ಹೆರಿಗೆಗೆಂದು ತವರಿಗೆ ಬಂದ ಪತ್ನಿಯನ್ನು ಗಂಡನ ಮನೆಯವರು ಕರೆದುಕೊಂಡು ಹೋಗಲು ಬಂದ ವಿಷಯ ತಿಳಿದು ತನ್ನ ಒಂದು ವರ್ಷದ ಮಗುವಿನ ಜೊತೆಗೆ ಬಾವಿಗೆ ಹಾರಿ ಆತ್ಮಹತ್ಯೆ!!

ಬಾಗಲಕೋಟೆ:ಹೆರಿಗೆಗೆಂದು ತವರು ಮನೆಗೆ ಬರುವುದು ಪದ್ಧತಿ, ಹೀಗೆ ತವರಿನಲ್ಲಿರುವ ಹೆಣ್ಣನ್ನು ಮತ್ತೆ ಪತಿಯ ಮನೆಗೆ ಕರೆದೊಯ್ಯಲು ಬರುವುದು ಒಂದು ಸಂಪ್ರದಾಯ. ಎಲ್ಲಾ ಪತ್ನಿಯಂದಿರು ಗಂಡ ಕರೆದುಕೊಂಡು ಹೋಗಲು ಬರದಿದ್ದರೆ ಬೇಸರ ಮಾಡಿಕೊಳ್ಳುವುದು ಸಹಜ.

ಆದರೆ ಇಲ್ಲೊಬ್ಬಳು ತವರಿನಲ್ಲಿದ್ದ ತನ್ನನ್ನು ಪತಿಯ ಮನೆಯವರು ವಾಪಸ್ ಕರೆದುಕೊಂಡು ಹೋಗಲು ಬಂದಿದ್ದಾರೆಂಬ ಕಾರಣಕ್ಕೆ ಒಂದು ವರ್ಷದ ಹಸುಗೂಸಿನ ಸಹಿತ ಬಾವಿಗೆ ಹಾರಿದ ಘಟನೆ ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡ ತಾಲೂಕಿನ ರಾಘಾಪುರ ಎಂಬಲ್ಲಿ ನಡೆದಿದೆ.

ಗುಳೇದಗುಡ್ಡ ತಾಲೂಕಿನ ಹಂಸನೂರ ಗ್ರಾಮದ ಫಕೀರವ್ವ (26) ಹಾಗೂ ಒಂದು ವರ್ಷದ ಮಗು ಶಿವಾನಿ ಬಾವಿಗೆ ಹಾರಿ ಮೃತಪಟ್ಟವರು.

ಫಕೀರವ್ವನಿಗೆ ಮಂಜುನಾಥ ಎಂಬಾತನ ಜೊತೆ
ಮದುವೆಯಾಗಿತ್ತು. ಆಕೆ ಬಸುರಿಯಾದ ಬಳಿಕ ಒಂದು ವರ್ಷದ ಹಿಂದೆ ಹೆರಿಗೆಗೆಂದು ತವರಿಗೆ ಮರಳಿದ್ದಳು. ಹೀಗೆ ಬಂದ ಫಕೀರವ್ವ ತನ್ನ ಅಜ್ಜಿ ಮನೆ ಗುಳೇದಗುಡ್ಡ ರಾಘಾಪುರದ ಹಂಸನೂರಿನಲ್ಲಿಯೇ ಉಳಿದು ಬಿಟ್ಟಿದ್ದಳು.

ಇತ್ತ ಪತಿಯ ಮನೆಯವರು ಆಕೆಯ ಮನೆಯವರು ವಾಪಸ್ ಕರೆದೊಯ್ಯಲು ಬಂದಿದ್ದಾಗ ಈಕೆ ದನ ಮೇಯಿಸಲು ಹೋಗಿದ್ದಳು.ಆದರೆ ಪತಿಯ ಮನೆಯವರು ತನ್ನನ್ನು ಮರಳಿ ಕರೆದೊಯ್ಯಲು ಬಂದಿರುವ ವಿಷಯ ತಿಳಿದ ಫಕೀರವ್ವ ಮಗುವಿನೊಂದಿಗೆ ಅಜ್ಜಿಯ ಜಮೀನಿನಲ್ಲಿದ್ದ ಬಾವಿಗೆ ಹಾರಿದ್ದಾಳೆ.

ವಿಷಯ ತಿಳಿದಾಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ
ಕಾರ್ಯಾಚರಣೆ ನಡೆಸಿ ತಾಯಿ-ಮಗು ಇಬ್ಬರನ್ನೂ ರಕ್ಷಿಸಲು ಪ್ರಯತ್ನ ಪಟ್ಟಿದ್ದಾರೆ. ಆದರೆ ಅದಾಗಲೇ ಅವರಿಬ್ಬರೂ ಮೃತಪಟ್ಟಿದ್ದರು.

ಮೃತದೇಹವನ್ನು ಬಾವಿಯಿಂದ ತೆಗೆದಿದ್ದು,ಮರಣೋತ್ತರ ಪರೀಕ್ಷೆಗಾಗಿ ಗುಳೇದಗುಡ್ಡ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.ಪತಿಯ ಮನೆಗೆ ಹೋಗಲು ಇಚ್ಚೆ ಇಲ್ಲದೆ ಫಕೀರವ್ವ ಹೀಗೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ಪ್ರಕರಣ
ದಾಖಲಿಸಿಕೊಂಡಿದ್ದಾರೆ.

Leave A Reply

Your email address will not be published.