ಉಕ್ರೇನ್ ನಲ್ಲಿ ಸಿಲುಕಿಕೊಂಡಿರುವ ಉಜಿರೆಯ ವೈದ್ಯ ವಿದ್ಯಾರ್ಥಿನಿ !! | ಜೀವ ಭಯದಿಂದ ಇತರ ಕನ್ನಡಿಗರೊಂದಿಗೆ ಬಂಕರ್ ನಲ್ಲಿ ಅಡಗಿ ಕುಳಿತಿದ್ದಾಳೆ ಹೀನಾ ಫಾತಿಮಾ
ಬೆಳ್ತಂಗಡಿ :ಉಕ್ರೇನ್ ರಷ್ಯಾ ನಡುವೆ ಯುದ್ಧ ಆರಂಭವಾಗಿದ್ದು, ಉದ್ವಿಗ್ನ ಪರಿಸ್ಥಿತಿ ಎದುರಾಗಿದೆ. ಉಕ್ರೇನ್ನ ನಾಗರಿಕರ ಪರಿಸ್ಥಿತಿ ಹದಗೆಟ್ಟಿದ್ದು,ಜನರು ಬಾಂಬ್, ಕ್ಷಿಪಣಿ ದಾಳಿಗಳ ಭಯದಿಂದ ಅಂಡರ್ ಗ್ರೌಂಡ್ನಲ್ಲಿ ಅಡಗಿಕುಳಿತುಕೊಳ್ಳುತ್ತಿದ್ದಾರೆ.ಎಲ್ಲೆಂದರಲ್ಲಿ ದಾಳಿಗಳು ನಡೆದು ಜನ ಛಿದ್ರ ಛಿದ್ರವಾಗಿ ಸಾವನ್ನಪ್ಪುತ್ತಿದ್ದಾರೆ.
ಇದೀಗ ಉಕ್ರೇನ್ನಲ್ಲಿ ಬೆಳ್ತಂಗಡಿ ತಾಲೂಕಿನ ಉಜಿರೆಯ ನಿವಾಸಿನಿ, ವೈದ್ಯ ವಿದ್ಯಾರ್ಥಿನಿ ಹೀನಾ ಫಾತಿಮಾ ಇರೋ ಬಗ್ಗೆ ಮಾಹಿತಿ ಒದಗಿಬಂದಿದೆ.ಇವರು ಅವಖಾರ್ಕಿವ್ ನಲ್ಲಿ ಮಂಗಳವಾರ ರಷ್ಯಾ ದಾಳಿಗೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ನಿವಾಸಿ, ವೈದ್ಯ ವಿದ್ಯಾರ್ಥಿ ನವೀನ್ ಸಾವನ್ನಪ್ಪಿದ ಬೆನ್ನಿಗೇ ಅವರಿಗಿಂತ ಕೇವಲ 100 ಮೀಟರ್ ಅಂತರದಲ್ಲಿ ಬಂಕರ್ ನಲ್ಲಿ ಅಡಗಿಕೊಂಡಿದ್ದು ಅಪಾಯದ ಸ್ಥಿತಿಯಲ್ಲಿದ್ದಾರೆ ಎಂಬ ಸ್ಪೋಟಕ ಮಾಹಿತಿ ಹೊರಬಿದ್ದಿದೆ.
