ಮದುವೆ ಮಂಪಟದಲ್ಲಿ ಮದುಮಗರಿಬ್ಬರಿಟ್ಟರು ವರದಕ್ಷಿಣೆ ಬೇಡಿಕೆ | ಇಬ್ಬರನ್ನೂ ಸೀದಾ ಪೊಲೀಸ್ ಠಾಣೆಗೆ ಎಳೆದೊಯ್ದ ಅಕ್ಕ ತಂಗಿ|

ಅಲ್ಲೊಂದು ಕಡೆ ಸಹೋದರಿಯರಿಬ್ಬರ ಮದುವೆ ತಯಾರಿಗಳೆಲ್ಲ ಮುಗಿದಿತ್ತು. ವರರಿಬ್ಬರು ಮದುವೆ ಮಂಟಪಕ್ಕೆ ಬಂದಿದ್ದರು. ಇನ್ನೇನು ಮದುಮಗರಿಬ್ಬರೂ ತಾಳಿ ಕಟ್ಟಬೇಕು ಅಷ್ಟರಲ್ಲಿ ವರನ ಕಡೆಯವರಿಂದ ಬೇಡಿಕೆಯೊಂದು ಬಂತು. ” ಇನ್ನೂ ಹೆಚ್ಚಿನ ವರದಕ್ಷಿಣೆ ” ಬೇಕೆಂದು. ಆದರೆ ಹೆಣ್ಣಿನ ಕಡೆಯವರು ಮೊದಲೇ ವರದಕ್ಷಿಣೆ, ಮದುವೆ ಖರ್ಚು ಎಂದು ಹೈರಾಣಾಗಿದ್ದರು. ಈಗ ಇನ್ನಷ್ಟು ವರದಕ್ಷಿಣೆ ಅಂದರೆ ಎಲ್ಲಿಂದ ತರುವುದು ? ಇಂಥಹ ವಿಲಕ್ಷಣ ಘಟನೆಯೊಂದು, ರಾಜಸ್ಥಾನದ ಭರತಪುರ ಜಿಲ್ಲೆಯ ಬಯಾನಾದಲ್ಲಿ ನಡೆದಿದೆ.

ವರದಕ್ಷಿಣೆ ನೀಡದಿದ್ದಕ್ಕೆ ಆಕ್ರೋಶಗೊಂಡ ಸಹೋದರರಿಬ್ಬರು ಮದುವೆ ಮಾಡಿಕೊಳ್ಳದೇ ಯುವತಿಯರಿಬ್ಬರನ್ನು ಮದುವೆ ಮಂಟಪದಲ್ಲೇ ಬಿಟ್ಟು ಹೊರ ನಡೆದಿದ್ದಾರೆ.

ಸಿಕಂದ್ರ ಮೂಲದ ಸಹೋದರಿಯರಿಬ್ಬರಿಗೆ ರಾಂಪುರ ಮೂಲದ ಸಹೋದರರಿಬ್ಬರ ಜತೆ ಮದುವೆ ನಿಗದಿಯಾಗಿತ್ತು. ಅಂದುಕೊಂಡಂತೆ ಎಲ್ಲವೂ ಸಿದ್ಧವಾಗಿ ಮದುವೆ ಹಿಂದಿನ ರಾತ್ರಿ ಎಲ್ಲ ಕಾರ್ಯಕ್ರಮಗಳು
ಸುಸೂತ್ರವಾಗಿ ನೆರವೇರಿತ್ತು. ಮಾರನೇ ದಿನ ಮದುವೆಯ ಅಂತಿಮ ಹಂತದ ಕಾರ್ಯಕ್ರಮಗಳು ನಡೆಯಬೇಕಿತ್ತು. ಆದರೆ, ಸಹೋದರರಿಬ್ಬರ ಹಣ ದಾಹಕ್ಕೆ ಮದುವೆ ಮುರಿದು ಬಿದ್ದಿದೆ.

ಇಬ್ಬರು ವರನ ಕಡೆಯವರು ವರದಕ್ಷಿಣೆಗೆ ಬೇಡಿಕೆ ಇಟ್ಟಿದ್ದರು. 5 ಲಕ್ಷ ನಗದು, ಬೈಕ್ ಮತ್ತು ಚಿನ್ನಾಭರಣವನ್ನು ವರದಕ್ಷಿಣೆಯಾಗಿ ನೀಡಬೇಕೆಂದರು. ಆದರೆ, ವಧುವಿನ ತಂದೆ ಅಷ್ಟೊಂದು ವರದಕ್ಷಿಣೆ
ನಮ್ಮಿಂದ ಕೊಡಲು ಆಗುವುದಿಲ್ಲ ಎಂದು ತಮ್ಮ ಅಸಹಾಯಕತೆಯನ್ನು ಹೇಳಿಕೊಂಡಿದ್ದರು. ಆದರೂ ಸಹೋದರರ ಮನಸ್ಸು ಕರಗಲೇ ಇಲ್ಲ. ವಧುವಿನ ಕಡೆಯವರು ಸಾಕಷ್ಟು ಮನವೊಲಿಸಿದರೂ ಸಾಧ್ಯವಾಗಲಿಲ್ಲ. ಕೊನೆಗೆ ಮದುವೆ ಮುರಿದುಕೊಂಡು ಮಂಟಪದಿಂದ ಸಹೋದರರಿಬ್ಬರು ಹೊರನಡೆದಿದ್ದಾರೆ.

ಇತ್ತ ಮದುವೆ ಶೃಂಗಾರ ಮಾಡಿಕೊಂಡು ಮದುವೆಗೆ ತಯಾರಾಗಿದ್ದ ಸಹೋದರಿಯರಿಬ್ಬರಿಗೆ ಮದುವೆ ಮುರಿದು ಹೋದ ಸುದ್ದಿ ತಿಳಿದು ಆಘಾತವಾಯಿತು. ಆದರೂ ಆಗಿದ್ದೆಲ್ಲ ಒಳ್ಳೆಯದ್ದಕ್ಕೆ ಎಂದು ಗಟ್ಟಿ ಮನಸ್ಸು ಮಾಡಿದ ಅಕ್ಕ ತಂಗಿಯರು, ಇಂತಹ ಹಣ ದಾಹ ಹೊಂದಿರುವ ಇಬ್ಬರು ವರರು ಹಾಗೂ ಅವರ ಕುಟುಂಬದ ವಿರುದ್ಧ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.

Leave A Reply

Your email address will not be published.