ಪದ್ಮುಂಜ : ಹಟ್ಟಿಗೆ ಚಿರತೆ ದಾಳಿ ,ಅಪಾಯದಿಂದ ಪಾರಾದ ಜಾನುವಾರು

ಬೆಳ್ತಂಗಡಿ : ಪದ್ಮುಂಜದ ನೆಕ್ಕಿಲು ನಿವಾಸಿ ಸಾಂತಪ್ಪ ಪೂಜಾರಿಯವರ ದನದ ಹಟ್ಟಿಗೆ ಚಿರತೆಯೊಂದು ದಾಳಿ ಮಾಡಿದ ಘಟನೆ ನ. 28 ರಂದು ರಾತ್ರಿ ನಡೆದಿದೆ.

ಮನೆಯವರೆಲ್ಲರೂ ರಾತ್ರಿ ಮಲಗಿದ್ದ ವೇಳೆ, ತಮ್ಮ ಸಾಕು ನಾಯಿಯು ಬೊಗಳಿದ ಸದ್ದಿಗೆ ಎದ್ದ ಮನೆಯವರು ಹಟ್ಟಿಗೆ ನುಗ್ಗಿ ಹಟ್ಟಿಯೊಳಗಿದ್ದ ಹಸುವನ್ನು ಹಿಡಿಯಲು ಯತ್ನಿಸುತ್ತಿರುವ ಚಿರತೆಯನ್ನು ಕಂಡು ಜೋರಾಗಿ ಬೊಬ್ಬೆ ಹೊಡೆದು ಓಡಿಸಲು ಯತ್ನಿಸಿದ್ದರು.

ಕೂಡಲೇ ಚಿರತೆಯು ಅಲ್ಲಿಂದ ಕಾಲ್ಕಿತ್ತಿದ್ದು, ಹಸುವು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದೆ.

ಹೆಜ್ಜೆಯ ಗುರುತಿನ ಆಧಾರದ ಮೇಲೆ ಅರಣ್ಯ ಇಲಾಖೆಯವರು ಇದು ಚಿರತೆಯ ಹೆಜ್ಜೆಯೆಂದು ಸಂಶಯ ವ್ಯಕ್ತಪಡಿಸಿದ್ದು, ಚಿರತೆಗೆ ಬೋನು ಇಡುವುದಾಗಿ ತಿಳಿಸಿದ್ದಾರೆ.

ಎರಡು ತಿಂಗಳ ಹಿಂದೆಯೇ ಪದ್ಮುಂಜ ಸುತ್ತಮುತ್ತಲಿನ ಪರಿಸರದಲ್ಲಿ ಚಿರತೆ ಓಡಾಡುತ್ತಿರುವ ಬಗ್ಗೆ ಶಂಕೆಯಿದ್ದು, ಇದೀಗ ಸಾಂತಪ್ಪ ಪೂಜಾರಿಯವರೇ ಸದೃಶ ಚಿರತೆಯಿರುವುದನ್ನು ಕಂಡಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿದೆ.

Leave A Reply

Your email address will not be published.