ಬೆಳಗಾವಿಯಲ್ಲಿ ನಡೆಯಿತು ಭೀಕರ ರಸ್ತೆ ಅಪಘಾತ|ಬೈಕ್ ಗೆ ಗುದ್ದಿ, ಸ್ಕೂಟಿ ಮೇಲೆ ಹರಿದ ಟಿಪ್ಪರ್…ಏಕಕಾಲಕ್ಕೆ ಎರಡೂ ದ್ವಿಚಕ್ರ ವಾಹನ ಸವಾರರ ಸಾವು

ಅತೀ ವೇಗವಾಗಿ ಬಂದ ಟಿಪ್ಪರ್ ಒಂದು ಬೈಕ್ ಗೆ ಗುದ್ದಿ, ತದನಂತರ ಇನ್ನೊಂದು ಸ್ಕೂಟಿಯ ಮೇಲೆ ಹರಿದ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ನಿಡಗುಂದಿ ಗ್ರಾಮದಲ್ಲಿ ನಡೆದಿದೆ.ದ್ವಿಚಕ್ರ ವಾಹನ ಸವಾರರಿಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದು, ಘಟನೆಯಲ್ಲಿ ಟಿಪ್ಪರ್ ಗೆ ಬೆಂಕಿ ಹತ್ತಿಕೊಂಡು ಸಂಪೂರ್ಣ ಸುಟ್ಟು ಭಸ್ಮವಾಗಿದೆ.ಮೃತರನ್ನು ಸ್ಕೂಟಿ ಚಾಲಕಿ ನಿಡಗುಂದಿ ಗ್ರಾಮದ ಪೂನಂ ತಳವಾರೆ (25), ಬೈಕ್ ಸವಾರ ಬೊಮ್ಮನಾಳ ಗ್ರಾಮದ ಬಾಳಪ್ಪ ಕಾಂಬಳೆ (22) ಎಂದು ಗುರುತಿಸಲಾಗಿದೆ.

ಹಾರೂಗೇರಿಯಿಂದ ಬೊಮ್ಮನಾಳ ಕಡೆಗೆ ಬರುತ್ತಿದ್ದ ಬೈಕ್ ಮತ್ತು ಟಿಪ್ಪರ್ ನಡುವೆ ಪರಸ್ಪರ ಡಿಕ್ಕಿ ಸಂಭವಿಸಿದ್ದು, ಬೈಕ್ ಗೆ ಡಿಕ್ಕಿ ಹೊಡೆದು ಅಲ್ಲೇ ಚಲಿಸುತ್ತಿದ್ದ ಸ್ಕೂಟಿ ಯ ಟಿಪ್ಪರ್ ಮೇಲೂ ಹರಿದ ಪರಿಣಾಮ ಸವಾರರಿಬ್ಬರೂ ಸ್ಥಳದಲ್ಲೇ ಅಸುನೀಗಿದ್ದಾರೆ.

ಸ್ಕೂಟಿ ಮೇಲಿದ್ದ ಪೂನಂ ತಳವಾರೆಟಿಪ್ಪರ್ ಚಕ್ರದಡಿ ಸಿಲುಕಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಘಟನೆ ಬಳಿಕ ರಸ್ತೆಯಲ್ಲೇ ತೂರಿಕೊಂಡು ಹೋದ ಟಿಪ್ಪರ್‌ಗೆ ಬೆಂಕಿ ಹೊತ್ತಿಕೊಂಡಿದ್ದು ಸಂಪೂರ್ಣ ಸುಟ್ಟು ಕರಕಲಾಗಿದೆ. ಅಗ್ನಿಶಾಮಕ ದಳ ಸ್ಥಳಕ್ಕೆ ಬಂದು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದು,ಟಿಪ್ಪರ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಚಾಲಕನ ಅತಿವೇಗ ಹಾಗೂ ಅಜಾಗರೂಕತೆ ಘಟನೆಗೆ ಕಾರಣವೆಂದು ತಿಳಿದು ಬಂದಿದ್ದು,ರಾಯಬಾಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.