ಉದ್ಯೋಗ ಕೊಡಿಸುವ ನೆಪದಲ್ಲಿ ನಕಲಿ ನೇಮಕಾತಿ ಪತ್ರ ಸೃಷ್ಟಿಸಿ ಲಕ್ಷಾಂತರ ವಂಚನೆ | ಪ್ರಮುಖ ಆರೋಪಿ ಕಾಣಿಯೂರಿನ ಯುವಕನ ಬಂಧನ

ಪುತ್ತೂರು: ಉದ್ಯೋಗ ಕೊಡಿಸುವ ನೆಪದಲ್ಲಿ ನಕಲಿ ನೇಮಕಾತಿ ಪತ್ರ ಸೃಷ್ಟಿಸಿ ಉದ್ಯೋಗಾಕಾಂಕ್ಷಿಗಳಿಂದ ಲಕ್ಷಾಂತರ ರೂಪಾಯಿ ಹಣ ಲಪಟಾಯಿಸಿದ ವಂಚಕರ ಜಾಲವೊಂದನ್ನು ಮಡಿಕೇರಿ ಜಿಲ್ಲಾ ಅಪರಾಧ ಪತ್ತೆ ದಳದವರು ಬಂಧಿಸಿದ್ದು, ಆರೋಪಿಗಳ ಪೈಕಿ ಕಾಣಿಯೂರಿನ ವ್ಯಕ್ತಿಯೊಬ್ಬರು ಪ್ರಮುಖ ಆರೋಪಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಮೂಲತಃ ಕಡಬ ತಾಲೂಕಿನ ಕಾಣಿಯೂರು ಬಂಡಾಜೆ ನಿವಾಸಿ ಪುನಿತ್ ಕುಮಾರ್(32ವ)ರವರು ಪ್ರಮುಖ ಆರೋಪಿಯಾಗಿದ್ದು, ಇವರೊಂದಿಗೆ ಮೈಸೂರು ಜಿಲ್ಲೆಯ ಗಾಯತ್ರಿಪುರ ಜ್ಯೋತಿನಗರದ ಅರುಣ್ ಕುಮಾರ್ (30ವ) ಎಂಬವರು ಕೂಡಾ ಬಂಧಿತರಾಗಿದ್ದಾರೆ. ಇವರು ಜಿಲ್ಲಾಡಳಿತದ ಲಾಂಛನವನ್ನು ಮುದ್ರಿಸಿ ಜಿಲ್ಲಾಧಿಕಾರಿಗಳ ಸಹಿಯನ್ನು ನಕಲು ಮಾಡಿ ಜಿಲ್ಲಾಧಿಕಾರಿಗಳೇ ನೇಮಕಾತಿ ಪತ್ರ ಕಳುಹಿಸಿದಂತೆ ನಂಜರಾಯಪಟ್ಟಣದ ಕೆ.ಎಂ.ಯಶ್ಚಿತಾ ಎಂಬವರಿಗೆ ಅಂಚೆ ಮೂಲಕ ನಕಲಿ ನೇಮಕಾತಿ ಪತ್ರ ಕಳುಹಿಸಿದಲ್ಲದೆ ಆಕೆಗೆ ಕರೆ ಮಾಡಿ ರೂ. 1.50 ಲಕ್ಷ ಹಣದ ಬೇಡಿಕೆ ಇಟ್ಟಿದ್ದರು. ಈ ಕುರಿತು ಯಶ್ಚಿತಾ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಸಾರ್ವಜನಿಕ ಪ್ರಕಟಣೆ ಹೊರಡಿಸಿ ಎಚ್ಚರಿಕೆಯ ಸಂದೇಶವನ್ನು ನೀಡಿದ್ದರು. ಈ ಸಂಬಂಧ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಶಿರಸ್ತೆದಾರ್ ಪ್ರಕಾಶ್ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಕುರಿತು ತನಿಖೆ ನಡೆಸುವಂತೆ ಜಿಲ್ಲಾ ಅಪರಾಧ ಪತ್ತೆ ದಳದವರಿಗೆ ಸೂಚನೆ ಬಂದ ಹಿನ್ನೆಲೆಯಲ್ಲಿ ಅಪರಾಧ ಪತ್ತೆ ದಳದವರು ಚಂದ್ರಶೇಖರ್, ರಾಜಮಣಿ ಯಾನೆ ಲೋಕೇಶ್, ಮತ್ತು ಗಣಪತಿ ಯಾನೆ ಶಬರೀಶ ಎಂಬವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿತ್ತು. ಈ ವಂಚಕರ ಜಾಲದ ಪ್ರಮುಖ ರೂವಾರಿ ಪುನಿತ್ ತಲೆಮರೆಸಿಕೊಂಡಿದ್ದರು. ಅವರ ಪತ್ತೆಗೆ ಜಿಲ್ಲಾ ಅಪರಾಧ ಪತ್ತೆ ದಳದವರು ಕಾರ್ಯಾಚರಣೆ ನಡೆಸಿ ಪುತ್ತೂರಿನ ಕೆಮ್ಮಿಂಜೆಯಲ್ಲಿ ಆತನನ್ನು ಬಂಧಿಸಿದ್ದರು.

