ರೈತ ಕುಟುಂಬದ ಎಲ್ಲಾ ಮಕ್ಕಳಿಗೂ ‘ವಿದ್ಯಾನಿಧಿ’ ಯೋಜನೆ !!| ಇನ್ನು ಮುಂದೆ ಅರ್ಜಿ ಸಲ್ಲಿಸದೆಯೇ ಈ ಯೋಜನೆಯ ಫಲಾನುಭವಿಗಳಾಗಬಹುದು

ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ವಿದ್ಯಾನಿಧಿ ಯೋಜನೆಗೆ ಇನ್ನು ಯಾರೂ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ಸರಕಾರದಲ್ಲಿರುವ ರೈತರ ದಾಖಲೆಗಳ ಆಧಾರದಲ್ಲೇ ಫ‌ಲಾನುಭವಿಗಳನ್ನು ಆರಿಸಿ ವಿದ್ಯಾನಿಧಿ ವಿದ್ಯಾರ್ಥಿವೇತನ ನೀಡಲು ಸರಕಾರ ನಿರ್ಧರಿಸಿದೆ.ಈ ಕುರಿತು ಶುಕ್ರವಾರ ಪರಿಷ್ಕೃತ ಆದೇಶ ಹೊರಡಿಸಲಾಗಿದೆ

‘ರೈತ ವಿದ್ಯಾನಿಧಿ’ ಯೋಜನೆಯನ್ನು ಮಾರ್ಪಡಿಸುವ ಮೂಲಕ ರಾಜ್ಯ ಸರಕಾರ ಯೋಜನೆಯನ್ನು ಮತ್ತಷ್ಟು ಸರಳ ಮತ್ತು ವಿಸ್ತೃತಗೊಳಿಸಿ ಆದೇಶ ಹೊರಡಿಸಿದೆ. ಆದೇಶ ಮಾರ್ಪಡಿಸುತ್ತಿದ್ದಂತೆ ಶನಿವಾರ ಒಂದೇ ದಿನ 70 ಸಾವಿರ ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ಭಾಗ್ಯ ದೊರೆತಿದೆ. ಇಂದು 2 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ಸೌಲಭ್ಯ ಸಿಗಲಿದೆ ಎಂದು ಕೃಷಿ ಇಲಾಖೆ ತಿಳಿಸಿದೆ.

ರೈತ ಮಕ್ಕಳಿಗಷ್ಟೇ ಈ ಮೊದಲು ವಿದ್ಯಾನಿಧಿ ಮಿತಿಗೊಳಿಸಿದ್ದ ಸರಕಾರ, ಆದೇಶವನ್ನು ಮಾರ್ಪಡಿಸಿ ರೈತ ಕುಟುಂಬದ ಎಲ್ಲ ಮಕ್ಕಳಿಗೂ ವಿದ್ಯಾನಿಧಿ ನೀಡುವಂತೆ ಆದೇಶಿಸಿದೆ. ಅಲ್ಲದೆ, ರಾಜ್ಯ ಸರಕಾರದ ಯಾವುದೇ ಇಲಾಖೆಯಿಂದ, ಯಾವುದೇ ರೀತಿಯ ವಿದ್ಯಾರ್ಥಿ ವೇತನ ಪಡೆದಿದ್ದರೂ/ ಪಡೆಯಲು ಅರ್ಜಿ ಸಲ್ಲಿಸಿದ್ದರೂ ವಿದ್ಯಾ ನಿಧಿಗೆ ರೈತ ಕುಟುಂಬದ ಮಕ್ಕಳು ಅರ್ಹರೆಂದು ತಿಳಿಸಿದೆ.

ಮುಖ್ಯವಾಗಿ ವಿದ್ಯಾನಿಧಿ ಪಡೆಯಲು ಅರ್ಜಿಯನ್ನೇ ಸಲ್ಲಿಸುವಂತಿಲ್ಲ. ಅರ್ಜಿ ಸಲ್ಲಿಸದೇ ಖಾತೆಗೆ ವಿದ್ಯಾನಿಧಿ ಮೊತ್ತ ಜಮೆ ಆಗಲಿದೆ. ಸರಕಾರ ಹೊರಡಿಸಿದ್ದ ಈ ಮೊದಲಿನ ಆದೇಶದಲ್ಲಿ ನಾನಾ ಗೊಂದಲಗಳಿದ್ದ ಕಾರಣ ಕೇವಲ 16 ಸಾವಿರ ಮಕ್ಕಳಿಗಷ್ಟೇ ವಿದ್ಯಾರ್ಥಿ ವೇತನ ಲಭಿಸಲು ಸಾಧ್ಯವಾಗಿತ್ತು.

ಅರ್ಜಿ ಸಲ್ಲಿಸದೇ ವಿದ್ಯಾನಿಧಿ ಹೇಗೆ?

