ಸಾರಿಗೆ ನೌಕರರಿಗೆ ಗುಡ್ ನ್ಯೂಸ್ !! | ವಜಾ ಆಗಿದ್ದ ನೌಕರರ ಮರುನೇಮಕಕ್ಕೆ ಚಾಲನೆ ನೀಡಿದ ರಾಜ್ಯ ಸರ್ಕಾರ

ಸಾರಿಗೆ ನೌಕರರಿಗೊಂದು ಸಿಹಿ ಸುದ್ದಿ ಇದೆ. ಸರ್ಕಾರದ ವಿರುದ್ಧ ಮುಷ್ಕರ ನಡೆಸಿ ವಜಾ ಆಗಿದ್ದ ಸಾರಿಗೆ ನೌಕರರ ಮರು ನೇಮಕಕ್ಕೆ ಸಾರಿಗೆ ಸಚಿವ ಶ್ರೀರಾಮುಲು ಚಾಲನೆ ನೀಡಿದ್ದಾರೆ.

ಹೌದು, ನಿನ್ನೆ 100 ಸಿಬ್ಬಂದಿ ಮರು ನೇಮಕಕ್ಕೆ ಆದೇಶ ನೀಡಲಾಗಿದೆ. ಒಟ್ಟು 1,610 ಸಿಬ್ಬಂದಿ ಮುಷ್ಕರದಿಂದ ಕೆಲಸ ಕಳೆದುಕೊಂಡಿದ್ದರು. ಮುಖ್ಯಮಂತ್ರಿ ಅಣತಿ ಮೇರೆಗೆ ಮರು ನೇಮಕಾತಿ ಆಗುತ್ತಿದೆ ಎಂದು ಶ್ರೀರಾಮುಲು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಕಾನೂನಲ್ಲಿ ಅವಕಾಶ ಇಲ್ಲದಿದ್ದರೂ ಮರುನೇಮಕ ಮಾಡಿಕೊಳ್ಳಲಾಗುತ್ತಿದೆ. ಇನ್ನುಳಿದ 1520 ಸಿಬ್ಬಂದಿ ಮರುನೇಮಕ ಹಂತ ಹಂತವಾಗಿ ಆಗಲಿದೆ. ಕಾಂಪ್ರಮೈಸ್ ಪ್ರಿಟಿಷನ್ ಮೂಲಕ ಮುಂದಿನ ದಿನಗಳಲ್ಲಿ ಪ್ರತಿಭಟನೆ ಮಾಡಬಾರದು ಎಂಬ ಮುಚ್ಚಳಿಕೆ ಬರೆಸಿಕೊಳ್ಳಲಾಗಿ ನಿರ್ಬಂಧಗಳನ್ನು ವಿಧಿಸಿದ್ದು, ಪ್ರತಿಭಟನೆ ಮಾಡಿದರೆ ಮತ್ತೆ ವಜಾ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ. ಮುಂದಿನ ದಿನಗಳಲ್ಲಿ ಮಾಸಾಂತ್ಯಕ್ಕೆ ವೇತನ ನೀಡುವ ಕೆಲಸ ಆಗಲಿದೆ. ಶುಕ್ರವಾರ ಮೆಗಾ ಅದಾಲತ್‌ನಲ್ಲಿ 200 ಮಂದಿಗೆ ಮರು ನೇಮಕ ಆಗಲಿದೆ. ತಿಂಗಳಾಂತ್ಯಕ್ಕೆ 700 ಮಂದಿ ಮರುನೇಮಕಾತಿ ಆಗಲಿದೆ ಎಂದರು.

ನಮ್ಮದು ಸೇವಾಭಾವನೆಯ ಸಂಸ್ಥೆ. ಸದ್ಯ 800 ವೋಲ್ವೋ ಬಸ್ ಓಡಾಡದೆ ನಿಂತಿದೆ. 3000 ಕೋಟಿ ರೂ. ಸರ್ಕಾರದಿಂದ ಇಲಾಖೆಗೆ ಬಂದಿದೆ. ಸದ್ಯಕ್ಕೆ ಬಸ್ ಪ್ರಯಾಣ ದರ ಹೆಚ್ಚಳ ಮಾಡುವ ಪ್ರಸ್ತಾಪ ನಮ್ಮ ಮುಂದಿಲ್ಲ ಎಂದು ಶ್ರೀರಾಮುಲು ಹೇಳಿದರು. 15 ದಿನಗಳಲ್ಲಿ 2 ಬಸ್‌ಗೆ ಬೆಂಕಿ ಹಚ್ಚಿರುವ ಕುರಿತ ವರದಿ ಶುಕ್ರವಾರ ನನ್ನ ಕೈ ಸೇರಲಿದೆ. ವರದಿ ಬಳಿಕ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು.

Leave A Reply

Your email address will not be published.