ಇಸ್ಲಾಂಗೆ ಮತಾಂತರಗೊಂಡ ಹಿಂದೂ ಅರ್ಚಕ | ‘ ಮುಂಜಿ ‘ ಗೆ ಹೆದರಿ ಘರ್ ವಾಪ್ಸಿ ಆದ ವಿಚಿತ್ರ ಪ್ರಕರಣ !!!

ಹಿಂದೂ ಧರ್ಮದ ಅರ್ಚಕರೊಬ್ಬರು ಏಕಾಏಕಿ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ತುಮಕೂರು ತಾಲ್ಲೂಕು ಊರ್ಡಿಗೆರೆ ಹೋಬಳಿ ಹಿರೇಹಳ್ಳಿ ಗ್ರಾಮದ ಓಂಕಾರೇಶ್ವರ ದೇವಾಲಯದ ಅರ್ಚಕ ದಿ.ರೇಣುಕಾರಾದ್ಯ ಎಂಬುವರ ಪುತ್ರ ಎಚ್.ಆರ್ ಚಂದ್ರಶೇಖರಯ್ಯ ಉರುಫ್ ಮಂಜಣ್ಣ ಎಂಬುವವರು ಹಿಂದೂ ಧರ್ಮವನ್ನು ತ್ಯಜಿಸಿ, ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಮತಾಂತರಗೊಂಡಿರುವ ಎಚ್.ಆರ್.ಚಂದ್ರಶೇಖರಯ್ಯ ಅವರು ತಮ್ಮ ಹೆಸರನ್ನು ಮುಬಾರಕ್ ಪಾಷಾ ಎಂದು ಬದಲಾಯಿಸಿಕೊಂಡಿದ್ದಾರೆ.

ತಾವು ಹಲವಾರು ಸಮಸ್ಯೆಗಳ ಕಾರಣದಿಂದ ಆಗಸ್ಟ್ 18, 2022ರಂದು ತಮ್ಮ ಸ್ವ ಇಚ್ಛೆಯಿಂದ ಮತಾಂತರಗೊಂಡಿರುವುದಾಗಿ ಚಂದ್ರಶೇಖರಯ್ಯ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿಕೊಂಡಿದ್ದಾರೆ.

ಈ ವಿಷಯ ಮಾಜಿ ಸಚಿವ ಸೊಗಡು ಶಿವಣ್ಣ ಅವರ ಗಮನಕ್ಕೆ ಬಂದಿದ್ದು, ಅವರನ್ನು ತಮ್ಮ ಕಚೇರಿಗೆ ಕರೆಸಿಕೊಂಡು ಬುದ್ಧಿವಾದ ಹೇಳಿದ್ದರು. ಹುಟ್ಟಿನಿಂದ ಬಂದ ಆಯಾ ಧರ್ಮದ ಮಹತ್ವವನ್ನು ವಿವರಿಸಿದ್ದರು. ತದನಂತರ ಅವರು  ವ್ಯಾಸರಾಯ ಮಠದ ವಿದ್ಯಾಶ್ರೀಶ ತೀರ್ಥರ ಬಳಿ ಮಂತ್ರಾಕ್ಷತೆ ಕೊಡಿಸುವುದರ ಮುಖಾಂತರ ಮತ್ತೆ ಆ ಅರ್ಚಕರನ್ನು ಮಾತೃ ಧರ್ಮಕ್ಕೆ ಮರಳಿ ಕರೆತಂದಿದ್ದಾರೆ. ಹಾಗೆ ಧರ್ಮಾಂತರಗೊಂಡ ಎರಡು ದಿನಗಳಲ್ಲಿ ಅರ್ಚಕರು ಮತ್ತೆ ಹಿಂದು ಧರ್ಮಕ್ಕೆ ವಾಪಸ್ ಆಗಿದ್ದಾರೆ.

ಇದೀಗ ಬಂದ ಸುದ್ದಿ:
ಆ ಅರ್ಚಕರು ಮುಂಜಿಗೆ ಹೆದರಿ ‘ಘರ್ ವಾಪ್ಸಿ’ (ಮರಳಿ ಹಿಂದೂ ಧರ್ಮಕ್ಕೆ) ಅವರು ಮಾಡಿದ್ದಾರೆ ಎನ್ನಲಾಗಿದೆ. ಅರ್ಚಕರಿಗೆ ಸಕ್ಕರೆ ಕಾಯಿಲೆ ಇರುವುದರಿಂದ ಮುಂಜಿ ಮಾಡಿಸಿಕೊಳ್ಳಲು ಆಗುವುದಿಲ್ಲ. ಮುಂಜಿ ಮಾಡಿದರೆ, ಒಂದು ವೇಳೆ ಗಾಯ ವಾಸಿಯಾಗದೆ ಇದ್ದರೆ ಎಂಬ ಭಯ ಉಂಟಾಗಿದೆ. ಮುಂಜಿ ಮಾಡಿದರೆ ಮಾತ್ರ ಮುಸ್ಲಿಮರಲ್ಲಿ ಸರಿಯಾಗಿ ಶವ ಸಂಸ್ಕಾರ ಮಾಡುವುದು, ಎಂದು ಚಂದ್ರಶೇಖರಯ್ಯ ತಿಳಿಸಿದ್ದಾರೆ. ಮುಂಜಿಗೆ ಹೆದರಿ ಹಾಗೆ ಹಿಂದೂ ಧರ್ಮವನ್ನು ಬಿಟ್ಟು ಹೋದ ಅರ್ಚಕರು ಘರ್ ವಾಪ್ಸಿ ಆಗಿದ್ದಾರೆ.

ಏನಿದು ಮುಸ್ಲಿಂ ಮುಂಜಿ?

ಇಸ್ಲಾಂನ ಸುನ್ನತಿ ಪ್ರಕ್ರಿಯೆಯನ್ನು ಕರ್ನಾಟಕದಲ್ಲಿ ಮುಂಜಿ ಎಂದು ಕರೆಯಲಾಗುತ್ತಿದೆ. ಧಾರ್ಮಿಕ ರಿವಾಜುಗಳ ಪ್ರಕಾರ, ಪುರುಷರ ಶಿಶ್ನದ ಮುಂದೊಗಲನ್ನು ಭಾಗಶಃ ಅಥವಾ ಸಂಪೂರ್ಣವಾಗಿ ತೆಗೆಯುವ ಪ್ರಕ್ರಿಯೆ ಇದು. ಮುಸ್ಲಿಮರು ಇದನ್ನು ನೈರ್ಮಲ್ಯ ಮತ್ತು ಶುಚಿತ್ವದ (ತಾಹರ) ಭಾಗವಾಗಿ ಪರಿಗಣಿಸುತ್ತಾರೆ. ಹೊಸದಾಗಿ ಮತಾಂತರಗೊಂಡವರನ್ನು ಈ ವಿಧಿಗೆ ಒಳಪಡಿಸುವುದು ವಾಡಿಕೆಯಾಗಿದೆ.

Leave A Reply

Your email address will not be published.