ಶಿಷ್ಯ ವೇತನಕ್ಕೆ ಸಂಬಂಧಿಸಿದ ‘ರಾಜ್ಯ ವಿದ್ಯಾರ್ಥಿ ವೇತನ'(ಎಸ್‌ಎಸ್‌ಪಿ)ತಂತ್ರಾಂಶ, ಕೃಷಿ ಇಲಾಖೆಯಲ್ಲಿ ರೈತರು ನೋಂದಣಿ ಮಾಡಿಸಕೊಂಡರುವ ತಂತ್ರಾಂಶ ಹಾಗೂ ಪಡಿತರ ಚೀಟಿ ವಿತರಿಸುವ ‘ಕುಟುಂಬ’ ತಂತ್ರಾಂಶ ಸೇರಿ ಮೂರು ತಂತ್ರಾಂಶಗಳನ್ನು ಸರಕಾರ ಆನ್‌ಲೈನ್‌ ಮೂಲಕ ಇ-ಆಡಳಿತ ಸಂಯೋಜಿಸಿದೆ.

ಕುಟುಂಬ ತಂತ್ರಾಂಶದಲ್ಲಿ ರೈತರ ಮಾಹಿತಿ/ಪಡಿತರ ಚೀಟಿಯಲ್ಲಿನ ಮಾಹಿತಿ ಸಿಗುತ್ತದೆ. ಶಿಕ್ಷಣ ಸಂಸ್ಥೆಯಲ್ಲಿ ಮಕ್ಕಳು ಪ್ರವೇಶ ಪಡೆದ ನಂತರ ಎಸ್‌ಎಸ್‌ಪಿ ತಂತ್ರಾಂಶದಲ್ಲಿ ಮಕ್ಕಳ ಹಾಗೂ ಕುಟುಂಬಸ್ಥರ ಆಧಾರ್‌ ನೋಂದಣಿ, ಮಕ್ಕಳ ಬ್ಯಾಂಕ್‌ ಖಾತೆ ನೋಂದಣಿ ಆಗುವುದರಿಂದ ಒಂದೇ ಆನ್‌ಲೈನ್‌ ವೇದಿಕೆಯಲ್ಲಿ ರೈತ ಕುಟುಂಬದ ಮಾಹಿತಿಯು ಕೃಷಿ ಇಲಾಖೆಗೆ ಲಭಿಸುತ್ತಿದೆ. ಹೀಗಾಗಿ, ರೈತ ಮಕ್ಕಳನ್ನು ಗುರುತಿಸುವುದು ಕೃಷಿ ಇಲಾಖೆಗೆ ಸುಲಭವಾಗುತ್ತಿದೆ. ಈ ಹಿನ್ನೆಲೆಯಲ್ಲಿಅರ್ಜಿ ಸಲ್ಲಿಸದೇ ವಿದ್ಯಾನಿಧಿ ವಿದ್ಯಾರ್ಥಿ ಖಾತೆಗೆ ಜಮೆ ಆಗುತ್ತಿದೆ.

ಮಾರ್ಪಾಡಿಗೆ ಕಾರಣವೇನು?

ಗ್ರಾಮೀಣ ಪ್ರದೇಶದಲ್ಲಿ ಕೃಷಿ ಜಮೀನುಗಳು ಭಾಗಶಃ ಇನ್ನೂ ಹಂಚಿಕೆ ಆಗದೇ ಉಳಿದಿವೆ. ಜೀವನಕ್ಕಾಗಿ ಅಣ್ಣ-ತಮ್ಮಂದಿರು ತಮ್ಮ ಕೃಷಿ ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದರೂ ಜಮೀನಿನ ಮಾಲಿಕತ್ವ ಇನ್ನೂ ಅಜ್ಜ ಹೆಸರಲ್ಲೇ ಇದೆ. ಹೀಗಾಗಿ ಮಕ್ಕಳ/ಮೊಮ್ಮಕ್ಕಳನ್ನು ರೈತ ಮಕ್ಕಳೆಂದು ಗುರುತಿಸಲು ಗೊಂದಲವಿತ್ತು. ಅಲ್ಲದೆ, ಸರಕಾರದ ನಾನಾ ಇಲಾಖೆ, ನಿಗಮಗಳು, ಕೇಂದ್ರ ಸರಕಾರದ ವಿದ್ಯಾರ್ಥಿ ವೇತನಗಳನ್ನು ಪಡೆದು ಶಿಕ್ಷಣ ಪಡೆಯುತ್ತಿರುವವರ ಸಂಖ್ಯೆ ಅಧಿಕವಾಗಿರುವುದರಿಂದ ವಿದ್ಯಾನಿಧಿ ಸೌಲಭ್ಯ ಎಲ್ಲರಿಗೂ ಲಭಿಸುತ್ತಿರಲಿಲ್ಲ.

Leave A Reply

Your email address will not be published.