ತೇಜಸ್ವಿ ವಿಚಾರಗಳಿಂದ ಹಿಂದೂ ಧರ್ಮಪ್ರಸಾರ ಮಾಡಿದ ರಾಷ್ಟ್ರ ಸಂತ ಸ್ವಾಮಿ ವಿವೇಕಾನಂದರು

ಸ್ವಾಮಿ ವಿವೇಕಾನಂದರ ಬಗ್ಗೆ ಇಂದು ಯಾರಿಗೆ ಗೊತ್ತಿಲ್ಲ. ಭಾರತದ ಪ್ರತಿಯೊಬ್ಬ ಪ್ರಜೆಯೂ ವಿವೇಕಾನಂದರ ಬಗ್ಗೆ ತಿಳಿದಿದ್ದಾನೆ ಹಾಗೂ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಇಷ್ಟಪಡುತ್ತಾನೆ. ಆಂಗ್ಲರ ವರ್ಚಸ್ಸು ಇರುವಾಗ ಭಾರತಭೂಮಿ ಮತ್ತು ಹಿಂದೂ ಧರ್ಮ ಇವುಗಳ ಉದ್ಧಾರಕ್ಕಾಗಿ ಅಹೋರಾತ್ರಿ ಚಿಂತನೆಯನ್ನು ಮಾಡಿ ತನು-ಮನ, ಧನ ಮತ್ತು ಪ್ರಾಣವನ್ನು ಅರ್ಪಿಸಿದ ಕೆಲವು ರತ್ನಗಳಲ್ಲಿ ದೈದಿಪ್ಯಮಾನವಾದ ರತ್ನವೆಂದರೆ ಸ್ವಾಮಿ ವಿವೇಕಾನಂದರು !
ತತ್ವಚಿಂತಕ, ವಿಚಾರವಂತ ಮತ್ತು ವೇದಾಂತ ಮಾರ್ಗಿ, ರಾಷ್ಟ್ರ ಸಂತ ಎಂದು ಪ್ರಸಿದ್ಧವಾಗಿರುವವರು ಸ್ವಾಮಿ ವಿವೇಕಾನಂದರು. ತುಂಬಿದ ತಾರುಣ್ಯದಲ್ಲಿ ಸನ್ಯಾಸಾಶ್ರಮದ ದೀಕ್ಷೆಯನ್ನು ಪಡೆದುಕೊಂಡು ಹಿಂದೂ ಧರ್ಮದ ಪ್ರಸಾರಕರಾಗಿದ್ದ ತೇಜಸ್ವಿ ಮತ್ತು ಧ್ಯೇಯವಾದಿ ವ್ಯಕ್ತಿತ್ವದ ಪುಣ್ಯಸ್ಮರಣೆಯ ನಿಮಿತ್ತ ಅವರ ತೇಜೋಮಯ ಜೀವನದ ಪ್ರೇರಣೆ ನಮಗೆ ಸಿಗಲೆಂದು ಈ ಲೇಖನವನ್ನು ಅವರಿಗೆ ಸಮರ್ಪಿಸುತ್ತಿದ್ದೇವೆ.

ಸ್ವಾಮಿ ವಿವೇಕಾನಂದರು ಜನವರಿ ೧೨, ೧೮೬೩ರಲ್ಲಿ ಕೊಲ್ಕತ್ತಾದಲ್ಲಿ ಜನಿಸಿದರು. ಇವರ ಮೂಲ ಹೆಸರು ನರೇಂದ್ರನಾಥ. ಸ್ವಾಮಿ ವಿವೇಕಾನಂದರ ಕುಟುಂಬವೇ ಆಧ್ಯಾತ್ಮ ಮಾರ್ಗದಲ್ಲಿದ್ದುದರಿಂದ ಬಾಲ್ಯದಲ್ಲಿಯೇ ಅವರ ಮೇಲೆ ಧರ್ಮದ ಕುರಿತು ಸಂಸ್ಕಾರವಾಯಿತು. ೧೯೭೦ರಲ್ಲಿ ಅವರನ್ನು ಈಶ್ವರಚಂದ್ರ ವಿದ್ಯಾಸಾಗರ ಇವರ ಶಾಲೆಗೆ ಸೇರಿಸಲಾಯಿತು. ವಿವೇಕಾನಂದರು ಮೆಟ್ರಿಕ್ ಪರೀಕ್ಷೆಯನ್ನು ಅತ್ಯಧಿಕ ಅಂಕಗಳನ್ನು ಗಳಿಸಿ ಉನ್ನತ ದರ್ಜೆಯಲ್ಲಿ ಉತ್ತೀರ್ಣರಾಗಿ ತಮ್ಮ ಮನೆತನದ ಹಾಗೂ ಶಾಲೆಯ ಕೀರ್ತಿ ಪತಾಕೆಯನ್ನು ಎತ್ತರಕ್ಕೇರಿಸಿದರು. ಮುಂದೆ ಕೊಲ್ಕತ್ತಾದ ಪ್ರೆಸಿಡೆನ್ಸಿ ಮಹಾವಿದ್ಯಾಲಯದಿಂದ ಅವರು ‘ತತ್ವಜ್ಞಾನ’ ವಿಷಯದಲ್ಲಿ ಎಂ.ಎ ಪದವಿಯನ್ನು ಪಡೆದರು.

ಸ್ವಾಮಿ ವಿವೇಕಾನಂದ ಮತ್ತು ಗುರುಗಳಾದ ರಾಮಕೃಷ್ಣ ಪರಮಹಂಸರ ಭೇಟಿ !

