‘ ಆಕಾಶವನ್ನು ಅಳೆಯುವುದಕ್ಕೆ ಮುನ್ನ ಅಂಗಳ ಅಳೆಯುವ ಸಾಮರ್ಥ್ಯ ಇರಬೇಕು’ | ನೆಟ್ಟಗೆ ಒಂದು ಕ್ಷೇತ್ರದಿಂದ ನಿಂತು ಗೆಲ್ಲೋ ಸಾಮರ್ಥ್ಯ ಇಲ್ಲ, ಮುಖ್ಯಮಂತ್ರಿ ಆಗ್ತಾರಂತೆ ಬುರುಡೆ ರಾಮಯ್ಯ- ಕಿಚಾಯಿಸಿದ ಬಿಜೆಪಿ
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಮತ್ತೆ ಭಾರತೀಯ ಜನತಾ ಪಕ್ಷ ಕಿಚಾಯಿಸಿದೆ. ಈ ಸಂಬಂಧ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿಯು ” ಆಕಾಶವನ್ನು ಅಳೆಯುವುದಕ್ಕೆ ಮುನ್ನ ಅಂಗಳ ಅಳೆಯುವ ಸಾಮರ್ಥ್ಯ ಇರಬೇಕು” ಎಂದು ಪಕ್ಕೆ ತಿವಿದು ಛೇಡಿಸಿದೆ.
” ಸಿದ್ದು ಸರ್, ಮತ್ತೊಮ್ಮೆ ಮುಖ್ಯಮಂತ್ರಿಯಾಗುತ್ತೇನೆ ಎಂದು ಅಬ್ಬರಿಸುವುದಕ್ಕೆ ಮುನ್ನ ನೆಟ್ಟಗೆ ಒಂದು ಕ್ಷೇತ್ರದಲ್ಲಿ ಗೆಲ್ಲುವ ಸಾಮರ್ಥ್ಯ ಇರಬೇಕು. ಮತ್ತೊಮ್ಮೆ ಮುಖ್ಯಮಂತ್ರಿಯಾಗಬೇಕೆಂದು ಹಂಬಲಿಸುವ ಸಿದ್ದರಾಮಯ್ಯ ಅವರೇ, ಗೆಲ್ಲುವುದಕ್ಕಾಗಿ ನಿಮಗೊಂದು ಗಟ್ಟಿ ಕ್ಷೇತ್ರವೇ ಇಲ್ಲವಲ್ಲ ಸ್ವಾಮೀ. ಈ ರೀತಿ ಕ್ಷೇತ್ರದಿಂದ ಕ್ಷೇತ್ರಕ್ಕೆ ವಲಸೆ ಹೋಗುವ ಬದಲು ರಾಜಕೀಯ ನಿವೃತ್ತಿ ಕ್ಷೇಮವಲ್ಲವೇ? ಬುರುಡೆರಾಮಯ್ಯ” ಎಂದು ಹೀಯಾಳಿಸಿದೆ.
ಹಾವು ಸಾಯಬಾರದು, ಕೋಲು ಮುರಿಬಾರದು ಎಂಬ ಲೆಕ್ಕಾಚಾರವನ್ನು ಚುನಾವಣೆಯವರೆಗೂ ಉಳಿಸಿಕೊಳ್ಳಲು ಸಿದ್ದರಾಮಯ್ಯ ಈಗ ಹೆಣಗಾಡುವಂತಾಗಿದೆ. ವಲಸೆ ನಾಯಕ ಸಿದ್ದರಾಮಯ್ಯ ಅವರ ಮೇಲೆ ಚಿಮ್ಮನಕಟ್ಟಿ ಎಫೆಕ್ಟ್ ಜೋರಾಗಿರುವಂತೆ ಕಾಣುತ್ತಿದೆ! ಸಿದ್ದರಾಮಯ್ಯ ಅವರೇ, ಒಟ್ಟಾರೆಯಾಗಿ ನೀವು ಏನು ಹೇಳಿದ ಹಾಗೆ ಆಯ್ತು? ಹೈಕಮಾಂಡ್ ಸೂಚನೆ ಮೇರೆಗೆ ಚಾಮರಾಜಪೇಟೆಯಿಂದ ಕಣಕ್ಕೆ ಇಳಿಯುತ್ತಿದ್ದೇನೆ ಎಂದು ಈಗಲೇ “ಕೇವಿಯಟ್” ಹಾಕಿಕೊಳ್ಳುವುದಕ್ಕೆ ಮಾಜಿ ವಕೀಲ ಸಾಹೇಬರು ಹೊರಟ ಹಾಗಿದೆಯಲ್ಲವೇ? ಎಂದು ಪ್ರಶ್ನಿಸಿದೆ.
