ಬಿಜೆಪಿ ವ್ಯಾಪಾರಿ ಪ್ರಕೋಷ್ಠದ ಜಿಲ್ಲಾ ಸಂಚಾಲಕ ಜಗನ್ನಾಥ ಶೆಟ್ಟಿ ಅವರ ಹನಿಟ್ರ್ಯಾಪ್ ಪ್ರಕರಣ : ಆರೋಪಿ ಸಲ್ಮಾ ಬಾನು ಪೊಲೀಸ್ ವಶಕ್ಕೆ

ಮಂಡ್ಯ :ಮಂಡ್ಯದ ಲಾಡ್ಜ್ ನಲ್ಲಿ ಯುವತಿಯ ಜತೆಗಿದ್ದ ವೀಡಿಯೋವನ್ನು ಚಿತ್ರೀಕರಿಸಿಕೊಂಡು ಉದ್ಯಮಿಯಿಂದ ಸುಮಾರು 50 ಲಕ್ಷ ರೂ. ಪಡೆದಿರುವ ಆರೋಪದಲ್ಲಿ ಮಹಿಳೆಯೊಬ್ಬರನ್ನು ನಗರದ ಪೊಲೀಸರು ಬಂಧಿಸಿದ್ದಾರೆ.

ಮಂಡ್ಯದ ವಿವಿ ರಸ್ತೆಯಲ್ಲಿರುವ ಶ್ರೀನಿಗೋಲ್ಡ್‌ನ ಮಾಲಕ ಹಾಗೂ ಬಿಜೆಪಿ ವ್ಯಾಪಾರಿ ಪ್ರಕೋಷ್ಠದ ಜಿಲ್ಲಾ ಸಂಚಾಲಕ ಜಗನ್ನಾಥ್‌ ಎಸ್‌. ಶೆಟ್ಟಿ ವಂಚನೆಗೆ ಒಳಗಾದವರು. ಮಂಡ್ಯದ ಸುಭಾಷ್‌ ನಗರದ 8ನೇ ಕ್ರಾಸ್‌ ನಿವಾಸಿ ಕಾಂಗ್ರೆಸ್ ಮುಖಂಡೆ ಸಲ್ಮಾಬಾನು ಹಾಗೂ ಜಯಂತ್‌ ಆರೋಪಿಗಳಾಗಿದ್ದಾರೆ. ಪೊಲೀಸರು ಸಲ್ಮಾ ಬಾನುಳನ್ನು 10 ದಿನಗಳ ಕಾಲ ಕಸ್ಟಡಿಗೆ ಪಡೆದುಕೊಂಡಿದ್ದಾರೆ.

ಪ್ರಕರಣದ ವಿವರ
2022ರ ಫೆ. 26ರಂದು ರಾತ್ರಿ 10.45ರ ಸುಮಾ ರಿಗೆ ಮೈಸೂರಿಗೆ ತೆರಳಲು ಮಂಡ್ಯದ ಸಾರಿಗೆ ಬಸ್‌ ನಿಲ್ದಾಣದಲ್ಲಿ ಜಗನ್ನಾಥ್‌ ಎಸ್‌. ಶೆಟ್ಟಿ ನಿಂತಿದ್ದಾಗ ಆರೋಪಿಗಳಾದ ಸಲ್ಮಾಬಾನು ಹಾಗೂ ಜಯಂತ್‌ ಸೇರಿ ಇತರರು ಕಾರಿನಲ್ಲಿ ಬಂದು ಪರಿಚಯ ಮಾಡಿಕೊಂಡು ತಾವು ಮೈಸೂರಿಗೆ ತೆರಳುತ್ತಿದ್ದು, ಬನ್ನಿ ಎಂದು ಹತ್ತಿಸಿಕೊಂಡಿದ್ದಾರೆ.

ಅನಂತರ ನಮ್ಮ ಸ್ನೇಹಿತ ಮೈಸೂರಿನ ದರ್ಶನ್‌ ಲಾಡ್ಜ್ ನಲ್ಲಿ ಚಿನ್ನದ ಬಿಸ್ಕೆಟ್‌ ತಂದಿದ್ದಾನೆ. ಅದನ್ನು ಪರೀಕ್ಷಿಸಿ ಅಸಲಿಯೇ, ನಕಲಿಯೇ ಎಂದು ತಿಳಿದು ಹೇಳಿ ಎಂದು ತಿಳಿಸಿದ್ದಾರೆ.

ನಾನು ಮಂಗಳೂರಿಗೆ ಹೋಗಬೇಕು. ಸಮಯ ಇಲ್ಲ ಎಂದಾಗ, 5 ನಿಮಿಷ ಬನ್ನಿ ಎಂದು ದರ್ಶನ್‌ ಲಾಡ್ಜ್ಗೆ ಕರೆದೊಯ್ದರು. ರೂಮಿಗೆ ಬಂದ ಬಳಿಕ ಆರೋಪಿಗಳು ನಾಪತ್ತೆಯಾಗಿದ್ದರು. ಸ್ವಲ್ಪ ಹೊತ್ತಿನಲ್ಲಿ ರೂಮಿಗೆ 22ರಿಂದ 25 ವರ್ಷದ ಯುವತಿ ಬಂದಿದ್ದಳು. ಕೆಲವೇ ನಿಮಿಷಗಳಲ್ಲಿ ಸಲ್ಮಾಬಾನು, ಜಯಂತ್‌ ಹಾಗೂ ಇತರರು ಬಂದು, ನೀನು ಯುವತಿಯೊಂದಿಗೆ ಇರುವ ವೀಡಿಯೋ ಚಿತ್ರೀಕರಿಸಿಕೊಂಡಿದ್ದೇವೆ. ನಮಗೆ 4 ಕೋಟಿ ರೂ. ನೀಡಬೇಕು ಎಂದು ಹೇಳಿ ಹಲ್ಲೆ ನಡೆಸಿದರು. ಅನಂತರ ನಾನು 50 ಲಕ್ಷ ರೂ. ಕೊಡುವುದಾಗಿ ಒಪ್ಪಿಕೊಂಡು ಮಾರನೇ ದಿನ ಬೆಳಗ್ಗೆ 10 ಗಂಟೆಗೆ 25 ಲಕ್ಷ ರೂ. ಕೊಟ್ಟಿದ್ದೇನೆ. ಬಳಿಕ ಇದುವರೆಗೂ ಒಟ್ಟು 50 ಲಕ್ಷ ರೂ.ಗಳನ್ನು ಪಡೆದುಕೊಂಡಿದ್ದಾರೆ. ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟ ಕಾರಣ ದೂರು ನೀಡಿದ್ದೇನೆಂದು ಜಗನ್ನಾಥ್‌ ತಿಳಿಸಿದ್ದಾರೆ.

ಸಲ್ಮಾಬಾನು, ಜಯಂತ್‌ ಸಹಿತ ಇತರ ಆರೋಪಿಗಳು ಹಲವು ಪ್ರಕರಣಗಳಲ್ಲಿ ಭಾಗಿಯಾಗಿ ದ್ದಾರೆ ಎಂದು ತಿಳಿದು ಬಂದಿದೆ.

Leave A Reply

Your email address will not be published.