೆಸಿದ ವರ್ಕ್‌ಮನ್ಸ್ ಕಾಂಪೋನ್ಸೇಷನ್ ಕಮಿಷನ್ ಆಯುಕ್ತರು, ಮೃತರಾದ ಚಾಲಕನ ಉತ್ತರಾಧಿಕಾರಿಗಳಿಗೆ ಶೇ.12ರ ಬಡ್ಡಿ ಸಹಿತ 3.30 ಲಕ್ಷ ರೂ. ಪರಿಹಾರ ನೀಡುವಂತೆ ವಿಮಾ ಕಂಪನಿಗೆ ಆದೇಶ ನೀಡಿದ್ದಾರೆ. ಆದರೆ, ಈ ಆದೇಶವನ್ನು ಪ್ರಶ್ನಿಸಿರುವ ವಿಮಾ ಕಂಪನಿಯು ಹೈಕೋರ್ಟ್​​ನಲ್ಲಿ ಮೇಲ್ಮನವಿ ಸಲ್ಲಿಸಿ, ಚಾಲಕ ಹೃದಯಾಘಾತವಾದಾಗ ವಾಹನ ಚಾಲನೆ ಮಾಡುತ್ತಿರಲಿಲ್ಲ. ಹೀಗಾಗಿ, ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ವಾದ ಮಂಡಿಸಿದೆ.
ಇದಲ್ಲದೆ ನ್ಯಾಷನಲ್ ಇನ್ಶುರೆನ್ಸ್ ಕಂಪನಿಯ ವಿಭಾಗೀಯ ವ್ಯವಸ್ಥಾಪಕರು ಮೇಲ್ಮನವಿ ಅರ್ಜಿ ಸಲ್ಲಿಸಿ ಪರಿಹಾರ ನೀಡಲು ನಿರಾಕರಿಸಿದೆ. ಈ ಅರ್ಜಿಯನ್ನು ವಜಾ ಮಾಡಿರುವ ನ್ಯಾ. ಹೆಚ್.ಪಿ. ಸಂದೇಶ್ ಅವರಿದ್ದ ಏಕಸದಸ್ಯ ಪೀಠ, ಚಾಲಕನ ಕುಟುಂಬಕ್ಕೆ ಪರಿಹಾರ ನೀಡಲು ಆದೇಶಿಸಿದೆ.

ವಿಮಾ ಕಂಪನಿ ಚಾಲಕ ಕರ್ತವ್ಯದಲ್ಲಿ ಸಾವನ್ನಪ್ಪಿದ್ದರೂ ಆತ ಮಾದಕ ದ್ರವ್ಯ ಸೇವಿಸುತ್ತಿದ್ದನೆಂದು ಆರೋಪಿಸಿದೆ.ಆದರೆ, ಪ್ರಕರಣಕ್ಕೆ ಕುರಿತಾದ ದಾಖಲೆಗಳನ್ನು ಪರಿಶೀಲಿಸಿದ ಬಳಿಕ, ಚಾಲಕ ಮದ್ಯಪಾನ ಮಾಡಿದ್ದ ಎಂಬುದಕ್ಕೆ ಪುರಾವೆ ಗಳನ್ನು ನೀಡಿಲ್ಲ ಜೊತೆಗೆ ಮರಣೋತ್ತರ ಪರೀಕ್ಷೆಯಲ್ಲಿಯೂ ಕೂಡ ಈ ಅಂಶದ ಉಲ್ಲೇಖವಾಗಿಲ್ಲವೆಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಹೀಗಾಗಿ ಚಾಲಕನದ್ದು ಸಹಜ ಸಾವು, ಹಾಗಾಗಿ ಪರಿಹಾರ ನೀಡುವುದಿಲ್ಲ ಎಂಬ ವಿಮಾ ಕಂಪನಿಯ ಮಾತನ್ನು ಒಪ್ಪಲಾಗದು ಎಂದು ತಿಳಿಸಿದೆ. ಚಾಲಕ ಕರ್ತವ್ಯದಲ್ಲಿ ಇರುವಾಗಲೇ ಸಾವನ್ನಪ್ಪಿ ರುವುದರಿಂದ, ಚಾಲಕ ಕೆಲಸದ ಒತ್ತಡದಿಂದಲೇ ಹೃದಯಾಘಾತಕ್ಕೀಡಾಗಿ ಸಾವನ್ನಪ್ಪಿದ್ದಾರೆಂದು ಮನೆಯವರು ತಿಳಿಸಿದ್ದಾರೆ. ಈ ಕಾರಣದಿಂದ ವಿಮಾ ಕಂಪನಿ ಚಾಲಕನ ಉತ್ತರಾಧಿಕಾರಿಗೆ ಪರಿಹಾರ ನೀಡಲೇಬೇಕು ಎಂದು ನ್ಯಾಯಪೀಠ ಆದೇಶ ನೀಡಿ ವರ್ಕ್‌ಮನ್ಸ್ ಕಮಿಷನ್​​ ಆದೇಶವನ್ನು ಎತ್ತಿ ಹಿಡಿದಿದೆ.

Leave A Reply

Your email address will not be published.