ಬುರ್ಖಾ ಧರಿಸಿ ಆಲಮಟ್ಟಿ ಜಲಾಶಯಕ್ಕೆ ನುಗ್ಗಲು ಪ್ರಯತ್ನಿಸಿದ ಯುವಕ!

ವಿಜಯಪುರ: ಯುವಕನೊಬ್ಬ ಬೆಳ್ಳಂಬೆಳಗ್ಗೆ ಬುರ್ಖಾ ಧರಿಸಿ ಆಲಮಟ್ಟಿ ಬಳಿಯ ಲಾಲ್‌ ಬಹದ್ದೂರ್‌ ಶಾಸ್ತ್ರಿ ಜಲಾಶಯಕ್ಕೆ ನುಗ್ಗಲು ಪ್ರಯತ್ನಿಸಿ, ಪೊಲೀಸ್ ವಶವಾದ ಘಟನೆ ಬೆಳಕಿಗೆ ಬಂದಿದೆ.

ಪೊಲೀಸ್ ವಶದಲ್ಲಿರುವ ಯುವಕ, ಹಾಸನದ ನಿವಾಸಿ ಕಿಶೋರ್ (22) ಎಂದು ಹೇಳಿಕೊಂಡಿದ್ದಾನೆ.

ನಸುಕಿನಲ್ಲಿ ಆಲಮಟ್ಟಿ ಪರಿಸರದಲ್ಲಿ ಕಾಣಿಸಿಕೊಂಡ ಯುವಕನೋರ್ವ, ಬುರ್ಖಾ ಧರಿಸಿ ಲಾಲ್ ಬಹಾದ್ದೂರ್ ಶಾಸ್ತ್ರೀ ಜಲಾಶಯ ಪ್ರವೇಶಕ್ಕೆ ಮುಂದಾಗಿದ್ದಾನೆ. ಈ ವೇಳೆ ಜಲಾಶಯದ ಪ್ರವೇಶ ದ್ವಾರದಲ್ಲಿ ಭದ್ರತೆಗೆ ಇದ್ದ ಪೊಲೀಸರು ಇಷ್ಟು ಬೇಗ ಜಲಾಶಯ ವೀಕ್ಷಣೆಗೆ ಅವಕಾಶ ನೀಡುವುದಿಲ್ಲ ಎಂದಿದ್ದಾರೆ.

ಈ ವೇಳೆ ಮಾತನಾಡಿದಾಗ ಪೊಲೀಸರಿಗೆ ಬುರ್ಖಾ ಧರಿಸಿರುವವ ಮಹಿಳೆಯಲ್ಲ ಪುರುಷ ಎಂಬುದು ಧ್ವನಿಯಿಂದ ಸ್ಪಷ್ಟವಾಗಿದೆ. ಪೊಲೀಸರು ಆತನ ಮೇಲೆ ನಿಗಾ ಇರಿಸಿದ್ದು, ಕೆಲ ಸಮಯದ ಬಳಿಕ ಬುರ್ಖಾಧಾರಿ ಪಕ್ಕದ ಬೇಲಿಯತ್ತ ತೆರಳಿ ಬುರ್ಖಾ ಬದಲಿಸಿ ಯುವಕನ ವೇಷದಲ್ಲಿ ಮತ್ತೆ ಜಲಾಶಯದ ಪ್ರವೇಶ ದ್ವಾರದಲ್ಲಿ ಪತ್ತೆಯಾಗಿದ್ದಾನೆ.

ಇದರಿಂದ ಕೂಡಲೇ ಎಚ್ಚೆತ್ತ ಪೊಲೀಸರು ಯುವಕನನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಆತನ ಕೈಚೀಲದಲ್ಲಿ ಯುವತಿಯರು ಧರಿಸುವ ಬಟ್ಟೆಗಳು, ಲಿಪ್ ಸ್ಟಿಕ್, ನೈಲ್ ಪಾಲಿಶ್ ಇತರೆ ವಸ್ತುಗಳು ಪತ್ತೆಯಾಗಿವೆ. ಬಳಿಕ ಆತನನ್ನು ವಶಕ್ಕೆ ಪಡೆದ ಪೊಲೀಸರು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ.

ಈತ ಹಾಸನದಲ್ಲಿ ಬೇಕರಿ ಅಂಗಡಿ ಹೊಂದಿರುವುದಾಗಿ ಹೇಳಿಕೊಂಡಿದ್ದಾನೆ. ದೈಹಿಕವಾಗಿ ತನ್ನಲ್ಲಿ ಮಹಿಳಾತನ ಪರಿವರ್ತನೆ ಆಗುತ್ತಿದೆ. ಈ ಕಾರಣದಿಂದಾಗಿ ಹುಡುಗಿಯರ ಬಟ್ಟೆ ಧರಿಸುತ್ತಿರುವುದಾಗಿ ಹೇಳಿಕೊಂಡಿದ್ದಾನೆ.

ಹೆತ್ತವರು ತನಗೆ ಮದುವೆ ಮಾಡಲು ವಧು ಹುಡುಕುತ್ತಿದ್ದಾರೆ. ಆದರೆ, ನಾನು ತೃತೀಯ ಲಿಂಗಿಯಾಗಿ ಪರಿವರ್ತನೆ ಹೊಂದುತ್ತಿರುವೆ. ನನಗೆ ಮದುವೆ ಬೇಡ ಎಂದರೂ ಒತ್ತಡ ಹೇರುತ್ತಿರುವ ಕಾರಣ ಮನೆ ತೊರೆದು ಬಂದಿರುವುದಾಗಿ ಹೇಳಿಕೊಂಡಿದ್ದಾನೆ.

ಆದರೇ, ಈ ಬುರ್ಖಾದಾರಿ ಯುವಕ ಹಾಸನದಿಂದ ಆಲಮಟ್ಟಿಗೆ ಬಂದದ್ದು ಏಕೆ ಎಂಬ ನೂರೆಂಟು ಅನುಮಾನಗಳು ಹುಟ್ಟುಕೊಂಡಿದ್ದು, ಈ ಎಲ್ಲಾ ಪ್ರಶ್ನೆಗಳಿಗೆ ತನಿಖೆಯ ಬಳಿಕವಷ್ಟೇ ಉತ್ತರ ದೊರೆಯಬೇಕಿದೆ.

Leave A Reply

Your email address will not be published.