ಕೊಲೆ ಮಾಡಿ ಶವ ಸಾಗಿಸುತ್ತಿದ್ದಾಗ ಜಿಲ್ಲಾಧಿಕಾರಿ ಕಚೇರಿ ಎದುರು ಬೈಕ್ ಸ್ಕಿಡ್ !! | ಮಹಿಳೆಯ ಕೊಲೆ ರಹಸ್ಯ ಬಯಲು ಮಾಡಿದ ರಸ್ತೆಯ ಹಂಪ್

ಮಹಿಳೆಯೊಬ್ಬರ ಶವ ಸಾಗಿಸುತ್ತಿದ್ದ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗವೇ ಬೈಕ್ ಅಪಘಾತಕ್ಕೀಡಾಗಿದ್ದು, ಪತಿ-ಪತ್ನಿ ಸೇರಿ ನಡೆಸಿದ ಕೊಲೆಯ ರಹಸ್ಯ ಬಯಲಾಗಿದೆ.

ಈ ಘಟನೆ ಮಂಗಳವಾರ ರಾತ್ರಿ ನಡೆದಿದ್ದು, ಶ್ವೇತಾ ಕೊಲೆಯಾದ ಮಹಿಳೆ ಎಂದು ತಿಳಿದುಬಂದಿದೆ.

ಪುರುಷರಿಬ್ಬರು ಬೈಕ್ ನಲ್ಲಿ ಮಹಿಳೆಯ ಶವ ಇಟ್ಟುಕೊಂಡು ರಾಜರಾಜೇಶ್ವರಿ ನಗರದಿಂದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಪ್ರಯಾಣಿಸುತ್ತಿದ್ದರು. ಹೀಗೆ ಹೋಗುತ್ತಿದ್ದಾಗ ರಾಮನಗರ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ರಸ್ತೆಯ ಹಂಪ್ ನಿಂದಾಗಿ ಬೈಕ್ ಸ್ಕಿಡ್ ಆಗಿ ಅಪಘಾತ ಸಂಭವಿಸಿದೆ. ಅಪಘಾತ ನಡೆದ ಕೂಡಲೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಈ ವೇಳೆ ಮಹಿಳೆಯೊಬ್ಬರು ಬಿದ್ದಿರುವುದು ಪೊಲೀಸರ ಗಮನಕ್ಕೆ ಬಂದಿದೆ. ಅಂತೆಯೇ ಅಪಘಾತದಲ್ಲಿ ಮಹಿಳೆಗೆ ಗಾಯವಾಗಿ ಬಿದ್ದಿದ್ದಾರೆ ಎಂದು ತಿಳಿದ ಅವರು ಕೂಡಲೇ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಈ ವೇಳೆ ಮಹಿಳೆಯನ್ನು ಪರೀಕ್ಷೆ ಮಾಡಿದ ವೈದ್ಯರು, ಈಕೆ ಮೃತಪಟ್ಟು ಹಲವು ಗಂಟೆಗಳೇ ಕಳೆದಿವೆ ಎಂದಿದ್ದಾರೆ. ಇದರಿಂದ ಅನುಮಾನಗೊಂಡ ಪೊಲೀಸರು ಬೈಕ್ ಸವಾರರಾದ ನಾಗರಾಜು ಹಾಗೂ ವಿನೋದ್‍ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆಗ ಕೊಲೆ ರಹಸ್ಯ ಬಯಲಾಗಿದೆ.

ಕೊಲೆಯಾದ ಶ್ವೇತಾಗೆ ಮದುವೆ ಆದರೂ ಆಕೆ ಗಂಡನಿಂದ ದೂರವಾಗಿದ್ದಳು. ಈ ವೇಳೆ ಗೆಳತಿ ದುರ್ಗಾ, ಶ್ವೇತಾಗೆ ತನ್ನ ಮನೆಯಲ್ಲಿಯೇ ಆಶ್ರಯ ನೀಡಿದ್ದಾಳೆ. ಇತ್ತೀಚೆಗೆ ದುರ್ಗಾ ಮನೆಯಲ್ಲಿ ಆಭರಣ ಕಳ್ಳತನವಾಗಿತ್ತು. ಇದನ್ನು ಶ್ವೇತಾಳೇ ಕದ್ದಿರುವುದಾಗಿ ಆರೋಪಿ ದುರ್ಗಾ ಕ್ಯಾತೆ ತೆಗೆದಿದ್ದಾಳೆ. ಇತ್ತ ಇದೇ ವಿಚಾರವಾಗಿ ಸೋಮವಾರ ಇಬ್ಬರ ಮಧ್ಯೆ ಜಗಳವೂ ನಡೆದಿದೆ. ಈ ಜಗಳ ತಾರಕಕ್ಕೇರಿ ದುರ್ಗಾ, ಶ್ವೇತಾಗೆ ಮನಸ್ಸೋ ಇಚ್ಛೆ ಥಳಿಸಿದ್ದಾಳೆ. ಅಲ್ಲದೆ ಕೋಣೆಯಲ್ಲಿ ಕೂಡಿ ಹಾಕಿ ಹಿಂಸಿಸಿದ್ದಾಳೆ.

ಇತ್ತ ಸ್ನೇಹಿತೆ ದುರ್ಗಾಳ ಹಿಂಸೆಯಿಂದ ಅಸ್ವಸ್ಥಗೊಂಡ ಶ್ವೇತಾ ಅಂದು ರಾತ್ರಿಯೇ ಸಾವನ್ನಪ್ಪಿದ್ದಾಳೆ. ಈ ವೇಳೆ ಶ್ವೇತಾಳ ಸಾವನ್ನು ಹೇಗಾದರೂ ಮಾಡಿ ಮುಚ್ಚಿ ಹಾಕಬೇಕು ಎಂದು ಪತಿ ಜೊತೆ ಸೇರಿ ದುರ್ಗಾ ಪ್ಲ್ಯಾನ್ ರೂಪಿಸಿದ್ದಾಳೆ. ಇದಕ್ಕೆ ದುರ್ಗಾ ಸಹೋದರ ಕೂಡ ಸಾಥ್ ನೀಡಿದ್ದಾನೆ. ಅಂತೆಯೇ ಅಭಿ ಹಾಗೂ ವಿನೋದ್ ಎಂಬಿಬ್ಬರ ಸಹಾಯ ಕೂಡ ಪಡೆದುಕೊಂಡಿದ್ದಾರೆ. ಯೋಜನೆಯಂತೆ ಮಂಗಳವಾರ ರಾತ್ರಿ ಯಾರಿಗೂ ಅನುಮಾನ ಬಾರದಂತೆ ಶವವನ್ನು ಬೈಕಿನಲ್ಲಿ ಇಟ್ಟುಕೊಂಡು ನಾಗರಾಜ್ ಹಾಗೂ ವಿನೋದ್ ರಾಜರಾಜೇಶ್ವರಿ ನಗರದಿಂದ ಹೊರಟಿದ್ದಾರೆ. ಆದರೆ ರಾಮನಗರ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಬರುತ್ತಿದ್ದಂತೆಯೇ ಬೈಕ್ ಸ್ಕಿಡ್ ಆಗಿ ಬಿದ್ದು, ಆರೋಪಿಗಳ ನೀಚ ಕೃತ್ಯ ಬಯಲಾಗಿದೆ.

Leave A Reply

Your email address will not be published.