ಇದೆಲ್ಲ ಶುರುವಾದದ್ದು ಸಿದ್ದರಾಮಯ್ಯನ ವಿರುದ್ದ ಚಾವಟಿ ಹಿಡ್ಕೊಂಡು ತಿರುಗಿ ಬಿದ್ದ ಬಾದಾಮಿಯ ಮಾಜಿ ಶಾಸಕ ಬಿಬಿ ಚಿಮ್ಮನಕಟ್ಟಿ ಅವರ ಹೇಳಿಕೆಯಿಂದ. ಬಾದಾಮಿಯಲ್ಲಿ 5 ಬಾರಿ ಗೆದ್ದ ಸರದಾರ ಬಿಬಿ ಚಿಮ್ಮನಕಟ್ಟಿ. ಅಂಥವರು ಸಿದ್ದು ಮುಖ್ಯಮಂತ್ರಿ ಆಗ್ತಾರೆ, ಆಗಲಿ ಎಂದು ಸಿದ್ದುಗೆ ಸೀಟು ಬಿಟ್ಟು ಕೊಟ್ಟಿದ್ದರು.
ಅತ್ತ ಸಿದ್ದರಾಮಯ್ಯನವರು 2018ರಲ್ಲಿ ಮೈಸೂರಿನ ವರುಣಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದರೆ ಸುಲಭವಾಗಿ ಗೆಲ್ಲುತ್ತಿದ್ದರು. ಆದರೆ ಅವರು ಮಗ ಯತೀಂದ್ರಗೆ ಬೇಕಾಗಿ ಕ್ಷೇತ್ರ ಬಿಟ್ಟುಕೊಟ್ಟರು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದುಗೆ ಅವರ ಜೆಡಿಎಸ್ ಮತ್ತು ಬಿಜೆಪಿ ವಿರೋಧಿಗಳು ಆಳವಾದ ಹೊಂಡ ತೋಡಿ ಮಿಕ ಬೇಳಿಸೋದಕ್ಕೆ ಕತ್ತಲಲ್ಲೇ ಕಾಯುತ್ತಿದ್ದರು. ಅದರ ವಾಸನೆ ಅರಿತ ಸಿದ್ದು ಜಾರಿಕೊಂಡು ಬಾದಾಮಿಗೆ ಎಂಟ್ರಿ ಕೊಟ್ಟರು. ಆಗ ಚಿಮ್ಮನ ಕಟ್ಟಿ ಅವರಿಗೆ ಸ್ಥಾನ ಬಿಟ್ಟು ಕೊಟ್ಟು ಸಹಾಯ ಮಾಡಿದ್ದರು.
ಅದಕ್ಕೆ ಪ್ರತಿಯಾಗಿ ಚಿಮ್ಮನಕಟ್ಟಿಯವರಿಗೆ ವಿಧಾನ ಪರಿಷತ್ ಸದಸ್ಯ ಅಥವಾ ಪಕ್ಷದಲ್ಲಿ ಉತ್ತಮ ಹುದ್ದೆ ಕೊಡಿಸುವ ಭರವಸೆಯನ್ನು ಕೂಡ ನೀಡಲಾಗಿತ್ತು. ಆದರೆ ಏನೂ ಮಾಡಲೂ ಸಿದ್ದು ಸಿದ್ಧವಿರಲಿಲ್ಲ. ಇದು ಚಿಮ್ಮನಕಟ್ಟಿ ಅವರನ್ನು ಕೆರಳಿಸಿದೆ. ಈ ಸಲ ಕೂಡಾ ಬಿಟ್ಟು ಕೊಟ್ಟರೆ ತಮ್ಮ ರಾಜಕೀಯ ಖೆಡ್ಡಾ ತಾವೇ ತೋಡಿಕೊಂಡ ಹಾಗೆ ಎಂದರಿತ ಚಿಮ್ಮನಕತ್ತಿ ಚುನಾವಣೆಗೆ ಇನ್ನೆರಡು ವರ್ಷ ಇದೆ ಹಿಂದುವಾಗಲಿ ಕತ್ತಿಮಸೆ ಯಲು ಪ್ರಾರಂಭಿಸಿದ್ದಾರೆ.
‘ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಿ ಪ್ರಬಲ ಪೈಪೋಟಿ ನೀಡಲು ಸಾಧ್ಯವಾಗುವುದಿಲ್ಲ ಎಂದಾದರೆ ಸಿದ್ದರಾಮಯ್ಯನವರು ಚುನಾವಣೆಯಲ್ಲಿ ಏಕೆ ಸ್ಪರ್ಧಿಸಬೇಕು? ‘ ಎಂದು ಬಿಜೆಪಿ ಕೇಳುವ ಮೊದಲೇ ಚಿಮ್ಮನಕಟ್ಟಿ ಪ್ರಶ್ನೆ ಪಬ್ಲಿಕ್ ಮುಂದೆ ಬಿಟ್ಟಿದ್ದಾರೆ. ಸಿದ್ದು ಇನ್ನೊಬ್ಬ ಕಾಂಗ್ರೇಸ್ ಶಾಸಕನ ಸ್ಥಾನ ಕದಿಯುವ ಪ್ಲಾನ್ ನಲ್ಲಿ ಫುಲ್ ಬಿಜಿ.