ಬೆಳ್ತಂಗಡಿ: ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ನದಿತಟದಲ್ಲಿ ಪತ್ತೆ , ಸಾವಿನ ಸುತ್ತ ಹಲವಾರು ಶಂಕೆ

ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ 9 ದಿನದ ಬಳಿಕ ನದಿ ದಡದಲ್ಲಿ ಪತ್ತೆಯಾದ ಘಟನೆ ಬೆಳ್ತಂಗಡಿ ತಾಲೂಕಿನ ಅರಸಿನಮಕ್ಕಿಯಲ್ಲಿ ನಡೆದಿದೆ.

ಅರಸಿನಮಕ್ಕಿ ಗ್ರಾಮ ಪಂಚಾಯತ್ ನ ಮಾಜಿ ಉಪಾಧ್ಯಕ್ಷರಾಗಿದ್ದ ಕುಂಟಾಲಪಳಿಕೆ ಅಣ್ಣುರವರ ಪುತ್ರ ಗಣೇಶ್ (24ವ) ಮೃತ ವ್ಯಕ್ತಿ. ಗಣೇಶ್ ರವರು ಡಿ.14ರಂದು ನಾಪತ್ತೆಯಾಗಿದ್ದು, 9 ದಿನದ ಬಳಿಕ ನಿನ್ನೆ ಶವವಾಗಿ ಸಂಜೆ ಕಪಿಲ ನದಿಯ ದಡದಲ್ಲಿ ಪತ್ತೆಯಾಗಿದ್ದಾರೆ.

ತನ್ನ ತಂದೆಯೊಂದಿಗೆ ಕೆಲಸಕ್ಕೆ ಹೋಗುತ್ತಿದ್ದ ಗಣೇಶ್‌ರವರು ಡಿ.14 ರಂದು ಕೂಡಾ ಕೆಲಸಕ್ಕೆ ಹೋದವರು ರಾತ್ರಿ 9.00 ಗಂಟೆಯ ಹೊತ್ತಿಗೆ ಅಂಗಡಿಗೆಂದು ಹೋದವರು ನಂತರ ಮನೆಗೆ ಬರದೇ ನಾಪತ್ತೆಯಾಗಿದ್ದರು. ಅಂದಿನಿಂದ ಎಲ್ಲಾ ಕಡೆ ಹುಡುಕಾಡಿದರು ಪತ್ತೆಯಾಗಿರಲಿಲ್ಲ. ನಿನ್ನೆ ಸಂಜೆ ಕುಂಟಾಲಪಳಿಕೆ ಭಜನಾ ಮಂದಿರದ ಬಳಿ ಕಪಿಲಾ ನದಿಯ ದಡದಲ್ಲಿ ಅವರ ಮೃತದೇಹ ಪತ್ತೆಯಾಗಿದೆ.

ಸ್ಥಳಕ್ಕೆ ಧರ್ಮಸ್ಥಳ ಪೊಲೀಸ್ ಠಾಣೆಯ ಪೊಲೀಸರು ಆಗಮಿಸಿ ತನಿಖೆ ನಡೆಸುತ್ತಿದ್ದಾರೆ. ಇವರ ಸಾವಿನ ಬಗ್ಗೆ ಜನರಲ್ಲಿ ಹಲವಾರು ಶಂಕೆಗಳು ವ್ಯಕ್ತವಾಗಿದ್ದು, ಪೊಲೀಸರ ತನಿಖೆ ಬಳಿಕವಷ್ಟೇ ನಿಖರವಾದ ಕಾರಣ ತಿಳಿದು ಬರಬೇಕಾಗಿದೆ.

Leave A Reply

Your email address will not be published.