ಉಜಿರೆಯ ಟಿ.ಬಿ ಕ್ರಾಸ್ ನಿವಾಸಿ ದಿ. ಯಾಸೀನ್ ಮತ್ತು ಶಹನಾ ದಂಪತಿ ಪುತ್ರಿ ಹೀನಾ ಫಾತಿಮಾ ಅವರೇ ಯುದ್ಧಗ್ರಸ್ಥ ಉಕ್ರೇನ್ ನಾಡಿನಲ್ಲಿ ಪ್ರಾಣಾಪಾಯ ಎದುರಿಸುತ್ತಿರುವ ವಿದ್ಯಾರ್ಥಿನಿ.ದ್ವಿತೀಯ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿಯಾಗಿರುವ ಹೀನಾ ಅವರು ನಿನ್ನೆ ದಿನ ಮೃತಪಟ್ಟ ನವೀನ್ ಅವರ ಬ್ಯಾಚ್ ನಲ್ಲೇ ಕಲಿಯುತ್ತಿದ್ದಾರೆ ಎಂದು ಅವರ ಮಾವ, ಉದ್ಯಮಿ ಆಬಿದ್ ಅಲಿ ಅವರು ಮಾಹಿತಿ ನೀಡಿದ್ದಾರೆ.ನವೀನ್ ಸಾವಿಗೆ ಕಾರಣವಾದ ರಷ್ಯಾ ನಡೆಸಿದ ಗಂಭೀರ ಸ್ಪೋಟ ಇವರು ಇರುವ ಕಟ್ಟಡಕ್ಕಿಂತ ಕೇವಲ 100 ಮೀ. ದೂರದಲ್ಲಿ ಆಗಿದ್ದು,ಕಟ್ಟಡವೊಂದರ ತಳಹಂತದ ಬಂಕರ್ನಲ್ಲಿ ಹೀನಾ ಫಾತಿಮಾ ಸೇರಿದಂತೆ ಒಟ್ಟು 7 ಮಂದಿ ಕನ್ನಡಿಗ ವಿದ್ಯಾರ್ಥಿಗಳು ತಮ್ಮನ್ನು ರಕ್ಷಿಸಿಕೊಂಡಿದ್ದರು.
ವಿದೇಶಾಂಗ ಇಲಾಖೆ ಅವರ ಜೊತೆ ಸಂಪರ್ಕ ಸಾಧಿಸಿದ್ದು, ಅವರಿಗೆ ಧೈರ್ಯ ತುಂಬುವ ಕಾರ್ಯ ಮಾಡುತ್ತಿದೆ. ಅಲ್ಲಿಂದ ಬುಧವಾರ ದಿವಸ ಅವರನ್ನು ಹೊರಬರುವಂತೆ ನಿರ್ದೇಶಿದ್ದು, ರೈಲು ಮಾರ್ಗದ ಮೂಲಕ 1000 ಕಿ.ಮೀ. ದೂರದಲ್ಲಿರುವ ಲಿವಿನ್ ಎಂಬ ಗಡಿ ಪ್ರದೇಶಕ್ಕೆ ಪ್ರಯಾಣಕ್ಕೆ ವ್ಯವಸ್ಥೆ ಮಾಡಿದೆ ಎಂಬ ಮಾಹಿತಿ ಇದೆ. ಒಂದು ದಿನ ಪ್ರಯಾಣ ನಡೆಸಿ ಗಡಿ ಸೇರಿದರೆ ಅಲ್ಲಿಂದ ವಿಮಾನದ ಮೂಲಕ ಅವರನ್ನು ಭಾರತಕ್ಕೆ ಕರೆ ತರುವ ಬಗ್ಗೆ ಎಂಬೆಸ್ಸಿ ಯೋಜನೆ ರೂಪಿಸಿದೆ.
ಹೀನಾ ಫಾತಿಮಾ ಅವರ ಜೊತೆ ಚಿಕ್ಕಮಗಳೂರು, ಬೆಂಗಳೂರಿನ ಇತರ ಆರು ಮಂದಿ ಇದ್ದಾರೆ ಎಂದು ಮಾಹಿತಿ ಇದೆ. ಯುದ್ಧ ಆರಂಭವಾದ ದಿನಗಳಲ್ಲಿ ಅವರಿಗೆ ಬಿಸ್ಕೆಟ್ ಮತ್ತು ಬ್ರೆಡ್ ಖರೀದಿಗೆ ಹೊರಹೋಗಲು ಅನುಮತಿಸಲಾಗುತ್ತಿತ್ತು. ಆದರೆ ಮಂಗಳವಾರ ಕನ್ನಡಿಗ ನವೀನ್ ಸಾವನ್ನಪ್ಪುತ್ತಿರುವಂತೆ ಅಪಾಯದ ಸೂಚನೆ ರವಾನಿಸಿದೆ. ಇದೀಗ ರೈಲು ಪ್ರಯಾಣದ ವೇಳೆಯೂ ಅವರ ಜೀವಾಪಾಯದ ಬಗ್ಗೆ ಸರಕಾರ ಖಾತ್ರಿ ನೀಡಿಲ್ಲ ಎನ್ನಲಾಗಿದೆ.
