ಬೆಳ್ತಂಗಡಿ:ತನ್ನ ಆಟೋದಲ್ಲಿ ಮನೆಯ ಕೀಯನ್ನು ಮರೆತು ಬಿಟ್ಟು ಹೋದ ಆಟೋ ಚಾಲಕ|ಆಟೋದಲ್ಲಿದ್ದ ಕೀಯನ್ನು ಕಳ್ಳರು ಕದ್ದು, ಮನೆಗೆ ನುಗ್ಗಿ ಕಳ್ಳತನ

ಬೆಳ್ತಂಗಡಿ:ತನ್ನ ಆಟೋದಲ್ಲಿ ಚಾಲಕರೊಬ್ಬರು ಮರೆತು ಬಿಟ್ಟು ಹೋಗಿದ್ದ ಮನೆಯ ಬೀಗದ ಕೀಯನ್ನು ಕಳ್ಳರು ಕದ್ದು, ಮನೆಗೆ ನುಗ್ಗಿ ಕಳ್ಳತನ ಮಾಡಿರುವ ಘಟನೆ ನಿನ್ನೆ ಕೊಕ್ಕಡದಲ್ಲಿ ನಡೆದಿದೆ.

ಕೊಕ್ಕಡ ಬಲಿಪಗುಡ್ಡೆ ನಿವಾಸಿ ಆಟೋ ರಿಕ್ಷಾ ಚಾಲಕ ಅಶೋಕ್ ಎಂಬವರ ಮನೆಯಲ್ಲಿ ಈ ಕೃತ್ಯ‌ ನಡೆದಿದ್ದು,1.60 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವುಗೈದಿದ್ದಾರೆ.

ಅಶೋಕ್ ರಿಕ್ಷಾವನ್ನು ಕೊಕ್ಕಡದಲ್ಲಿ ನಿಲ್ಲಿಸಿ ಪುತ್ತೂರಿಗೆ ತೆರಳಿದ್ದರು. ಈ ವೇಳೆ ಮನೆಯ ಬೀಗದ ಕೀಯನ್ನು ರಿಕ್ಷಾದಲ್ಲಿ ಮರೆತು ಹೋಗಿದ್ದರೆನ್ನಲಾಗಿದೆ.ಅವರು ಪುತ್ತೂರಿನಿಂದ ಹಿಂದಿರುಗಿ ಬಂದು ನೋಡಿದಾಗ ರಿಕ್ಷಾದಲ್ಲಿ ಕೀ ಕಾಣೆಯಾಗಿತ್ತು. ಬಳಿಕ ಅವರು ಮನೆಗೆ ತೆರಳಿದಾಗ ಕಳ್ಳತನವಾಗಿರುವುದು ಗೊತ್ತಾಗಿದೆ.

ಮನೆಯ ಬೀಗ ತೆಗೆದು ಒಳ ನುಗ್ಗಿರುವ ಕಳ್ಳರು,
ಕಪಾಟಿನ ಬೀಗ ಒಡೆದು ಅದರೊಳಗಿದ್ದ ಸುಮಾರು 1.60 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ದೋಚಿದ್ದಾರೆಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.
ಪರಿಚಿತರಿಂದಲೇ ಈ ಕಳ್ಳತನ ನಡೆದಿರುವ ಬಗ್ಗೆ ಅನುಮಾನ ಮೂಡಿದ್ದು,ಚಾಲಕ ಮನೆಯ ಕೀ ಇಟ್ಟ ವಿಚಾರ ಹಾಗೂ ಮನೆಯ ವಿಳಾಸ ಗೊತ್ತಿರುವವರೇ ಈ ಕೃತ್ಯ ಮಾಡಿದ್ದಾರೆಂದು‌ ಹೇಳಲಾಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

Leave A Reply

Your email address will not be published.