ಮಾಜಿ ಕ್ರಿಕೆಟಿಗ, ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದ ಸುಪ್ರೀಂ ಕೋರ್ಟ್ !!!

ಮಾಜಿ ಕ್ರಿಕೆಟಿಗ, ನವದೆಹಲಿ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಅವರಿಗೆ 35 ವರ್ಷ ಹಿಂದಿನ “ರಸ್ತೆ ಕಲಹ” ಪ್ರಕರಣದಲ್ಲಿ ಗುರುವಾರ ಸುಪ್ರೀಂ ಕೋರ್ಟ್ 1 ವರ್ಷ ಜೈಲು ಶಿಕ್ಷೆಯನ್ನು ವಿಧಿಸಿ ತೀರ್ಪು ನೀಡಿದೆ.

1988 ರ ರಸ್ತೆಯಲ್ಲಿ ನಡೆಸಿದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಕೋರ್ಟ್ ನ ನ್ಯಾಯಮೂರ್ತಿಗಳಾದ ಎಎಂ ಖಾನ್ವಿಲ್ಕರ್ ಮತ್ತು ಸಂಜಯ್ ಕಿಶನ್ ಕೌಲ್ ಅವರ ದ್ವಿ ಸದಸ್ಯ ಪೀಠವು ಆದೇಶವನ್ನು ನೀಡಿದೆ. ಇದಕ್ಕೂ ಮುನ್ನ ನವಜೋತ್ ಸಿಂಗ್ ಸಿಧು ವಿರುದ್ಧದ ಹಲ್ಲೆ ಪ್ರಕರಣದಲ್ಲಿ ನೋಟಿಸ್ ವ್ಯಾಪ್ತಿಯನ್ನು ವಿಸ್ತರಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ಆದೇಶವನ್ನು ನ್ಯಾಯಾಲಯ ಕಾಯ್ದಿರಿಸಿತ್ತು.

ರಸ್ತೆಯಲ್ಲಿ ನಡೆದ ಹಲ್ಲೆಯಿಂದ ವ್ಯಕ್ತಿಯ ಸಾವು ಸಂಭವಿಸಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಸುಪ್ರೀಂ ಕೋರ್ಟ್‌ನ ಹಿಂದಿನ ಆದೇಶವನ್ನು ಉಲ್ಲೇಖಿಸಿ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ತಮ್ಮ ವಿರುದ್ಧದ ‘ರಸ್ತೆ ಹಲ್ಲೆ’ ಪ್ರಕರಣದ ವ್ಯಾಪ್ತಿಯನ್ನು ವಿಸ್ತರಿಸುವ ಮನವಿಯನ್ನು ವಿರೋಧಿಸಿದ್ದರು.

ಸೆಪ್ಟೆಂಬರ್ 1999 ರಲ್ಲಿ ವಿಚಾರಣಾ ನ್ಯಾಯಾಲಯವು ಸಿಧು ಅವರನ್ನು ಕೊಲೆ ಆರೋಪಗಳಿಂದ ಖುಲಾಸೆಗೊಳಿಸಿತ್ತು. ಆದಾಗ್ಯೂ, ಹೈಕೋರ್ಟ್ ತೀರ್ಪನ್ನು ರದ್ದುಗೊಳಿಸಿತ್ತು ಮತ್ತು ಡಿಸೆಂಬರ್ 2006 ರಲ್ಲಿ ಸಿಧು ಮತ್ತು ಸಹ-ಆರೋಪಿ ಸಂಧುವನ್ನು ತಪ್ಪಿತಸ್ಥರೆಂದು ಪರಿಗಣಿಸಿತ್ತು . ಅದು ಅವರಿಗೆ ಮೂರು ವರ್ಷಗಳ ಜೈಲು ಶಿಕ್ಷೆ ಮತ್ತು ಇಬ್ಬರಿಗೆ ತಲಾ ಒಂದು ಲಕ್ಷ ರೂಪಾಯಿ ದಂಡವನ್ನು ವಿಧಿಸಿತ್ತು.

2007 ರಲ್ಲಿ ಸುಪ್ರೀಂ ಕೋರ್ಟ್ ಈ ಪ್ರಕರಣದಲ್ಲಿ ಸಿಧು ಮತ್ತು ಸಂಧುಗೆ ಶಿಕ್ಷೆ ವಿಧಿಸುವುದನ್ನು ತಡೆದು ಅವರು ಅಮೃತಸರ ಲೋಕಸಭಾ ಸ್ಥಾನಕ್ಕೆ ಉಪಚುನಾವಣೆಯಲ್ಲಿ ಸ್ಪರ್ಧಿಸಲು ದಾರಿ ಮಾಡಿಕೊಟ್ಟಿತ್ತು.

ಏನಿದು ಪ್ರಕರಣ: ಡಿಸೆಂಬರ್ 27, 1988 ರಂದು ಪಟಿಯಾಲಾದ ಶರನ್‌ವಾಲಾ ಗೇಟ್ ಕ್ರಾಸಿಂಗ್ ಬಳಿ ಗುರ್ನಾಮ್ ಸಿಂಗ್, ಜಸ್ವಿಂದರ್ ಸಿಂಗ್ ಮತ್ತು ಇನ್ನೊಬ್ಬ ವ್ಯಕ್ತಿ ಮದುವೆಗೆ ಹಣವನ್ನು ಪಡೆಯಲು ಬ್ಯಾಂಕ್‌ಗೆ ಹೋಗುತ್ತಿದ್ದರು‌. ಜಿಪ್ಸಿಯಲ್ಲಿ ಸಿಧು ಮತ್ತು ಸಂಧು ಹಾಜರಿದ್ದರು.ಅವರು ಕ್ರಾಸಿಂಗ್‌ಗೆ ತಲುಪಿದಾಗ, ಮಾರುತಿ ಕಾರನ್ನು ಚಲಾಯಿಸುತ್ತಿದ್ದ ಗುರ್ನಾಮ್ ಸಿಂಗ್, ನಡುರಸ್ತೆಯಲ್ಲಿ ಜಿಪ್ಸಿಯನ್ನು ಕಂಡು ಅದರಲ್ಲಿದ್ದ ಸಿಧು ಮತ್ತು ಸಂಧು ಅವರನ್ನು ತಮ್ಮ ದಾರಿಗಾಗಿ ವಾಹನವನ್ನು ತೆಗೆಯಲು ಕೇಳಿದರು ಎಂದು ಆರೋಪಿಸಲಾಗಿದೆ. ಇದು ತೀವ್ರ ವಾಗ್ವಾದಕ್ಕೆ ಕಾರಣವಾಗಿ ಸಿಧು, ಸಿಂಗ್ ಅವರನ್ನು ಥಳಿಸಿ ನಂತರ ಅವರು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದರು. ಗಾಯಾಳುವನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಗಿತ್ತು.

Leave A Reply

Your email address will not be published.