ಮಂಗಳೂರು : ರಿವೇಂಜ್ ಮರ್ಡರ್ ಆರೋಪಿಗಳ ಮೇಲೆ ಪೊಲೀಸರ ಫೈರಿಂಗ್

ಮಂಗಳೂರು : ಜೂನ್ ಮೊದಲ ವಾರದ ತುಂತುರು ಮಳೆಯಿಂದ ನಿಧಾನಕ್ಕೆ ತಂಪಾಗುತ್ತಿರುವ ಮಂಗಳೂರಿನ ಹವೆಯಲ್ಲಿ ಇವತ್ತು ಬೆಳ್ಳಬೆಳಗ್ಗೆ ಹೊಗೆ ಎದ್ದಿತ್ತು. ರಿವೇಂಜ್ ಮರ್ಡರ್ ಗೆ ಬಲಿಯಾಗಿದ್ದ ರೌಡಿಶೀಟರ್ ರಾಜಾ ಕೊಲೆ ಆರೋಪಿಗಳ ಮೇಲೆ ಮಂಗಳೂರು ಪೊಲೀಸರು ಮುಂಜಾನೆಯೇ ಫೈರಿಂಗ್ ಓಪನ್ ಮಾಡಿದ್ದಾರೆ.

ಮಂಗಳೂರು ಹೊರವಲಯದ ಮುಲ್ಕಿ ಬಳಿ ಫೈರಿಂಗ್ ನಡೆದಿದ್ದು, ಕೊಲೆ ಪ್ರಕರಣದ ಆರೋಪಿಗಳ ಮೇಲೆ ಪೊಲೀಸರ ಗುಂಡೇಟು ತಾಗಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ.

ದೊರೆತ ಖಚಿತ ಮಾಹಿತಿಯ ಮೇರೆಗೆ ಆರೋಪಿಗಳ ಬಂಧನಕ್ಕೆ ತೆರಳಿದ್ದ ವೇಳೆ ಪೊಲೀಸರ ಮೇಲೆ ಹಲ್ಲೆಗೆ ಎತ್ತಿದ್ದಾರೆ ರಾಜ ಆರೋಪಿಗಳು. ತಮ್ಮ ಮೇಲೆಯೇ ಅಟ್ಯಾಕ್ ಮಾಡಲು ಪ್ರತ್ನಿಸಿದ್ದರಿಂದ ಕುಪಿತಗೊಂಡ ಸಿಸಿಬಿ ಪೊಲೀಸರಿಂದ ಆರೋಪಿಗಳ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ಇಬ್ಬರು ಆರೋಪಿಗಳ ಕಾಲಿಗೆ ಪೊಲೀಸರು ಗುಂಡು ಹೊಡೆದಿದ್ದಾರೆ.

ಕೊಲೆ ಆರೋಪಿಗಳಾದ ಅರ್ಜುನ್ ಮೂಡುಶೆಡ್ಡೆ, ಮನೋಜ್ ಅಲಿಯಾಸ್ ಬಿಂದಾಸ್ ಮನೋಜ್ ಗೆ ಪೊಲೀಸರ ಗುಂಡೇಟು ತಾಗಿದೆ. ಮೂರು ಸುತ್ತು ಗಾಳಿಯಲ್ಲಿ ಗುಂಡು ಹೊಡೆದ ಬಳಿಕ ಎರಡು ಸುತ್ತು ಆರೋಪಿಗಳ ಮೇಲೆ ಫೈರಿಂಗ್ ಮಾಡಲಾಗಿದೆ. ಸಿಸಿಬಿ ಇನ್ಸ್ ಪೆಕ್ಟರ್ ಮಹೇಶ್ ಪ್ರಸಾದ್ ರಿಂದ ರೈಫಲ್ ಗುಡುಗಿದೆ.

ಆರೋಪಿಗಳು ಪೊಲೀಸರ ಮೇಲೆ ದಾಳಿ ಮಾಡಿರುವುದರಿಂದ ಘಟನೆಯಲ್ಲಿ ಮೂವರು ಸಿಸಿಬಿ ಪೊಲೀಸರಿಗೆ ಗಾಯವಾಗಿದೆ. ಸಿಸಿಬಿ ಪಿಎಸ್ ಐ ನಾಗೇಂದ್ರ,ಎ ಎಚ್ ಸಿ ಸಂತೋಷ್, ಎಎಸ್ ಐ ಡೇವಿಡ್ ಎಂಬುವವರಿಗೆ ಗಾಯವಾಗಿದ್ದು ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಏನಿದು ಘಟನೆ : ವಿವಿಧ ಪ್ರಕರಣಗಳನ್ನು ಎದುರಿಸುತ್ತಿದ್ದ ಕುಳಾಯಿಯ ರಾಜಾ ಯಾನೆ ರಾಘವೇಂದ್ರ ರಾತ್ರಿ 7.30ರ ಸುಮಾರಿಗೆ ಬೈಕಂಪಾಡಿ ಸುಪ್ರಿಯಾ ಬಾರ್ ಬಳಿಯಿಂದ ಮೀನಕಳಿಯ ರಸ್ತೆಯಾಗಿ ಹೋಗುತ್ತಿದ್ದಾಗ ಬೈಕಿನಿಂದ ಬಂದ ವ್ಯಕ್ತಿಗಳು ತಲವಾರು ಮತ್ತು ಚಾಕುವಿನಿಂದ ಮುಖ, ತಲೆ, ಕೈಗೆ ಹೊಡೆದಿದ್ದು, ರಾಜಾ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿ ಬಿದ್ದಿದ್ದ, ಸ್ಥಳೀಯರು ಮತ್ತು ಪೊಲೀಸರ ಸಹಾಯದಿಂದ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮೃತರಾಗಿದ್ದಾರೆ. ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿರಬಹುದು ಎನ್ನಲಾಗಿದೆ.

Leave A Reply

Your email address will not be published.