ಧರ್ಮಸ್ಥಳ | ವೈಭವದಿಂದ ನೆರವೇರಿದ ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನದ ಜಗದ್ಗುರುಗಳ ಚಾತುರ್ಮಾಸ್ಯ ವ್ರತಾರಂಭ ಹಾಗೂ ಅನ್ನಛತ್ರದ ಶಿಲಾನ್ಯಾಸ ಕಾರ್ಯಕ್ರಮ

ಸ್ಥಳ: ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠದ ಪೀಠಧೀಶಾರಾದ ಸದ್ಗುರು ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಚಾತುರ್ಮಾಸ್ಯ ವೃತಾರಂಭ ಶ್ರೀ ಗುರುದೇವ ಮಠದಲ್ಲಿ
ಇಂದು ನೆರವೇರಿತು.

ಶ್ರೀ ಲಕ್ಷ್ಮೀಪತಿ ಗೋಪಾಲಚಾರ್ಯರು, ಆಗಮ ಪ್ರವೀಣ ಬೆಂಗಳೂರು ಇವರ ಪೌರೋಹಿತ್ಯದಲ್ಲಿ ಕಾರ್ಯಕ್ರಮವು ಜರುಗಿತು. ಅನ್ನಛತ್ರದ ಶಿಲಾನ್ಯಾಸವನ್ನು ಶಾಸಕ ಹರೀಶ ಪೂಂಜ ಅವರು ನೆರವೇರಿಸಿದರು.

ಚಾತುರ್ಮಾಸ್ಯ ಸಮಿತಿ ಸಮಿತಿ ಅಧ್ಯಕ್ಷರೂ ಆಗಿರುವ ಶಾಸಕ ಹರೀಶ್ ಪೂಂಜ ಅವರು ಕಾರ್ಯಕ್ರಮದ ನೇತೃತ್ವ ವಹಿಸಿ ಸ್ವಾಗತಿಸಿದರು. ಸಮಾರಂಭದಲ್ಲಿ ಕರ್ನಾಟಕ ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಭಟ್ಕಳ ಮಾಜಿ ಶಾಸಕ ಮಾಂಕಲ್ ವೈದ್ಯ, ಕರ್ನಾಟಕ ಸರಕಾರದ ಕ್ಯೂನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್, ಬಿಲ್ಲವ ಮಹಾಮಂಡಲದ ಅಧ್ಯಕ್ಷ ರಾಜಶೇಖರ ಕೋಟ್ಯಾನ್, ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಪೀತಾಂಬರ ಹೇರಾಜೆ, ಕಂಕನಾಡಿ ಗರೋಡಿಯ ಮುಖ್ಯಸ್ಥರಾದ ಚಿತ್ತರಂಜನ್, ಶ್ರೀ ರಾಮ ಕ್ಷೇತ್ರ ಚಾತುರ್ಮಾಸ್ಯ ಸಮಿತಿಯ ಪ್ರಧಾನ ಸಂಚಾಲಕ ಜಯಂತ ಕೋಟ್ಯಾನ್, ತಾಲೂಕು ಅಧ್ಯಕ್ಷ ಸದಾನಂದ ಪೂಜಾರಿ ಉಂಗಿಲಬೈಲು ವೇದಿಕೆಯಲ್ಲಿದ್ದರು. ಕೇಶವ ಬಂಗೇರ ಕಳಿಯ ಕಾರ್ಯಕ್ರಮ ನಿರೂಪಿಸಿದರು.

ಚಾತುರ್ಮಾಸ್ಯ ವೃತದ ಸಮಾಪ್ತಿಯು ತಾ.12-09-2021ನೇ ಗುರುವಾರದಂದು ಮುಕ್ತಾಯಗೊಂಡು, ಅದೇ ದಿನ ಬೆಳಿಗ್ಗೆ ಶ್ರೀಗಳವರ ಸೀಮೋಲ್ಲಂಘನ ಕಾರ್ಯಕ್ರಮ, ನೇತ್ರಾವತಿ ಸ್ನಾನಘಟ್ಟದಲ್ಲಿ ನಡೆಯಲಿರುವುದು. ತದನಂತರ ತನ್ನ ಆರಾಧ್ಯ ದೇವರಿಗೆ ವಿಶೇಷ ಪೂಜಾ ಕೈಂಕರ್ಯಗಳು ನಡೆಯಲಿರುವುದು.

ದಿ.13-09-2021ನೇ ಶುಕ್ರವಾರದಂದು ಶ್ರೀ ಗುರುದೇವ ಮಠದಲ್ಲಿ ಶ್ರೀಗಳವರ ಪಟ್ಟಾಭಿಷೇಕದ ವರ್ಧಂತಿಯು ನಡೆಯಲಿದೆ. ಪೂರ್ವಾಹ್ನ ಗಂಟೆ 11-00ರಿಂದ 11-30ರ ವರೆಗೆ ಭಜನಾ ಕಾರ್ಯಕ್ರಮ, ಪೂವಾಹ್ನ ಗಂಟೆ 11-30ರಿಂದ 12-30ರ ವರೆಗೆ ಭಕ್ತಾಧಿಗಳ ಗುರುಪಾದುಕಾ ಪೂಜೆ, ಮಧ್ಯಾಹ್ನ ಗಂಟೆ 12.30ಕ್ಕೆ  ಗುರುಗಳಿಂದ ಫಲ ಮಂತ್ರಾಕ್ಷತೆ ವಿತರಣೆ ನಡೆಯಲಿದೆ.

ಕೋವಿಡ್ ತಡೆಗಟ್ಟಲು ಸರಕಾರದ ಆದೇಶ ಪಾಲನೆಗಾಗಿ ಭಕ್ತಾದಿಗಳ ಸುರಕ್ಷತೆಗೆ ಈ ಮೇಲಿನ ದಿನಗಳಂದು ಗ್ರಾಮವಾರು ಭಕ್ತರು ಬಂದು ಶ್ರೀಗಳ ಆಶೀರ್ವಾದ ಪಡೆದು ಪುನೀತರಾಗಬೇಕಾಗಿ ವಿನಂತಿಸಲಾಗಿದೆ.

Leave A Reply

Your email address will not be published.