ರಾಜ್ಯ ರಾಜಧಾನಿಯಲ್ಲಿ ಶಂಕಿತ ಉಗ್ರ ತಾಲಿಬ್ ಹುಸೇನ್ ಬಂಧನ !! | ಉಗ್ರನಿಗೆ 6 ವರ್ಷಗಳಿಂದ ಸಿಲಿಕಾನ್ ಸಿಟಿಯಲ್ಲಿ ಆಶ್ರಯ ನೀಡಿತ್ತೇ ಮಸೀದಿ !??

ಬೆಂಗಳೂರಿನ ಶ್ರೀರಾಂಪುರದಲ್ಲಿ ವಾಸಿಸುತ್ತಿದ್ದ ಅನುಮಾನಾಸ್ಪದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದ್ದು, ಆತನಿಗೆ ನಿಷೇಧಿತ ಉಗ್ರ ಸಂಘಟನೆಯೊಂದಿಗೆ ಸಂಬಂಧ ಇತ್ತು ಎನ್ನುವ ಶಂಕೆ ದಟ್ಟವಾಗಿದೆ.

ಜಮ್ಮು ಕಾಶ್ಮೀರದ ನಿವಾಸಿಯಾಗಿದ್ದ ಶಂಕಿತ ಉಗ್ರ ತಾಲಿಬ್ ಹುಸೇನ್ ಕಳೆದ 6 ವರ್ಷಗಳಿಂದ ಬೆಂಗಳೂರಿನ ಶ್ರೀರಾಮಪುರ ಮಸೀದಿ ಬಳಿ ವಾಸವಾಗಿದ್ದ. ಆದರೆ ಆತನಿಗೆ ನಿಷೇಧಿತ ಉಗ್ರ ಸಂಘಟನೆಯೊಂದಿಗೆ ಲಿಂಕ್ ಇರುವ ಹಿನ್ನೆಲೆಯಲ್ಲಿ ಜಮ್ಮು ಪೊಲೀಸರ ಮತ್ತು ಭದ್ರತಾ ಪಡೆಗಳ ಜಂಟಿ ಕಾರ್ಯಾಚರಣೆ ನಡೆಸಿ ಕಳೆದ ಭಾನುವಾರ ತಾಲಿಬ್ ಹುಸೇನ್‍ನನ್ನು ಬಂಧಿಸಿದ್ದರು. ಆ ವೇಳೆ ಹುಸೇನ್ ನಗರದಲ್ಲಿ ಲೋಡಿಂಗ್ ಅನ್ ಲೋಡಿಂಗ್ ಕೆಲಸ ಮಾಡುತ್ತಿದ್ದಾಗಿ ಹೇಳಿಕೊಂಡಿದ್ದ.

38 ವರ್ಷದ ಉಗ್ರ ತಾಲಿಬ್ ಹುಸೇನೆ ಬೆಂಗಳೂರಿನಲ್ಲಿ ತಾಲಿಕ್ ಎಂದು ಹೆಸರು ಬದಲಿಸಿಕೊಂಡು ಓಡಾಡುತ್ತಿದ್ದ. ಈತ ಬಿಎನ್ಎಲ್ ಏರ್ ಸರ್ವಿಸ್ ನಲ್ಲಿ ಕೆಲಸ ಮಾಡುತ್ತಿದ್ದು ಕಾಶ್ಮೀರದಿಂದ ಬೆಂಗಳೂರಿಗೆ ಓಡಿಬಂದಿದ್ದನು. ಈ ಹಿಂದೆ ಕಾಶ್ಮೀರದಲ್ಲಿ ಒಂದು ಮದುವೆ ಆಗಿದ್ದ ತಾಲೀಬ್ ಹುಸೇನ್‍ನ ಮೊದಲ ಹೆಂಡತಿಗೆ ಮೂರು ಮಕ್ಕಳಿದ್ದಾರೆ. ಪತ್ನಿ ಸಾವನ್ನಪ್ಪಿದ ನಂತರ ಮಕ್ಕಳನ್ನು ಬಿಟ್ಟು ಬೆಂಗಳೂರಿಗೆ ಬಂದಿದ್ದ ಇಲ್ಲೇ ರೈಲ್ವೆ ನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದ. ಈ ವೇಳೆ ಇಬ್ಬರು ಮಕ್ಕಳಿರುವ ಮಹಿಳೆಯನ್ನು ಮದುವೆ ಆಗಿದ್ದ ಎಂದು ತಿಳಿದುಬಂದಿದೆ.

ಈ ಬಗ್ಗೆ ಮಸೀದಿ ಅಧ್ಯಕ್ಷ ಅನ್ವರ್ ಮಾವಾಡ ಮಾತನಾಡಿ, ತಾಲಿಬ್ ಹುಸೇನ್ ಕಳೆದ ಹತ್ತು ವರ್ಷಗಳಿಂದ ರೈಲ್ವೆ ಸ್ಟೇಷನ್‍ನಲ್ಲಿ ಕೊರಿಯರ್ ಕೆಲಸ ಮಾಡುತ್ತಿದ್ದ. ಆದರೆ ಕೊರೋನಾ ಬಂದ ನಂತರ ಕೆಲಸ ಹೋಗಿತ್ತು. ನಂತರ ಯಾವುದೇ ಕೆಲಸ ಇರಲಿಲ್ಲ, ಮಗು ಕೂಡ ಇತ್ತು. ಹಾಗಾಗಿ ಮಾನವೀಯತೆ ಆಧಾರದ ಮೇಲೆ ಮಸೀದಿ ಬಳಿ ಆಸರೆ ಕೊಟ್ಟಿದ್ದೆವು ಎಂದು ತಿಳಿಸಿದ್ದಾರೆ.

ಜಮ್ಮು ಕಾಶ್ಮೀರ ಪೊಲೀಸರು, ಕಳೆದ ಒಂದು ವಾರದ ಹಿಂದೆ ಬಂದು ಪರಿಶೀಲನೆ ನಡೆಸಿ ತಾಲಿಬ್ ಹುಸೇನ್‍ನನ್ನು ಕರೆದುಕೊಂಡು ಹೋಗಿದ್ದಾರೆ. ಈತನ ಬಗ್ಗೆ ಮತ್ತಷ್ಟು ಸ್ಫೋಟಕ ವಿಚಾರ ಲಭ್ಯವಾಗಿದ್ದು, ಬಂಧಿತ ಆರೋಪಿ ಹಿಜ್ಬುಲ್ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಎಂಬ ಮಾಹಿತಿ ಇದೀಗ ಸಿಕ್ಕಿದೆ.

Leave A Reply

Your email address will not be published.