ರಾಜ್ಯದಲ್ಲೇ ಪ್ರಥಮ ಬಾರಿಗೆ ಮಂಗಳೂರು ಕಾರಾಗೃಹದಲ್ಲಿ ಹೊಸ ಪ್ರಯೋಗ | ಕಾರಾಗೃಹದಲ್ಲಿರುವ ವಿಚಾರಣಾಧೀನ ಖೈದಿಗಳಿಗೂ ಇನ್ನು ಮುಂದೆ ಸಿಗಲಿದೆ ಕೌಶಲ ತರಬೇತಿ!!

ರಾಜ್ಯದಲ್ಲೇ ಪ್ರಥಮ ಬಾರಿಗೆ ಹೊಸ ಪ್ರಯೋಗವೊಂದು ಮಂಗಳೂರು ಕಾರಾಗೃಹದಲ್ಲಿ ನಡೆಯಲಿದೆ. ಹೌದು,
ರಾಜ್ಯದಲ್ಲೇ ಮೊದಲ ಬಾರಿಗೆ ಮಂಗಳೂರು ಕಾರಾಗೃಹದಲ್ಲಿ ವಿಚಾರಣಾಧೀನ ಖೈದಿಗಳಿಗೆ ಭವಿಷ್ಯದಲ್ಲಿ ಉತ್ತಮ ಜೀವನ ರೂಪಿಸಿಕೊಳ್ಳಲು ವೃತ್ತಿ ಕೌಶಲ ತರಬೇತಿ ಯೋಜನೆ ರೂಪಿಸಲಾಗಿದೆ.

ಅಪರಾಧ ಪ್ರಕರಣ ನ್ಯಾಯಾಲಯದಲ್ಲಿ ಸಾಬೀತಾಗಿ ಶಿಕ್ಷೆ ಪ್ರಕಟಗೊಂಡು ಕೇಂದ್ರ ಕಾರಾಗೃಹದಲ್ಲಿರುವ ಖೈದಿಗಳಿಗೆ ವೃತ್ತಿ ಕೌಶಲ ತರಬೇತಿ ಈಗಾಗಲೇ ನೀಡಲಾಗುತ್ತಿದೆ. ಆದರೆ ಜಿಲ್ಲಾ ಕಾರಾಗೃಹಗಳಲ್ಲಿ ಇದು ಮೊದಲ ಪ್ರಯತ್ನ. ಇಲ್ಲಿ ದೀರ್ಘಕಾಲದ ತನಕ ಬಂಧಿಯಾಗಿರುವ ಖೈದಿಗಳು ಇರದಿದ್ದರೂ, ಸುಮಾರು 5 ವರ್ಷದಿಂದ ಬಂಧಿಯಾಗಿರುವವರು ಇದ್ದಾರೆ. ಮಹಿಳಾ ಖೈದಿಗಳಿಗೆ ಎನ್‌ಜಿಒ ಸಂಸ್ಥೆಯ ಸಹಯೋಗದಲ್ಲಿ ಟೈಲರಿಂಗ್ ತರಬೇತಿ ಆರಂಭಗೊಂಡಿದೆ.

ಜಿಲ್ಲಾ ಕಾರಾಗೃಹದಲ್ಲಿರುವ ಖೈದಿಗಳಿಗೂ ಕೌಶಲ ತರಬೇತಿ ನೀಡಿದರೆ ಅವರು ಭವಿಷ್ಯದಲ್ಲಿ ತಮ್ಮ ಮನ ಪರಿವರ್ತನೆ ಮಾಡಿಕೊಳ್ಳುವ ಜೊತೆಗೆ ಸ್ವಯಂ ಉದ್ಯೋಗ, ಉದ್ಯಮ ಅಥವಾ ನೌಕರಿ ಪಡೆಯಲು ಅನುಕೂಲವಾಗಬಹುದು ಎಂಬ ನಿರೀಕ್ಷೆ ಅಧಿಕಾರಿಗಳದ್ದು.

ಕೆಜಿಟಿಟಿಐಯೊಂದಿಗೆ(ಕರ್ನಾಟಕ ಜರ್ಮನ್ ತಾಂತ್ರಿಕ ತರಬೇತಿ ಸಂಸ್ಥೆ) ಒಪ್ಪಂದ ಮಾಡಿಕೊಂಡು ಪೊಲೀಸ್ ಇಲಾಖೆ ಜೊತೆ ಸೇರಿ ಕೌಶಲ ತರಬೇತಿ ನೀಡುವ ಯೋಜನೆ ಅನುಷ್ಠಾನಗೊಳಿಸಲು ತಯಾರಿ ನಡೆಸಲಾಗುತ್ತಿದೆ.

ಅಲ್ಪಾವಧಿ ತರಬೇತಿ:

ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳ ಜೊತೆಗೆ ಒಪ್ಪಂದ ಮಾಡಿಕೊಂಡು ಪ್ರಧಾನ ಮಂತ್ರಿ ಕೌಶಲಾಭಿವೃದ್ಧಿ ಇಲಾಖೆಯಲ್ಲಿರುವ ಕೆಲವು ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಂಡು ಅದನ್ನು ಕಿರು ಅವಧಿಗೆ ಹೊಂದಾಣಿಕೆ ಮಾಡಿಕೊಳ್ಳುವ ಬಗ್ಗೆ ಚಿಂತನೆ ನಡೆದಿದೆ. ತರಬೇತಿ ಪೂರೈಸಿದವರಿಗೆ ಪ್ರಮಾಣಪತ್ರ ನೀಡಿದರೆ ಬಿಡುಗಡೆ ಬಳಿಕ ತಮ್ಮದೇ ಉದ್ದಿಮೆ ಆರಂಭಿಸಲು ಸರ್ಕಾರದಿಂದಲೂ ಸಾಲ ಸೌಲಭ್ಯದ ನೆರವು ಪಡೆಯಲು ಅನುಕೂಲವಾಗಲಿದೆ.

ಖೈದಿಗಳಲ್ಲಿ ಉತ್ಸಾಹ:

ಕೌಶಲಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ವತಿಯಿಂದ ಈಗಾಗಲೇ ಜಿಲ್ಲಾ ಕಾರಾಗೃಹದಲ್ಲಿ ಒಂದು ದಿನದ ಕೌಶಲಾಭಿವೃದ್ಧಿ ತರಬೇತಿ ನಡೆಸಲಾಗಿದೆ. ಉತ್ತಮ ಸ್ಪಂದನೆ ದೊರೆತಿದ್ದು, 330 ಮಂದಿ ಖೈದಿಗಳ ಪೈಕಿ 150 ಮಂದಿ ಆಸಕ್ತಿ ತೋರಿಸಿದ್ದರು. ಸ್ಥಳಾವಕಾಶದ ಕೊರತೆಯಿಂದ 25 ಮಂದಿಯನ್ನು ಆಯ್ಕೆ ಮಾಡಿ ಅವರಿಗೆ ರೆಫ್ರಿಜರೇಷನ್, ವಯರಿಂಗ್, ಎಸಿ, ಉತ್ತಮ ಸಂವಹನ, ವ್ಯಕ್ತಿತ್ವ ಬೆಳವಣಿಗೆ ಮೊದಲಾದವುಗಳ ಬಗ್ಗೆ ತರಬೇತಿ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Leave A Reply

Your email address will not be published.