ಇನ್ನು ಮುಂದೆ ಸೂರ್ಯಾಸ್ತದ ನಂತರವೂ ನಡೆಯಲಿದೆ ಪೋಸ್ಟ್ ಮಾರ್ಟಂ !! | ಹೊಸ ನಿಯಮವನ್ನು ಜಾರಿಗೆ ತಂದಿದೆ ಕೇಂದ್ರ ಸರ್ಕಾರ

ಇದುವರೆಗೆ ರಾತ್ರಿ ವೇಳೆ ಮರಣೋತ್ತರ ಪರೀಕ್ಷೆ ಗಳು ನಡೆಯುತ್ತಿರಲಿಲ್ಲ ಆದರೆ ಇನ್ನು ಮುಂದೆ ಸೂರ್ಯಾಸ್ತದ ನಂತರ ಪೋಸ್ಟ್ ಮಾರ್ಟಂ ಅವಕಾಶ ದೊರೆಯಲಿದೆ ಎಂಬ ಮಾಹಿತಿಯೊಂದನ್ನು ಕೇಂದ್ರ ಸರ್ಕಾರ ನೀಡಿದೆ.

ಸೂಕ್ತ ಸೌಲಭ್ಯ ಹೊಂದಿರುವ ಆಸ್ಪತ್ರೆಗಳಲ್ಲಿ ಮರಣೋತ್ತರ ಪರೀಕ್ಷೆಯನ್ನು ಸೂರ್ಯಾಸ್ತದ ನಂತರವೂ ಮಾಡುವ ಅವಕಾಶ ಸಿಗಲಿದ್ದು, ಈ ಬಗ್ಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನಸುಖ್ ಮಾಂಡವಿಯಾ ಟ್ವೀಟ್ ಮಾಡಿದ್ದಾರೆ.

ಕೇಂದ್ರ ಆರೋಗ್ಯ ಸಚಿವಾಲಯ ರಾತ್ರಿಯಲ್ಲೂ ಮರಣೋತ್ತರ ಪರೀಕ್ಷೆ ನಡೆಸಲು ಅನುಮತಿಸುವ ಹೊಸ ಪ್ರೋಟೋಕಾಲನ್ನು ಸಿದ್ಧಪಡಿಸಿದ್ದು, ಇದರಿಂದ ಅಂಗಾಗ ದಾನ ಮಾಡಲು ಮುಂದಾಗುವ ಮೃತರ ಸಂಬಂಧಿಕರಿಗೆ ಅನುಕೂಲವಾಗಲಿದೆ. ಆದರೆ ಹತ್ಯೆ, ಆತ್ಮಹತ್ಯೆ, ಅತ್ಯಾಚಾರ, ಕೊಳೆತ ದೇಹಗಳು, ಸಂಶಯಾತ್ಮಕ ಸಾವಿನ ಪ್ರಕರಣಕ್ಕೆ ಈ ನಿಯಮಗಳು ಅನ್ವಯವಾಗುವುದಿಲ್ಲ.

ಮಾತ್ರವಲ್ಲದೆ ಯಾವುದೇ ಅನುಮಾನವನ್ನು ತಳ್ಳಿಹಾಕಲು ಮತ್ತು ಕಾನೂನು ಉದ್ದೇಶಗಳಿಗಾಗಿ, ಭವಿಷ್ಯದ ಉಲ್ಲೇಖಕ್ಕಾಗಿ ಸಂರಕ್ಷಿಸಲು, ರಾತ್ರಿಯಲ್ಲಿ ನಡೆಸಲಾದ ಎಲ್ಲಾ ಮರಣೋತ್ತರ ಪರೀಕ್ಷೆಗಳಿಗೆ ಮರಣೋತ್ತರ ಪರೀಕ್ಷೆಯ ವೀಡಿಯೊ ರೆಕಾರ್ಡಿಂಗ್ ಅನ್ನು ಮಾಡಲಾಗುತ್ತದೆ.

ಆರೋಗ್ಯ ಸೇವೆಗಳು ಮಹಾನಿರ್ದೇಶನಾಲಯದಲ್ಲಿ ಪರಿಣಿತ ಸಮಿತಿಯು ಸ್ವೀಕರಿಸಿದ ಹಲವಾರು ಪ್ರಾತಿನಿಧ್ಯಗಳ, ತಾಂತ್ರಿಕ ಪರಿಶೀಲನೆಯ ನಂತರ ಕೇಂದ್ರವು ಈ ನಿರ್ಧಾರವನ್ನು ತೆಗೆದುಕೊಂಡಿದೆ. ಕೆಲವು ಸಂಸ್ಥೆಗಳು ಈಗಾಗಲೇ ರಾತ್ರಿಯ ಮರಣೋತ್ತರ ಪರೀಕ್ಷೆಯನ್ನು ನಡೆಸುತ್ತಿವೆ ಎಂದು ಸಮಿತಿಯು ತಿಳಿಸಿತ್ತು. ತಂತ್ರಜ್ಞಾನದಲ್ಲಿನ ತ್ವರಿತ ಪ್ರಗತಿ ಮತ್ತು ಸುಧಾರಣೆಯ ದೃಷ್ಟಿಯಿಂದ ವಿಶೇಷವಾಗಿ ಮರಣೋತ್ತರ ಪರೀಕ್ಷೆಗೆ ಅಗತ್ಯವಾದ ಬೆಳಕಿನ ಮತ್ತು ಮೂಲಸೌಕರ್ಯಗಳ ಲಭ್ಯತೆಯ ದೃಷ್ಟಿಯಿಂದ, ಆಸ್ಪತ್ರೆಗಳಲ್ಲಿ ರಾತ್ರಿಯ ಮರಣೋತ್ತರ ಪರೀಕ್ಷೆಯನ್ನು ನಡೆಸುವುದು ಈಗ ಕಾರ್ಯಸಾಧ್ಯವಾಗಿದೆ ಎಂದು ಸಮಿತಿಯು ತೀರ್ಮಾನಿಸಿತ್ತು.

Leave A Reply

Your email address will not be published.