ಬೆಂಗಳೂರು: 2021-22ನೇ ಸಾಲಿನ 10ನೇ ತರಗತಿಯ ಪರೀಕ್ಷೆ ಫಲಿತಾಂಶ ಹಿನ್ನೆಲೆ ಇಂದು ಮಧ್ಯಾಹ್ನ 12.30ಕ್ಕೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸುದ್ದಿಗೋಷ್ಠಿ ನಡೆಸಿ ಫಲಿತಾಂಶದ ವಿವರಗಳನ್ನು ನೀಡಿ, ಫೇಲ್ ಆದ ವಿದ್ಯಾರ್ಥಿಗಳು ಚಿಂತೆ ಮಾಡುವ ಅಗತ್ಯವಿಲ್ಲ ಎಂದು ಪೂರಕ ಪರೀಕ್ಷೆಯ ಮಾಹಿತಿ ನೀಡಿದರು.
ಫೇಲ್ ಆದ ವಿದ್ಯಾರ್ಥಿಗಳಿಗೆ ಮೇ 27ರಿಂದ ಜೂನ್ 4ರವರೆಗೆ ಪೂರಕ ಪರೀಕ್ಷೆ ನಡೆಯಲಿದ್ದು, ಬಳಿಕ ಪೂರಕ ಪರೀಕ್ಷೆಯ ಫಲಿತಾಂಶ ಜೂನ್ 3ನೇ ವಾರದಲ್ಲಿ ಫಲಿತಾಂಶ ಪ್ರಕಟವಾಗಲಿದೆ ಎಂದು ಶಿಕ್ಷಣ ಸಚಿವರು ಹೇಳಿದರು.
ಈ ಬಾರಿ ರಾಜ್ಯದಲ್ಲಿ 8,20,900 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. 8,07,206 ವಿದ್ಯಾರ್ಥಿಗಳು ಹಾಜರಾಗಿದ್ದು, 20,406 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು ಹಾಜರಾಗಿದ್ದರು. ರಿಪೀಟರ್ಸ್ ಸೇರಿದಂತೆ 8,53,436 ಒಟ್ಟು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. 625ಕ್ಕೆ 625 ಅಂಕಗಳನ್ನು ಒಟ್ಟು 145 ಮಕ್ಕಳು ಪಡೆದಿದ್ದಾರೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಫಲಿತಾಂಶದ ವಿವರ ನೀಡಿದರು.
ಈ ಬಾರಿ ಶೇ.85.63ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಶೇ. 90.29ರಷ್ಟು ಬಾಲಕಿಯರು, ಶೇ. 81.30ರಷ್ಟು ಬಾಲಕರು ಪಾಸ್ ಆಗಿದ್ದಾರೆ. ಒಟ್ಟೂ 7,30,881 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇದರಲ್ಲಿ 40,061 ಮಂದಿ ಗ್ರೇಸ್ ಮಾರ್ಕ್ ಮೂಲಕ ಪಾಸ್ ಆಗಿದ್ದಾರೆ. 1462 ಸರ್ಕಾರಿ ಶಾಲೆಗಳಲ್ಲಿ ಪರೀಕ್ಷೆ ತೆಗೆದುಕೊಂಡ ಎಲ್ಲ ಮಕ್ಕಳೂ ಪಾಸಾಗಿದ್ದಾರೆ. 467 ಅನುದಾನಿತ ಶಾಲೆಗಳು ಮತ್ತು 1991 ಅನುದಾನ ರಹಿತ ಶಾಲೆಗಳಲ್ಲಿ ನೂರಕ್ಕೆ ನೂರು ಫಲಿತಾಂಶ ಬಂದಿದೆ. ಎರಡು ಸರ್ಕಾರಿ ಶಾಲೆಗಳು, ಮೂರು ಅನುದಾನಿತ ಮತ್ತು 15 ಅನುದಾನರಹಿತ ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ ಎಂದು ಹೇಳಿದ್ದಾರೆ.
14 ಮಂದಿ ವಿದ್ಯಾರ್ಥಿಗಳು 625ಕ್ಕೆ 625 ಅಂಕ ಗಳಿಸಿದ್ದು, ಟಾಪರ್ ವಿದ್ಯಾರ್ಥಿ ಅಮಿತ್ ಹಾಗೂ ವಿದ್ಯಾರ್ಥಿನಿ ಭೂಮಿಕಾಗೆ ಶಿಕ್ಷಣ ಸಚಿವ ನಾಗೇಶ್ ಫೋನ್ ಮಾಡಿ ಶುಭಾಶಯ ತಿಳಿಸಿದ್ದಲ್ಲದೆ, ವಿದ್ಯಾರ್ಥಿ ಪೋಷಕರ ಜೊತೆ ಕೂಡ ಸಚಿವರು ಮಾತಾಡಿದ್ದಾರೆ.