ಪ್ರತಿಭಾನ್ವಿತೆಯಾಗಿರುವ ಹೀನಾ ಫಾತಿಮಾ ಅವರು ಉಜಿರೆ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಮುಗಿಸಿದ್ದರು. ಬಳಿಕ ನೀಟ್ ಪರೀಕ್ಷೆಯಲ್ಲಿ ವೈದ್ಯಕೀಯ ಕಲಿಕೆಗೆ ಪ್ರವೇಶಾಹರ್ತೆ ಪಡೆದು ಉಕ್ರೇನ್ ಗೆ ತೆರಳಿದ್ದರು.ಹೀನಾ ಅವರು ಮನೆಯಲ್ಲಿ ಇಬ್ಬರು ಮಾತ್ರ ಹೆಣ್ಣು ಮಕ್ಕಳಾಗಿದ್ದು ತಂದೆ ಈಗಾಗಲೇ ಮೃತರಾಗಿದ್ದಾರೆ. ಹೀನಾ ಅವರ ಅಕ್ಕ ನಿಶಾ ಫಾತಿಮಾ ಅವರು ಉಜಿರೆ ಎಸ್ಡಿಎಂ ಕಾಲೇಜಿನಲ್ಲಿ ಪದವಿ ಮುಗಿಸಿ ದುಬಾಯಿಯ ಕಂಪೆನಿಯೊಂದರಲ್ಲಿ ಎಕೌಂಟೆಂಟ್ ಆಗಿದ್ದಾರೆ.
ಹೀನಾ ಫಾತಿಮಾ ಅವರು ನನ್ನ ಸಹೋದರಿ ಮಗಳಾಗಿದ್ದು, ಅವಳು ಮನೆ ತಲುಪುವವರೆಗೆ ನಮಗೆ ಭಯ ಕಾದಿದೆ. ಇದೀಗ 1000 ಕಿ.ಮೀ ನಷ್ಟು ಅವರು ರೈಲಿನ ಮೂಲಕ ಪ್ರಯಾಣ ಮಾಡಿ ಗಡಿ ತಲುಪಬೇಕಿದೆ. ಪ್ರಯಾಣದ ವೇಳೆ ಅವರು ದೂರವಾಣಿ ಸಂಪರ್ಕಕ್ಕೂ ಸಿಗುತ್ತಿಲ್ಲ. ಅವರ ಪ್ರಯಾಣದ ದಾರಿ ಬಗ್ಗೆ ಸರಕಾರ ಕೂಡ ಖಾತ್ರಿ ನೀಡಿಲ್ಲ. ಯುದ್ಧಪೀಡಿತ ಪ್ರದೇಶಗಳ ಮೂಲಕ ರೈಲು ಹಾದು ಬರಲಿರುವುದರಿಂದ ಏನಾಗುತ್ತದೋ ಏನೋ ಎಂದು ಕ್ಷಣ ಕ್ಷಣ ಭಯ ಇದೆ. ಆದರೂ ದೃತಿಗೆಡದೆ ಮನೆಯವರಿಗೆ ಧೈರ್ಯ ತುಂಬುತ್ತಿದ್ದೇವೆ ಎಂದು ಆಕೆಯ ಮಾವ ಹೇಳಿದ್ದಾರೆ.
ಹೀನಾ ಅವರ ಮಾವ ಆಬಿದ್ ಅಲಿ ಮೂಲಕ ಅವರ ಮನೆಯವರನ್ನು ಡಿಸಿ ಕಚೇರಿಯಿಂದ ಮತ್ತು ಬೆಳ್ತಂಗಡಿ ತಹಶಿಲ್ದಾರ್ ಕಚೇರಿಯಿಂದ ಸಂಪರ್ಕಿಸಲಾಗುತ್ತಿದೆ.ತಾಲೂಕು ಕಚೇರಿಯಿಂದ ಉಪತಹಶೀಲ್ದಾರ್ ಮಲ್ಲಪ್ಪ ನಡುಗಡ್ಡಿ, ಉಜಿರೆ ಗ್ರಾಮ ಕರಣಿಕ ಪ್ರದೀಪ್ ಅವರು ಹೆತ್ತವರನ್ನು ಭೇಟಿ ಮಾಡಿ ಧೈರ್ಯ ತುಂಬಿದ್ದಾರೆ.