ಉಳ್ಳಾಲ : ಸಮುದ್ರ ಪಾಲಾಗುತ್ತಿದ್ದ ಎರಡು ಜೀವಗಳನ್ನು ರಕ್ಷಿಸಿ ಸಾಹಸ ಮೆರೆದ ಸ್ಥಳೀಯ ಜೀವರಕ್ಷಕ ಈಜುಗಾರರು

ಉಳ್ಳಾಲ : ಸೋಮೇಶ್ವರ ಸಮುದ್ರ ತೀರದಲ್ಲಿ ನೀರು ಪಾಲಾಗುತ್ತಿದ್ದ ಎರಡು ವರ್ಷದ ಮಗು ಮತ್ತು ಯುವಕನನ್ನು ಸ್ಥಳೀಯ ಜೀವರಕ್ಷಕ ಈಜುಗಾರರು ರಕ್ಷಿಸಿದ ಘಟನೆ ನಿನ್ನೆ ನಡೆದಿದೆ.

ಸಮುದ್ರದ ಬದಿಯ ಕಲ್ಲುಗಳ ಎಡೆಯಲ್ಲಿ ಎರಡು ವರ್ಷದ ಮಗುವಿನೊಂದಿಗೆ ತಾಯಿ ದಾಟುತ್ತಿದ್ದಾಗ ಅಲೆಯೊಂದು ಬಡಿದಿದ್ದು, ತಾಯಿಯ ಕೈಯಿಂದ ಮಗು ಜಾರಿ ಸಮುದ್ರದ ಅಲೆಯಲ್ಲಿ ಸಿಲುಕಿದ್ದು ತಕ್ಷಣ ಕಾರ್ಯಪ್ರವೃತ್ತರಾದ ಜೀವರಕ್ಷಕ ಈಜುಗಾರರು ಮಗುವನ್ನು ರಕ್ಷಿಸಿ ಪ್ರಥಮ ಚಿಕಿತ್ಸೆ ನೀಡಿ ತಾಯಿಗೆ ಒಪ್ಪಿಸಿದ್ದಾರೆ.

ಮಗು ರಕ್ಷಿಸಿ ಕೆಲವೇ ನಿಮಿಷಗಳಲ್ಲಿ ವಿಹಾರಕ್ಕೆಂದು ಆಗಮಿಸಿದ್ದ ಬೋಳಿಯಾರ್ ನಿವಾಸಿ ಶರೀಫ್ ರುದ್ರಪಾದೆಯಿಂದ ಜಾರಿ ಸಮುದ್ರಕ್ಕೆ ಬಿದ್ದಿದ್ದು,ಈ ಸಂದರ್ಭದಲ್ಲಿ ಜೀವ ರಕ್ಷಕ ಈಜುಗಾರರು ಸಮುದ್ರ ಪಾಲಾಗುತ್ತಿದ್ದ ಶರೀಫ್ ನನ್ನು ರಕ್ಷಿಸಿದ್ದಾರೆ.

ಕಳೆದೆರಡು ದಿನಗಳ ಹಿಂದೆ ಯುವತಿಯೊಬ್ಬಳನ್ನು ರಕ್ಷಿಸುವ ಮೂಲಕ ಜೀವರಕ್ಷಕ ಈಜುಗಾರರು ಸಾಹಸ ಮೆರೆದಿದ್ದರು. ಕರಾವಳಿ ಕಾವಲು ಪಡೆಯಿಂದ ನಿಯೋಜಿತರಾಗಿರುವ ಸ್ಥಳೀಯ ಜೀವರಕ್ಷಕರಾದ ಅಶೋಕ್ ಸೋಮೇಶ್ವರ,ಕಿರಣ್ ಭಾನುವಾರ ಇಬ್ಬರನ್ನು ರಕ್ಷಿಸುವಲ್ಲಿ ಸಾಹಸ ಮೆರದಿದ್ದು ಇವರಿಗೆ ಸ್ಥಳೀಯ ನಿವಾಸಿ ಸುನಿಲ್ ಸಹಕಾರ ನೀಡಿದ್ದರು.

Leave A Reply

Your email address will not be published.