ಎಸ್ಎಐ ಕೆಲಸಕ್ಕೆ ಆಮೀಷದ ವೇಳೆ ಪುನಿತ್ ಬಂಧನ: ಆರಂಭದಲ್ಲಿ ಮೂವರ ಬಂಧನದ ಬಳಿಕ ಪ್ರಕರಣದ ತನಿಖೆ ನಡೆಯುತ್ತಿದ್ದ ವೇಳೆ ಮತ್ತೊಂದು ದೊಡ್ಡ ವಂಚನೆಯ ಜಾಲ ಬೆಳಕಿಗೆ ಬಂದಿತ್ತು. ಮಡಿಕೆರಿ ನಿವಾಸಿಯೊಬ್ಬರ ಪುತ್ರನಿಗೆ ಪೊಲೀಸ್ ಉಪನಿರೀಕ್ಷಕರ ಹುದ್ದೆ ಕೊಡಿಸುವುದಾಗಿ ನಕಲಿ ನೇಮಕಾತಿ ಪತ್ರ ನೀಡಿ ಲಕ್ಷಾಂತರ ರೂಪಾಯಿ ವಂಚಿಸಿರುವ ಬಗ್ಗೆ ಮಡಿಕೇರಿ ಪೊಲೀಸ್ ಠಾಣೆಯಲ್ಲಿ ವಾರದ ಹಿಂದೆ ದೂರು ದಾಖಲಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆಗಾಗಿ ಸಿಐಡಿ ಬೆಂಗಳೂರು ಘಟಕಕ್ಕೆ ವರ್ಗಾವಣೆಯಾಗಿ ತನಿಖೆ ಪ್ರಗತಿಯಲ್ಲಿತ್ತು. ಈ ಕುರಿತು ಜಿಲ್ಲಾ ಅಪರಾಧ ಪತ್ತೆ ದಳದವರು ಕೂಡಾ ತನಿಖೆ ಮುಂದುವರಿಸಿದಾಗ ಪ್ರಮುಖ ಆರೋಪಿ ಪುತ್ತೂರಿನ ಪುನಿತ್ ಕುಮಾರ್ ಮತ್ತು ಮೈಸೂರಿನ ಅರುಣ್ ಕುಮಾರ್ ಎಂಬವರನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿ ಪುನಿತ್ ಅವರಿಂದ ರೂ. 5.50 ಲಕ್ಷ ನಗದು ಮತ್ತು ರೂ.3 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪೊಲೀಸ್ ಅಧೀಕ್ಷಕಿ ಕ್ಷಮಾ ಮಿಶ್ರಾ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಗುಪ್ತ ದಳದ ನಿರೀಕ್ಷಕ ಐ.ಪಿ ಮೇದಪ್ಪ, ಅಪರಾಧ ಪತ್ತೆ ದಳದ ಸಹಾಯಕ ಠಾಣಾಧಿಕಾರಿ ಹಮೀದ್, ಸಿಬ್ಬಂದಿಗಳಾದ ಯೋಗೇಶ್ ಕುಮಾರ್, ನಿರಂಜನ್, ವಸಂತ, ವೆಂಕಟೇಶ್, ಶರತ್ ರೈ, ಸುರೇಶ್, ಅನಿಲ್ ಕುಮಾರ್, ಸಿಡಿಆರ್ ಘಟಕದ ರಾಜೇಶ್, ಗಿರೀಶ್ ಭಾಗವಹಿಸಿದ್ದರು.

Leave A Reply

Your email address will not be published.