ಉಡುಪಿ: ರಿಕ್ಷಾದಲ್ಲಿ ಕುಳಿತಿದ್ದ ಅಜ್ಜಿಯ ಬಳಿ ತೆರಳಿ ಕೇಸ್ ಇತ್ಯರ್ಥಗೊಳಿಸಿದ ಜಡ್ಜ್ !!

ಸಾಮಾನ್ಯವಾಗಿ ಕೋರ್ಟ್ ನಲ್ಲಿ ಇತ್ಯರ್ಥಗೊಳ್ಳುವ ಪ್ರಕರಣ ರಸ್ತೆಯಲ್ಲಿ ಇತ್ಯರ್ಥಗೊಂಡಿದೆ. ಹೌದು. ಇಂದು ಉಡುಪಿ ಜಿಲ್ಲೆಯಲ್ಲಿ ವಿಶೇಷ ಪ್ರಕರಣವೊಂದು ಆಟೋರಿಕ್ಷಾದ ಬಳಿ ಇತ್ಯರ್ಥಗೊಂಡಿದೆ.

ಕುಂದಾಪುರ, ಉಡುಪಿ ಹಾಗೂ ಕಾರ್ಕಳದ ವಿವಿಧ ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕ್ ಅದಾಲತ್ ಆಯೋಜಿಸಿ ಒಂದೇ ದಿನ 30,773 ಪ್ರಕರಣಗಳನ್ನು ಇತ್ಯರ್ಥಪಡಿಸಿದ್ದು, ಈ ವೇಳೆ ರಿಕ್ಷಾದಲ್ಲೇ ಕುಳಿತಿದ್ದ 81 ವರ್ಷದ ವೃದ್ಧೆಯ ಪ್ರಕರಣವನ್ನು ನ್ಯಾಯಾಧೀಶರು ಆಟೋ ರಿಕ್ಷಾದ ಬಳಿ ತೆರಳಿ ಅಲ್ಲಿಯೇ ಇತ್ಯರ್ಥಗೊಳಿಸಿದ ಪ್ರಸಂಗವೂ ನಡೆಯಿತು.

ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದ ಮೇರೆಗೆ, 2011ರ ಅಸಲು ದಾವೆ ಪ್ರಕರಣದಲ್ಲಿ ಲೋಕ ಅದಾಲತ್‍ನಲ್ಲಿ ಭಾಗಿಯಾಗಲು ಆಟೋ ರಿಕ್ಷಾದಲ್ಲಿ ಬಂದ ವೃದ್ಧೆ ದೇವಕಿ ಶೆಡ್ತಿ (81) ತಮ್ಮ ಮಗಳಾದ ಜಯಂತಿಯವರಿಗೆ ಜಿ.ಪಿ.ಎ. ಕೊಟ್ಟಿದ್ದರು. ನ್ಯಾಯಾಲಯದ ಮೆಟ್ಟಿಲು ಹತ್ತಲಾಗದೇ ಆಟೋದಲ್ಲಿ ಕುಳಿತ್ತಿದ್ದರು. ಆ ಸಂದರ್ಭದಲ್ಲಿ 4ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಜೀತು ಆರ್.ಎಸ್., ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎಸ್., ಸಂಧಾನಕಾರರಾದ ನ್ಯಾಯವಾದಿ ಮಿತೇಶ್ ಶೆಟ್ಟಿ ಹಾಗೂ ಉಭಯ ಕಕ್ಷಿದಾರರ ನ್ಯಾಯವಾದಿಗಳು ದೇವಕಿ ಶೆಡ್ತಿರವರ ಬಳಿ ಬಂದು ಜಿ.ಪಿ.ಎ. ನೀಡಿದರು.

ಪ್ರಕರಣ ಬಗ್ಗೆ ಸಂಪೂರ್ಣ ಪರಿಶೀಲಿಸಿ ಅನಂತರ ನ್ಯಾಯಾಲಯದಲ್ಲಿ ವೀಡಿಯೋ ಕಾನ್ಫರೆನ್ಸ್ ಮೂಲಕ ಮುಂಬಯಿಯಲ್ಲಿದ್ದ ನಾಲ್ಕು ಜನ ಕಕ್ಷಿದಾರರು ಭಾಗಿಯಾದ ಆನಂತರ ಪ್ರಕರಣವನ್ನು ಇತ್ಯರ್ಥಪಡಿಸಲಾಯಿತು. ಒಂದೇ ದಿನ 30,773 ಪ್ರಕರಣಗಳನ್ನು ಇತ್ಯರ್ಥಪಡಿಸಿದ್ದು, ಇದರಲ್ಲಿ ರಾಜಿಯಾಗಬಲ್ಲ ಅಪರಾಧ ಪ್ರಕರಣ -26, ಚೆಕ್ ಅಮಾನ್ಯ ಪ್ರಕರಣ-225 ಇತ್ಯರ್ಥ ಮಾಡಲಾಯಿತು.

ಬ್ಯಾಂಕ್/ಹಣ ವಸೂಲಾತಿ ಪ್ರಕರಣ-19, ಎಂ.ವಿ.ಸಿ. ಪ್ರಕರಣ-185, ಕಾರ್ಮಿಕ ನಷ್ಟ ಪರಿಹಾರ ಪ್ರಕರಣ-1, ಎಂ.ಎಂಆರ್.ಡಿ. ಆಕ್ಟ್ ಪ್ರಕರಣ-16, ವೈವಾಹಿಕ ಪ್ರಕರಣ-3 ಇತ್ಯರ್ಥ ಮಾಡಲಾಯಿತು. ಸಿವಿಲ್ ಪ್ರಕರಣ-170, ಇತರ ಕ್ರಿಮಿನಲ್ ಪ್ರಕರಣ- 2,049 ಹಾಗೂ ವ್ಯಾಜ್ಯ ಪೂರ್ವ ದಾವೆ-28,079 ಹೀಗೆ ವಿವಿಧ ಪ್ರಕರಣಗಳನ್ನು ರಾಜಿ ಮುಖಾಂತರ ಇತ್ಯರ್ಥಪಡಿಸಿ 20,50,13,358 ರೂ. ಪರಿಹಾರದ ಮೊತ್ತವನ್ನು ಘೋಷಿಸಲಾಯಿತು.

Leave A Reply

Your email address will not be published.