ಮಂಗಳೂರು : ಪ್ರಾರ್ಥನೆ ವೇಳೆ ಕುಸಿದು ಬಿದ್ದು ಧರ್ಮಗುರು ವಲೇರಿಯನ್ ಲೆವಿಸ್ ನಿಧನ

ಮಂಗಳೂರು : ಕಾಟಿಪಳ ಇನ್‌ಫೆಂಟ್ ಮೇರಿ ಚರ್ಚ್‌ನ ಧರ್ಮಗುರು ವಂ| ವಲೇರಿಯನ್ ಲೆವಿಸ್ (55) ಅವರು ನ. 21ರಂದು ಚರ್ಚ್‌ನಲ್ಲಿ ಬಲಿ ಪೂಜೆಯ ಸಂದರ್ಭ ಹೃದಯಾಘಾತದಿಂದ ನಿಧನ ಹೊಂದಿದರು.

ಚರ್ಚ್‌ನ ವಾರ್ಷಿಕ ಉತ್ಸವ ಮುಂದಿನ ಬುಧವಾರ ನಡೆಯಲಿದ್ದು, ಅದಕ್ಕೆ ಪೂರ್ವಭಾವಿಯಾಗಿ ರವಿವಾರ ಸಂಜೆ ಬಲಿ ಪೂಜೆ ಮತ್ತು ಪ್ರಸಾದದ ಮೆರವಣಿಗೆ ಜರಗಿತ್ತು. ಮೆರವಣಿಗೆಯ ಬಳಿಕ ಪರಮ ಪ್ರಸಾದದ ಆರಾಧನೆಯ ಸಂದರ್ಭ ಹೃದಯಾಘಾತಕ್ಕೆ ಒಳಗಾಗಿ ಕುಸಿದು ಬಿದ್ದಿದ್ದರು.

ಮೂಲತಃ ಪುತ್ತೂರು ನಿವಾಸಿಯಾಗಿದ್ದ ಅವರಿಗೆ 1995ರಲ್ಲಿ ಗುರು ದೀಕ್ಷೆ ಲಭಿಸಿತ್ತು. ಬಳಿಕ 1995-96ರಲ್ಲಿ ಬಾರ್ಕೂರು ಚರ್ಚ್‌ನಲ್ಲಿ ಸಹಾಯಕ ಗುರು ಹಾಗೂ ಬಳಿಕ ಜಪ್ಪು ಸಂತ ಆಂತೋಣಿ ಆಶ್ರಮದ ಸಹಾಯಕ ನಿರ್ದೇಶಕ, 1998-2000 ಅವಧಿಯಲ್ಲಿ ವಾಮಂಜೂರು ಚರ್ಚ್‌ನಲ್ಲಿ ಸಹಾಯಕ ಗುರು, ಬಳಿಕ ಕೊಕ್ಕಡ, ಸುಳ್ಯ ಹಾಗೂ ಮಂಜೇಶ್ವರ ಚರ್ಚ್‌ಗಳಲ್ಲಿ ಪ್ರಧಾನ ಗುರುಗಳಾಗಿ ಸೇವೆ ಸಲ್ಲಿಸಿ 2019ರಿಂದ ಕಾಟಿಪಳ ಚರ್ಚ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದರು.

Leave A Reply

Your email address will not be published.