ಎಂಟು ವರ್ಷಗಳ ಅಷ್ಟಮಿ ವೇಷಕ್ಕೆ ಕಟಪಾಡಿ ವಿದಾಯ!! ಒಂದು ಕೋಟಿ ದೇಣಿಗೆ ಸಂಗ್ರಹಿಸಿದ ನಿಸ್ವಾರ್ಥಿ ರವಿಯಣ್ಣನ ನಿರ್ಧಾರಕ್ಕೆ ಕಾರಣವೇನು!?

ಕಳೆದ ಏಳೆಂಟು ವರ್ಷಗಳಿಂದ ಅಷ್ಟಮಿ ಸಂದರ್ಭ ವಿಶೇಷ ವೇಷಧರಿಸಿ ಅಸಹಾಯಕ ಸ್ಥಿತಿಯಲ್ಲಿರುವ ಮಕ್ಕಳ ಕುಟುಂಬಕ್ಕೆ, ಮಕ್ಕಳ ಆರೋಗ್ಯದ ಖರ್ಚು ವೆಚ್ಚಕ್ಕಾಗಿ ಹಣ ಹೊಂದಿಸಿ ಕೊಡುತ್ತಾ, ತನಗಾಗಿ ಏನನ್ನೂ ಮಾಡದೆ ಎಲ್ಲವನ್ನೂ ಸಮಾಜಕ್ಕೆ ಅರ್ಪಿಸಿದ ನಿಷ್ಕಲ್ಮಶ ಮನಸ್ಸಿನ, ನಿಸ್ವಾರ್ಥಿ ರವಿ ಕಟಪಾಡಿ ತನ್ನ ಅಷ್ಟಮಿ ವೇಷಕ್ಕೆ ವಿದಾಯ ಸೂಚಿಸಿದ್ದಾರೆ.

ತನ್ನ ವಿಭಿನ್ನ ಶೈಲಿಯ ವೇಷಗಳಿಂದ ಪ್ರೇಕ್ಷಕರನ್ನು ರಂಜಿಸಿ, ಆ ಮೂಲಕ ಅವರಿಂದ ಸಂಗ್ರಹವಾದ ದೇಣಿಗೆಯನ್ನು ಬಡಮಕ್ಕಳ ಚಿಕಿತ್ಸೆಗೆ ವಿನಿಯೋಗಿಸಿ, ದೇಶ ವಿದೇಶಗಳಲ್ಲಿ ಚಿರಪರಿಚಿತರಾಗಿರುವ ರವಿಯಣ್ಣ ವೇಷಕ್ಕೆ ವಿದಾಯ ಸೂಚಿಸಿರುವುದು ಎಲ್ಲರಲ್ಲೂ ಬೇಸರ ಮೂಡಿಸಿದೆ ಎನ್ನುವ ಮಾತುಳು ಕಳೆದ ಒಂದು ವಾರದಿಂದ ಕೇಳಿಬರುತ್ತಿದೆ.

ಕಳೆದ ಏಳು ವರ್ಷಗಳಲ್ಲಿ ಒಟ್ಟು 60 ಮಕ್ಕಳ ಚಿಕಿತ್ಸೆಗೆ ನೆರವಾಗಿದ್ದು,ಈ ಬಾರಿಯ ಅಷ್ಟಮಿಯಲ್ಲಿ ಡೀಮನ್ ರಾಕ್ಷಸ ವೇಷ ಧರಿಸಿ 10 ಲಕ್ಷ ಸಂಗ್ರಹಿಸಿದ್ದಾರೆ.

ಆಗಸ್ಟ್ 30ರಂದು ಸಂಗ್ರಹವಾದ ಹಣವನ್ನು ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ 8 ಮಕ್ಕಳಿಗೆ ವಿತರಿಸಲಿದ್ದು, ಈ ವರೆಗೆ ಒಟ್ಟು ಒಂದು ಕೋಟಿ ಹಣ ಸಂಗ್ರಹಿಸಿ ಬಡವರ ಕಣ್ಣೀರು ಒರೆಸುವಲ್ಲಿ ಕೈಜೋಡಿಸಿದ ಕೀರ್ತಿ ರವಿ ಕಟಪಾಡಿಗೆ ಸಲ್ಲುತ್ತದೆ.

ಇದು ಅವರ ಕೊನೆಯ ವೇಷವಾಗಿರಲಿದ್ದು, ದೇವರಿಗೆ ಪ್ರಿಯವಾದ ಕೆಲಸ ಮಾಡಿದ ರವಿ ಕಟಪಾಡಿ ಮುಂದಿನ ಅಷ್ಟಮಿಯಲ್ಲಿ ವೇಷ ಧರಿಸುವುದಿಲ್ಲ ಎಂದು ಹೇಳಿಕೆ ನೀಡಿದ್ದು ಸದ್ಯ ಅಪಾರ ಅಭಿಮಾನಿಗಳ ಬೇಸರಕ್ಕೂ ಕಾರಣವಾಗಿದೆ ಎನ್ನಲಾಗಿದೆ.

Leave A Reply

Your email address will not be published.