ಉಪ ತಹಶೀಲ್ದಾರ್ ಒಬ್ಬರಿಗೆ ಯುವತಿಯಿಂದ ಹನಿಟ್ರ್ಯಾಪ್ !! ಹೋಟೆಲ್ ಗೆ ಕರೆಸಿಕೊಂಡು ಖಾಸಗಿ ಕ್ಷಣಗಳ ಚಿತ್ರೀಕರಣ-ಹಣಕ್ಕೆ ಬೇಡಿಕೆ
ತಹಶೀಲ್ದಾರ್ ಒಬ್ಬರನ್ನು ತನ್ನ ಮೋಸದ ಬಲೆಗೆ ಕೆಡವಿಕೊಂಡ ಯುವತಿಯೋರ್ವಳು ಅಶ್ಲೀಲ ಫೋಟೋ ಕ್ಲಿಕ್ಕಿಸಿಕೊಂಡು 25 ಲಕ್ಷಕ್ಕೆ ಬೇಡಿಕೆ ಇಟ್ಟು ಬ್ಲಾಕ್ ಮೇಲ್ ಮಾಡಿದ ಪ್ರಕರಣವೊಂದು ಬೆಂಗಳೂರಿನ ಕೆ.ಆರ್.ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದ್ದು, ದೂರು ದಾಖಲಾದ ಹಿನ್ನೆಲೆಯಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಪ್ರಕರಣ ಪ್ರಮುಖ ಆರೋಪಿ ಯುವತಿ ತಲೆಮರೆಸಿಕೊಂಡಿದ್ದಾಳೆ.
ಘಟನೆ ವಿವರ: ಹೊಸಕೋಟೆ ನಿವಾಸಿಯಾಗಿರುವ, ಕೋಲಾರ ಜಿಲ್ಲೆಯ ಉಪ ತಹಶೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಕೆ. ಗೌತಮ್ ಎಂಬವರಿಗೆ 2021 ಜುಲೈ ನಲ್ಲಿ ಜ್ಯೋತಿ ಎನ್ನುವ ಯುವತಿಯೊಬ್ಬಳ ಪರಿಚಯವಾಗುತ್ತದೆ. ಪರಿಚಯವು ಮೆಸೇಜ್, ಕಾಲ್ ಹೀಗೆ ಮುಂದುವರಿದು ಸಲುಗೆಯೂ ಬೆಳೆದಿದೆ.
ಅದೊಂದು ದಿನ ಯುವತಿಯು ಯಾವೊದೋ ವಿಚಾರವಾಗಿ ಮಾತನಾಡಬೇಕಿದೆ ಎಂದು ಹೋಟೆಲ್ ರೂಮ್ ಗೆ ಕರೆಸಿಕೊಂಡಿದ್ದಳು. ಅಲ್ಲಿ ಮತ್ತು ಬರುವ ಮಾತ್ರೆ ಹಾಕಿದ ಪಾನೀಯವನ್ನು ಕುಡಿಯಲು ಕೊಟ್ಟ ಬಳಿಕ ತಹಶೀಲ್ದಾರ್ ಗೌತಮ್ ಗೆ ಮಂಪರು ಬಂದಿದ್ದು, ಯುವತಿ ತನ್ನ ಕೈಚಳಕ ಮೆರೆದಿದ್ದಾಳೆ.
ತಹಶೀಲ್ದಾರ್ ಅವರನ್ನು ವಿವಸ್ತ್ರಗೊಳಿಸಿ ಖಾಸಗಿ ಕ್ಷಣಗಳನ್ನು ಕಳೆಯುವ ರೀತಿಯಲ್ಲಿ ಫೋಟೋ ಕ್ಲಿಕ್ಕಿಸಿಕೊಂಡು ಅಲ್ಲಿಂದ ನಾಪತ್ತೆಯಾಗಿದ್ದಳು. ಬಳಿಕ ತಹಶೀಲ್ದಾರ್ ಗೆ ಪ್ರಜ್ಞೆ ಬಂದಿದ್ದು ಈ ವೇಳೆ ಮೈ ಮೇಲೆ ಬಟ್ಟೆ ಇಲ್ಲದನ್ನು ಹಾಗೂ ಯುವತಿಯು ಕಾಣೆಯಾಗಿದನ್ನು ಕಂಡು ಗಾಬರಿಗೊಂಡಿದ್ದರು. ಇತ್ತ ಕಾಣೆಯಾದ ಯುವತಿ ತನ್ನ ಸಂಗಡಿಗರೊಂದಿಗೆ ಸೇರಿಕೊಂಡು ಫೋಟೋ ತೋರಿಸಿ ಬ್ಲಾಕ್ ಮೇಲ್ ಮಾಡಿದ್ದು,25 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.
ಇದರಿಂದ ಕಂಗಲಾದ ತಹಶೀಲ್ದಾರ್ ಪೊಲೀಸರ ಮೊರೆ ಹೋಗಿದ್ದು, ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದು, ಬಂಧಿತರನ್ನು ಕೋಡಿಗೆಹಳ್ಳಿ ನಿವಾಸಿಗಳಾದ ಗಣಪತಿ ನಾಯಕ್, ಸಂತೋಷ ಅಲಿಯಾಸ್ ಕಿಶನ್, ರಾಮೇಗೌಡ ಎಂದು ಗುರುತಿಸಲಾಗಿದ್ದು, ಯುವತಿಯ ಪತ್ತೆಗೆ ಬಲೆ ಬೀಸಲಾಗಿದೆ.