ಗೋ ಕಳ್ಳರನ್ನು ಸಿನಿಮೀಯ ಶೈಲಿಯಲ್ಲಿ 22 ಕಿ.ಮೀ ಬೆನ್ನಟ್ಟಿ ಹಿಡಿದ ಪೊಲೀಸರು !!

ಗೋ ಕಳ್ಳಸಾಗಣೆ ಮಾಡುತ್ತಿದ್ದ ಐವರನ್ನು ಸಿನಿಮೀಯ ಶೈಲಿಯಲ್ಲಿ 22 ಕಿ.ಮೀ. ಬೆನ್ನಟ್ಟಿದ ಖಾಕಿಪಡೆ ಕೊನೆಗೂ ಅವರನ್ನು ಬಂಧಿಸುವಲ್ಲಿ ಯಶಸ್ವಿಯಾದ ಘಟನೆಯೊಂದು ಬೆಳಕಿಗೆ ಬಂದಿದೆ.

ದೆಹಲಿ ಬಳಿಯ ಗುರುಗ್ರಾಮ್ ನಲ್ಲಿ ಜಾನುವಾರು ಕಳ್ಳರನ್ನು ಬಂಧಿಸಲಾಗಿದೆ. ಸೈಬರ್ ಸಿಟಿ ಪ್ರದೇಶದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಆರೋಪಿಗಳಿಂದ ಕೆಲವು ದೇಶೀಯ ಬಂದೂಕುಗಳು ಹಾಗೂ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಖಾಕಿ ಪಡೆ ದೆಹಲಿ ಗಡಿಯಿಂದ ಆರೋಪಿಗಳನ್ನು ಬೆನ್ನಟ್ಟಿದಾಗ ಗುರುಗ್ರಾಮಕ್ಕೆ ಪ್ರವೇಶಿಸುವ ವೇಳೆ ವಾಹನವನ್ನು ನಿಲ್ಲಿಸಲು ಸೂಚನೆ ನೀಡಿತು. ಇದನ್ನು ಲೆಕ್ಕಿಸದೇ ವಾಹನವನ್ನು ವೇಗವಾಗಿ ಚಲಾಯಿಸಿದರು. ಅಲ್ಲಿಂದ ನಮ್ಮ ಚೇಸಿಂಗ್ ಪ್ರಾರಂಭವಾಯಿತು. ಅವರ ವಾಹನದ ಒಂದು ಟಯರ್ ಪಂಕ್ಚರ್ ಮಾಡಿದರೂ ಆರೋಪಿಗಳು ಅತಿ ವೇಗವಾಗಿಯೇ ಚಲಾಯಿಸುತ್ತಿದ್ದರು. ಇದರಿಂದ ಟಯರ್ ಜಾಗದಲ್ಲಿ ಬೆಂಕಿ ಕಿಡಿಗಳು ಕಾಣಿಸಿಕೊಳ್ಳುತ್ತಿದ್ದವು. ಈ ವೇಳೆ ಅವರು ಪೊಲೀಸರ ಗಮನವನ್ನು ಬೇರೆಡೆ ಸೆಳೆಯಲು ಕಳ್ಳಸಾಗಣೆ ಮಾಡಿದ ಹಸುಗಳನ್ನು ಚಲಿಸುವ ವಾಹನದಿಂದಲೇ ಹೊರಕ್ಕೆ ತಳ್ಳಿದ್ದರು. ಆದರೂ ಬಿಡದೇ ಕಳ್ಳರನ್ನು ಬಂಧಿಸಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

ಗುರುಗ್ರಾಮ್‌ನಲ್ಲಿ ಜಾನುವಾರುಗಳ ಕಳ್ಳಸಾಗಣೆ ಇದೇ ಮೊದಲಲ್ಲ. ಅದಕ್ಕಾಗಿಯೇ ಹರಿಯಾಣ ಸರ್ಕಾರ ಗೋವು ಕಳ್ಳಸಾಗಣೆ ವಿರುದ್ಧ ಕಠಿಣ ಕಾನೂನುಗಳನ್ನು ಕೈಗೊಂಡಿದೆ. ಅವುಗಳ ರಕ್ಷಣೆಗಾಗಿ ಆಯೋಗವನ್ನೂ ರಚಿಸಿದೆ. ಆದರೆ ಈ ಕ್ರಮಗಳ ಹೊರತಾಗಿಯೂ ರಾಜ್ಯದಲ್ಲಿ ಜಾನುವಾರು ಕಳ್ಳಸಾಗಣೆ ಹೆಚ್ಚುತ್ತಿದೆ ಎಂದು ಹೇಳಿದ್ದಾರೆ.

Leave A Reply

Your email address will not be published.