ಬಂಟ್ವಾಳ: ಪಂಜಿಕಲ್ಲಿನ ಮುಕ್ಕುಡದಲ್ಲಿ ಮತ್ತೆ ಭೂಕುಸಿತ, ಸಮಯಪ್ರಜ್ಞೆಯಿಂದ ತಪ್ಪಿದ ಭಾರೀ ದೊಡ್ಡ ಅನಾಹುತ

ಬಂಟ್ವಾಳ: ಜುಲೈ 6 ರಂದು ಪಂಜಿಕಲ್ಲಿನ ಮುಕ್ಕುಡ ಎಂಬಲ್ಲಿ ಜುಲೈ 6ರಂದು ಉಂಟಾದ ಭೂಕುಸಿತದಿಂದ ಮೂವರು ದಾರುಣವಾಗಿ ಸಾವನ್ನಪ್ಪಿದ ಘಟನೆ ಇನ್ನೂ ಜನರ ಮನಸ್ಸಿನಿಂದ ಮಾಸಿಲ್ಲ. ಈಗ ಮತ್ತೆ ಅದೇ ಸ್ಥಳದಲ್ಲಿ ಭಾನುವಾರ ಸಂಜೆ ಮತ್ತೆ ಭೂಕುಸಿತ ಉಂಟಾಗಿದ್ದು ಜನ ಭಯಭೀತರಾಗಿದ್ದಾರೆ. ಆದರೆ ತಾಲೂಕು ಆಡಳಿತ ಹಾಗೂ ಗ್ರಾಮಪಂಚಾಯತ್ ಆಡಳಿತದ ಸಮಯಪ್ರಜ್ಞೆಯಿಂದ ಸ್ಥಳದಲ್ಲಿದ್ದ ನಾಲ್ವರು ಪಾರಾಗಿದ್ದಾರೆ.

ಮುಕ್ಕುಡದಲ್ಲಿ ಕಳೆದ ನಾಲ್ಕು ದಿನಗಳ ಹಿಂದೆ ನಡೆದ ಘಟನೆಯಲ್ಲಿ ನಾಲ್ವರು ಕೇರಳ ಮೂಲದ ನಿವಾಸಿಗಳು ಸಾವನ್ನಪ್ಪಿದ್ದರು. ಭಾನುವಾರ ರಜಾ ದಿನವಾದ ಹಿನ್ನೆಲೆಯಲ್ಲಿ ದುರಂತದ ಸ್ಥಳವೀಕ್ಷಣೆಗೆ ಸ್ಥಳೀಯರು ಮಾತ್ರವಲ್ಲದೆ ದೂರದಿಂದಲೂ ತುಂಬಾ ಜನಬರುತ್ತಿದ್ದರು. ಈ ಕುರಿತಾಗಿ ಸ್ಥಳೀಯರು ಗ್ರಾಮಪಂಚಾಯತ್ ಗೆ ದೂರು ನೀಡಿದ್ದು, ಅವರು ತಾಲೂಕು ತಹಶೀಲ್ದಾರ್ ಡಾ.ಸ್ಮಿತಾರಾಮು ರವರ ಗಮನಕ್ಕೆ ತಂದರು.

ಈ ಕುರಿತು ಸ್ಪಂದಿಸಿದ ಗ್ರಾಮ ಪಂಚಾಯತ್ ಅಧ್ಯಕ್ಷ ಸಂಜೀವ ಪೂಜಾರಿ, ಪಿಡಿಓ ವಿದ್ಯಾಶ್ರೀಯವರ ಸೂಚನೆಯಂತೆ ಸ್ಥಳೀಯ ಸದಸ್ಯರಾದ ಮೋಹನ್ ದಾಸ್, ತುರ್ತು ಸೇವಾ ತಂಡದ ಸದಸ್ಯರಾದ ಯಶವಂತ್ ಜೋರಾ ಹಾಗೂ ಆರಕ್ಷಕ ಸಿಬ್ಬಂದಿ ಶೇಖರ್, ಮಹೇಂದ್ರ ಘಟನಾ ಸ್ಥಳಕ್ಕೆ ತೆರಳಿದ್ದಾರೆ. ಈ ಸಂದರ್ಭ ಬೊಲೆರೋ ವಾಹನದಲ್ಲಿ ಅಲ್ಲಿನ ಸ್ಥಳಕ್ಕೆ ಬಂದಿದ್ದ ನಾಲ್ವರು ಭೂಕುಸಿತದ ಸ್ಥಳ ವೀಕ್ಷಿಸುತ್ತಿದ್ದರು.

ಪೊಲೀಸ್ ಸಿಬ್ಬಂದಿಗಳು ನಾಲ್ವರಿಗೂ ಗದರಿಸಿ ಹೋಗುವಂತೆ ಸೂಚಿಸಿದ್ದಾರೆ. ಪೊಲೀಸರ ಗದರುವಿಕೆಗೆ ನಾಲ್ವರು ಅಲ್ಲಿಂದ ತೆರಳಲು ತಮ್ಮ ವಾಹನದತ್ತ ತೆರಳುತ್ತಿದ್ದಂತೆಯೇ ಭೂ ಕುಸಿತ ಉಂಟಾಗಿ, ಅಷ್ಟು ಹೊತ್ತು ಅವರು ನಿಂತಿದ್ದ ಸ್ಥಳಕ್ಕೆ ಮಣ್ಣು ಆವರಿಸಿದೆ. ಒಟ್ಟಿನಲ್ಲಿ ತಾ.ಆಡಳಿತ ಹಾಗೂ ಗ್ರಾ.ಪಂ.ಆಡಳಿತದ ಸಮಯ ಪ್ರಜ್ಞೆಯಿಂದ ಸಂಭಾವ್ಯ ದುರಂತವೊಂದು ತಪ್ಪಿದಂತಾಗಿದೆ.

Leave A Reply

Your email address will not be published.