ಹೆಂಡತಿ ತನ್ನನ್ನು ಬಿಟ್ಟು ಹೋಗಬಾರದೆಂದು ಮಚ್ಚಿನಿಂದ ಆಕೆಯ ಕೈ ಕೊಚ್ಚಿದ
ಇಲ್ಲೊಬ್ಬ ಗಂಡ ಹೆಂಡತಿ ತನ್ನನ್ನು ಬಿಟ್ಟು ಹೋಗಬಾರದೆಂಬ ಕಾರಣದಿಂದ ಯಾರೂ ಊಹಿಸದಂತಹ ಅಮಾನವೀಯ ಕೃತ್ಯವೊಂದನ್ನು ಮಾಡಿದ್ದಾನೆ. ಹೌದು ಇದನ್ನು ಕೇಳುವಾಗ ನಿಮಗೆ ವಿಚಿತ್ರ ಅನಿಸಬಹುದು, ಜಗತ್ತಿನಲ್ಲಿ ಇಂಥಹ ಕ್ರೂರಿ ಜನರಿದ್ದಾರಾ? ಅಂತ ಆಶ್ಚರ್ಯ ಗೊಳ್ಳ ಬಹುದು, ಆದರೆ ಇದು ನಿಜವಾಗಲೂ ನಡೆದ ಘಟನೆ.
ಗಂಡನೋರ್ವ ಹೆಂಡತಿ ಆತನನ್ನು ಬಿಟ್ಟು ಇನ್ನೊಬ್ಬನ ಜೊತೆ ಓಡಿ ಹೋಗುತ್ತಾಳೆಂಬ ಭಯದಲ್ಲಿ ಆಕೆಯ ಕೈಯನ್ನು ಕೊಚ್ಚಿ ಹಾಕಿದ್ದಾನೆ. ಅದು ಕೂಡಾ ಭಯಾನಕವಾಗಿ.
ಈ ವಿಲಕ್ಷಣ ಘಟನೆ ಪಶ್ಚಿಮ ಬಂಗಾಳದ ಪುರ್ಬಾ ಬರ್ಧಮಾನ್ ಜಿಲ್ಲೆಯ ಕೇತುಗ್ರಾಮ್ ಗ್ರಾಮದಲ್ಲಿ ನಡೆದಿದೆ.
ಸಂತ್ರಸ್ತೆ ರೇಣು ಖಾತೂನ್ ಎಂಬಾಕೆಗೆ ಇತ್ತೀಚೆಗೆ ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿ ಕೆಲಸ ದೊರಕಿದೆ. ಕೆಲಸ ಸಿಕ್ಕ ಖುಷಿಯಲ್ಲಿದ್ದ ಆಕೆಯ ಉತ್ಸಾಹಕ್ಕೆ ಆಕೆಯ ಗಂಡ ತಣ್ಣೀರೆರಚಿದ್ದಾನೆ. ಅಷ್ಟು ಮಾತ್ರವಲ್ಲ, ಆಕೆಯ ಜೀವನವನ್ನೇ ನಾಶ ಮಾಡಿದ್ದಾನೆ. ಖಾತೂನ್ ಕೆಲಸಕ್ಕೆ ಹೋಗಲು ಪ್ರಾರಂಭಿಸಿದಾಗಿನಿಂದ, ಅವಳ ಪತಿ ಮೊಹಮ್ಮದ್ ಶೇಖ್ ಅವಳ ಬಗ್ಗೆ ಹೆಚ್ಚು ಅನುಮಾನಿಸಲು ಪ್ರಾರಂಭಿಸಿದ್ದಾನೆ. ಆಕೆ ಕೆಲಸ ಮಾಡುವಲ್ಲಿ ಯಾರೋ ಒಬ್ಬನೊಂದಿಗೆ ಓಡಿ ಹೋಗುತ್ತಾಳೆಂದು ಕಲ್ಪಿಸಿಕೊಂಡಿದ್ದ ಈ ಪತಿ ಮಹಾರಾಯ, ತನ್ನ ಸ್ನೇಹಿತರೊಂದಿಗೆ ಸಂಚು ರೂಪಿಸಿದ್ದಾನೆ.
ಒಂದು ದಿನ ಆಕೆ ರಾತ್ರಿ ಮಲಗಿದ್ದಾಗ ಹೆಂಡತಿಯ ಬಲಗೈಯ ಮಣಿಕಟ್ಟನ್ನು ಹರಿತವಾದ ಆಯುಧದಿಂದ ಕತ್ತರಿಸಿ ಹಾಕಿದ್ದಾನೆ. ಪ್ರಜ್ಞೆ ತಪ್ಪಿ ಬಿದ್ದ ಹೆಂಡತಿಯನ್ನು ಮೊಹಮ್ಮದ್ ಮೊದಲು ಬರ್ಧಮಾನ್ನಲ್ಲಿರುವ ಪ್ರಥಮ ಚಿಕಿತ್ಸಾ ಕೇಂದ್ರಕ್ಕೆ ಕರೆದೊಯ್ದಿದ್ದಾನೆ. ಅಲ್ಲಿಂದ ಆಕೆಗೆ ಗಂಭೀರವಾದ ಗಾಯಗಳ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ದುರ್ಗಾಪುರದ ಖಾಸಗಿ ನರ್ಸಿಂಗ್ ಹೋಮ್ಗೆ ಸೇರಿಸಿದ್ದಾನೆ.
ಘಟನೆಯ ನಂತರ ಆರೋಪಿ ತನ್ನ ಸ್ನೇಹಿತರ ಜೊತೆ ಸೇರಿ ತಲೆಮರೆಸಿಕೊಂಡಿದ್ದ. ಆರೋಪಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳ ಪತ್ತೆಗೆ ಪ್ರಯತ್ನ ನಡೆಯುತ್ತಿದೆ.