ಮಂಗಳೂರು: ಮತ್ತೆ ಹರಿದ ನೆತ್ತರು | ರೌಡಿಶೀಟರ್ ‘ಕಕ್ಕೆ’ ರಾಹುಲ್ ಹೊಯ್ಗೆಬಜಾರ್ ಹತ್ಯೆ

ಬೆವರು ಕಿತ್ತು ಹೋಗುತ್ತಿರುವ ಮಂಗಳೂರಿನ ಬಿಸಿಲಿನ ಬೇಗೆಯ ನಡುವೆಯೇ ಗುಂಪು ದ್ವೇಷ ನೆತ್ತರು ಕಕ್ಕಿಸಿದೆ. ಎಮ್ಮೆಕೆರೆ ಮೈದಾನದಲ್ಲಿ ರೌಡಿಶೀಟರ್ ರಾಹುಲ್ ಹೊಯಿಗೆ ಬಜಾರ್ ಎಂಬಾತನನ್ನು ದುಷ್ಕರ್ಮಿಗಳು ಹತ್ಯೆಗೈದ ಘಟನೆ ಗುರುವಾರ ಸಂಜೆ ನಡೆದಿದೆ. ರಕ್ತ ಸಿಕ್ತ ಕೋಳಿ ಅಂಕದ ಕಣದಲ್ಲಿ ‘ಕಕ್ಕೆ’ಯ ರಕ್ತ ಬೆರೆತಿದೆ.

ಪಾಂಡೇಶ್ವರ ಠಾಣೆಯಲ್ಲಿ ರೌಡಿ ಶೀಟರ್ ಆಗಿರುವ ಕಕ್ಕೆ ಅಲಿಯಾಸ್ ರಾಹುಲ್ (26) ಕೊಲೆಯಾದ ವ್ಯಕ್ತಿ. ಎಮ್ಮೆಕೆರೆ ಬಳಿ ಕೋಳಿ ಅಂಕ ನಡೆಯುತ್ತಿದ್ದ ಸಂದರ್ಭ ಅಲ್ಲಿಂದ ಅಟ್ಟಿಸಿಕೊಂಡು ಬಂದ ನಾಲ್ವರ ತಂಡ ಮೈದಾನದ ಬಳಿ ಬರ್ಬರವಾಗಿ ಇರಿದು ಕೊಂದು ಹಾಕಿದೆ. ತಲ್ವಾರ್ ಬಾಟಲಿ ಬಳಕೆ ಮಾಡಿ ಕೊಲ್ಲಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಎಮ್ಮೆಕೆರೆ ತಂಡದ ಮಹೇಂದ್ರ ಮತ್ತಿತರ ನಾಲ್ಕು ಮಂದಿ ಯುವಕರು ಸೇರಿ ಕೊಂದು ಹಾಕಿದ್ದಾರೆ, ಹಳೆ ದ್ವೇಷದಲ್ಲಿ ಹಗೆ ತೀರಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಕಕ್ಕೆ ರಾಹುಲ್ ಹೊಯ್ಗೆಬಜಾರ್ ನಿವಾಸಿಯಾಗಿದ್ದು, ಅಲ್ಲಿನ ರೌಡಿ ತಂಡದಲ್ಲಿ ಗುರುತಿಸಿಕೊಂಡಿದ್ದ.

ಎರಡು ವರ್ಷಗಳ ಹಿಂದೆ ಇದೇ ರಾಹುಲ್, ಎಮ್ಮೆಕೆರೆಯ ಹುಲಿ ತಂಡದ ಸದಸ್ಯರೊಬ್ಬರ ಮನೆಯಲ್ಲಿ ಜಗಳ ಮಾಡಿ ಮಹೇಂದ್ರ ಮತ್ತಿತರರ ಮೇಲೆ ಹಲ್ಲೆ ನಡೆಸಿದ್ದ.

ಇದೇ ದ್ವೇಷದಲ್ಲಿದ್ದ ತಂಡ ಇಂದು ರಾಹುಲ್ ಎಮ್ಮೆಕೆರೆಯ ಕೋಳಿ ಅಂಕ ನಡೆಯುತ್ತಿದ್ದಲ್ಲಿಗೆ ಬಂದಿದ್ದಾಗ ಹಳೆ ದ್ವೇಷವನ್ನು ಕೊಲೆಯ ಮೂಲಕ ತೀರಿಸಿದ್ದಾರೆ.

ಪಾಂಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ಆರೋಪಿಗಳ ತಲಾಶ್ ಗೆ ಪೊಲೀಸ್ರು ಇಳಿದಿದ್ದಾರೆ.

Leave A Reply

Your email address will not be published.