35 ವರ್ಷಗಳ ಬಳಿಕ ಕ್ರಿಶ್ಚಿಯನ್ ಧರ್ಮದಿಂದ ಹಿಂದೂ ಧರ್ಮಕ್ಕೆ ವಾಪಸ್ಸಾದ 9 ಸದಸ್ಯರ ಕುಟುಂಬ !! | ವಿಹಿಂಪ, ಬಜರಂಗದಳದ ಮುಂದಾಳತ್ವದಲ್ಲಿ ನಡೆಯಿತು ಘರ್ ವಾಪಸಿ ಕಾರ್ಯಕ್ರಮ

ರಾಜ್ಯ ಸರ್ಕಾರ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತರಬೇಕು ಎಂಬ ಸಂದರ್ಭದಲ್ಲಿಯೇ, ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಅಂತರಗಂಗೆ ಗ್ರಾಮದ ಜಯಶೀಲನ್ ಮತ್ತು ಜಯಮ್ಮ ಎಂಬುವರು 35 ವರ್ಷಗಳ ಬಳಿಕ ತಮ್ಮ ಕುಟುಂಬ ಸಮೇತ ಕ್ರಿಶ್ಚಿಯನ್ ಧರ್ಮದಿಂದ ಹಿಂದೂ ಧರ್ಮಕ್ಕೆ ವಾಪಸ್ ಆಗಿದ್ದಾರೆ.

ಕ್ರಿಶ್ಚಿಯನ್ ಧರ್ಮದಿಂದ ಹಿಂದೂ ಧರ್ಮಕ್ಕೆ ವಾಪಸ್ ಆದ ಜಯಶೀಲನ್ ಅವರ ಕುಟುಂಬ ಮೂಲತಃ ಹಿಂದೂ ಧರ್ಮದವರು. ಇವರ ತಂದೆ ಏಳುಮಲೈ ಅವರು 1985ರಲ್ಲಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಿದ್ದರಂತೆ. ನಂತರ ಕುಟುಂಬದವರು ಯಾರೂ ಸಹ ಚರ್ಚ್ ಗೆ ಹೋಗದೆ, ಹಿಂದೂ ಧರ್ಮದ ಆಚರಣೆಯನ್ನೇ ಅನುಸರಿಸುತ್ತಿದ್ದರು ಎನ್ನಲಾಗಿದೆ.

ಹೀಗಾಗಿಯೇ ಭದ್ರಾವತಿಯ ವಿಶ್ವ ಹಿಂದೂ ಪರಿಷತ್, ಬಜರಂಗದಳದ ಮುಖಂಡರು ಜಯಶೀಲನ್ ಹಾಗೂ ಜಯಮ್ಮ ಅವರ ಕುಟುಂಬದವರೊಡನೆ ಮಾತನಾಡಿ, ಅವರ ಕುಟುಂಬ ಸದಸ್ಯರಾದ ಪ್ರಭಾಕರನ್, ಅವರ ಪತ್ನಿ ಲಲಿತಾ ಪ್ರಭಾಕರನ್ ಹಾಗೂ ಮಕ್ಕಳಾದ ಭರತ್ ಕುಮಾರ್, ಭಾವನಾ, ದ್ವಿತೀಯ ಪುತ್ರ ಪ್ರಕಾಶ್, ಶ್ವೇತಾ ಹಾಗೂ ಪೃಥ್ವಿ ಇಂದು ಪುನಃ ಹಿಂದೂ ಧರ್ಮಕ್ಕೆ ವಾಪಸ್ ಆಗಿದ್ದಾರೆ.

ಘರ್ ವಾಪಸಿ ಕಾರ್ಯಕ್ರಮವು ಭದ್ರಾವತಿ ಜನ್ನಾಪುರದ ಸಾರ್ವಜನಿಕ ರಾಮ ಭಜನಾ ಮಂದಿರದಲ್ಲಿ ನಡೆಯಿತು. ಘರ್ ವಾಪಸಿಯನ್ನು ವಿಎಚ್‍ಪಿ ಮುಖಂಡ ರಾಮಪ್ಪ, ಕೃಷ್ಣಮೂರ್ತಿ ಸೋಮಯಾಜಿ, ಅರಕೆರೆಯ ಕರಿಸಿದ್ದೇಶ್ವರ ಸ್ವಾಮೀಜಿ ಅವರ ಸಮ್ಮುಖದಲ್ಲಿ ಹಿಂದೂ ಧರ್ಮಕ್ಕೆ ವಾಪಸ್ ಆಗಿದ್ದಾರೆ.

Leave A Reply

Your email address will not be published.