ತನ್ನ ಸಾಕುನಾಯಿಯ ಮೇಲಿನ ಪ್ರೀತಿಗಾಗಿ ಶ್ವಾನ ಸಮಾಧಿಯನ್ನೇ ದೇವಾಲಯವಾಗಿ ಮಾಡಿದ ವ್ಯಕ್ತಿ
ತನ್ನ ಸಾಕುನಾಯಿಯ ಮೇಲಿನ ಪ್ರೀತಿಯಿಂದಾಗಿ ವ್ಯಕ್ತಿಯೊಬ್ಬರು ನಾಯಿಯ ಸಮಾಧಿಯನ್ನು ದೇವಾಲಯವಾಗಿ ಮಾಡಿದ್ದಾರೆ.
ಈ 82 ವರ್ಷದ ವೃದ್ಧನಿಗೆ ತನ್ನ ಸ್ನೇಹಿತ ಇನ್ನು ಮುಂದೆ ನೆನಪು ಮಾತ್ರ. ಆದರೆ ಆ ನೆನಪನ್ನು ಕಾಪಿಟ್ಟುಕೊಳ್ಳುವುದಕ್ಕಾಗಿ ಆತ ಸ್ನೇಹಿತನಿಗೆ ದೇವಾಲಯವನ್ನು ನಿರ್ಮಿಸಿದ್ದಾರೆ.
ಈ ವ್ಯಕ್ತಿಯ ಹೆಸರು ಮುತ್ತು ನಿವೃತ್ತ ಸರ್ಕಾರಿ ಸಿಬ್ಬಂದಿ, ತಮಿಳುನಾಡಿನ ಶಿವಗಂಗಾ ಜಿಲ್ಲೆಯ ಮನಮದುರೈ ನಿವಾಸಿ, ಈತ ತನ್ನ ಕೃಷಿ ಭೂಮಿಯಲ್ಲಿರುವ ನೆಚ್ಚಿನ ಶ್ವಾನದ ಸಮಾಧಿಯನ್ನು ದೇವಾಲಯವನ್ನಾಗಿ ಮಾರ್ಪಡಿಸಿದ್ದು, ದೇವಾಲಯದ ಮೂಲಕ ತನ್ನ ನೆಚ್ಚಿನ ಸಾಕುಪ್ರಾಣಿಯೊಂದಿಗಿನ ಬಾಂಧವ್ಯ ಶಾಶ್ವತವಾಗಿರಲಿದೆ ಎಂದು ನಂಬಿದ್ದಾರೆ.
ಮಾಹಿತಿಯ ಪ್ರಕಾರ 11 ವರ್ಷದ ಹಿಂದೆ ತಮ್ಮ ಸಹೋದರ ಅರುಣ್ ಕುಮಾರ್ ಎಂಬವರು ಟಾಮ್ ಎಂಬ ಹೆಸರಿನ ಲ್ಯಾಬೊಡಾರ್ ತಳಿಯ ನಾಯಿಯನ್ನು ತಂದಿದ್ದರು. ಆದರೆ ಅದನ್ನು ನಿಭಾಯಿಸಲು ಸಾಧ್ಯವಾಗದ ಕಾರಣ 6 ತಿಂಗಳ ಬಳಿಕ ಮುತ್ತು ಅವರಿಗೆ ಅದರ ಪಾಲನೆಯ ಜವಾಬ್ದಾರಿಯನ್ನು ವಹಿಸಲಾಗಿತ್ತು.
ಅಂದಿನಿಂದ ಟಾಮ್ 2021ರ ಜನವರಿಯಲ್ಲಿ ಸಾಯುವವರೆಗೂ ಮುತ್ತು ಅವರ ಜೊತೆಯಲ್ಲೇ ಜೀವಿಸಿತ್ತು, ಏಕಾಏಕಿ ಟಾಮ್ಗೆ ಅನಾರೋಗ್ಯ ಕಾಡಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಜನವರಿ ತಿಂಗಳಲ್ಲಿ ಇಹಲೋಕ ತ್ಯಜಿಸಿತು.
ಈ ಬಳಿಕ ಮುತ್ತು ಅವರು, ಟಾಮ್ಗೆ 80,000 ರೂಪಾಯಿ ವೆಚ್ಚದಲ್ಲಿ ಮಾರ್ಬಲ್ ಕಲ್ಲಿನಿಂದ ಪ್ರತಿಮೆ ನಿರ್ಮಿಸಿ ದೇವಾಲಯ ಸ್ಥಾಪಿಸಿದರು.