ನರೇಂದ್ರನ ಮನೆಯಲ್ಲಿ ಅವರ ಹಿರಿಯ ಸಂಬಂಧಿಕರಾದ ಡಾ. ರಾಮಚಂದ್ರ ದತ್ತ ಇವರು ರಾಮಕೃಷ್ಣರ ಭಕ್ತರಾಗಿದ್ದರು. ಚಿಕ್ಕ ವಯಸ್ಸಿನಲ್ಲಿಯೇ ನರೇಂದ್ರನ ಮನಸ್ಸಿನಲ್ಲಿ ಮೂಡಿದ ವೈರಾಗ್ಯವನ್ನು ಕಂಡು ‘ನಿನ್ನ ಜೀವನದ ಉದ್ಧೇಶವು ಧರ್ಮಕಾರ್ಯವೇ ಆಗಿದ್ದರೆ ನೀನು ನೇರವಾಗಿ ದಕ್ಷಿಣೇಶ್ವರದಲ್ಲಿರುವ ಶ್ರೀ ರಾಮಕೃಷ್ಣ ಪರಮಹಂಸರನ್ನು ಭೇಟಿಯಾಗು ಎಂದು ಹೇಳಿದರು. ಒಂದು ದಿನ ಅವರಿಗೆ ಅವರ ಪಕ್ಕದ ಮನೆಯವರಾದ ಶ್ರೀ ಸುರೇಂದ್ರನಾಥ ಇವರ ಮನೆಯಲ್ಲಿ ಶ್ರೀ ರಾಮಕೃಷ್ಣ ಪರಮಹಂಸರ ದರ್ಶನವಾಯಿತು. ನಂತರ ಕೆಲವು ದಿನಗಳವರೆಗೆ ರಾಮಕೃಷ್ಣ ಪರಮಹಂಸರು ವಿವೇಕಾನಂದರನ್ನು ತಮ್ಮ ಪಕ್ಕದಲ್ಲಿಯೇ ಕುಳ್ಳಿರಿಸಿಕೊಂಢು ಉಪದೇಶ ನೀಡುತ್ತಿದ್ದರು ಹಾಗೂ ಇವರಿಬ್ಬರ ನಡುವೆ ಅನೇಕ ವಿಷಯಗಳ ಮೇಲೆ ಚರ್ಚೆಯಾಗುತ್ತಿತ್ತು. ಒಂದು ದಿನ ರಾಮಕೃಷ್ಣರು ಒಂದು ಕಾಗದದ ತುಂಡಿನ ಮೇಲೆ ‘ನರೇಂದ್ರನು ಲೋಕಶಿಕ್ಷಣದ ಕಾರ್ಯವನ್ನು ಮಾಡುವನು’ ಎಂದು ಬರೆದರು. ಅದನ್ನು ಕಂಡ ನರೇಂದ್ರನು ಈ ಎಲ್ಲ ಕಾರ್ಯಗಳು ನನ್ನಿಂದ ಆಗುವದಿಲ್ಲವೆಂದಾಗ ಅರೆ, ನಿನ್ನ ಎಲಬುಗಳು ಕೂಡ ಈ ಕಾರ್ಯವನ್ನು ಮಾಡುವವು ! ಎಂದರು ಮುಂದೆ ಶ್ರೀ ರಾಮಕೃಷ್ಣರು ನರೇಂದ್ರನಿಗೆ ಸನ್ಯಾಸ ದೀಕ್ಷೆಯನ್ನು ನೀಡಿ ಅವರ ನಾಮಕರಣವನ್ನು “ಸ್ವಾಮಿ ವಿವೇಕಾನಂದ” ಎಂದು ಮಾಡಿದರು.

ಸ್ವಾಮಿ ವಿವೇಕಾನಂದರ ಧರ್ಮ ಪ್ರಸಾರದ ಕಾರ್ಯಾರಂಭ –
ರಾಮಕೃಷ್ಣ ಪರಮಹಂಸರ ಮಹಾಸಮಾಧಿಯ ನಂತರ ಸ್ವಾಮಿ ವಿವೇಕಾನಂದರು ತಮ್ಮ ಗುರುಬಂಧುಗಳಾದ ತಾರಕನಾಥರ ಸಹಾಯದೊಂದಿಗೆ ಕೊಲ್ಕತ್ತಾ ಹತ್ತಿರದ ವರಾಹನಗರದ ಭಾಗದಲ್ಲಿ ಒಂದು ಕಟ್ಟಡದಲ್ಲಿ ‘ರಾಮಕೃಷ್ಣ ಮಠ’ದ ಸ್ಥಾಪನೆಯನ್ನು ಮಾಡಿದರು. ಒಂದು ರಾತ್ರಿ ಅರ್ಧ ಎಚ್ಚರವಿರುವಾಗ ಸ್ವಾಮಿ ವಿವೇಕಾನಂದರು ಒಂದು ಅದ್ಭುತ ಕನಸು ಕಂಡರು. ಶ್ರೀ ರಾಮಕೃಷ್ಣ ಪರಮಹಂಸರು ಜ್ಯೋತಿರ್ಮಯ ರೂಪ ಧರಿಸಿ ಸಮುದ್ರದಿಂದ ಮುಂದೆ ಹೋಗುತ್ತಿದ್ದಾರೆ ಮತ್ತು ಸ್ವಾಮಿ ವಿವೇಕಾನಂದರನ್ನು ತಮ್ಮ ಹಿಂದೆ ಬರುವಂತೆ ಸನ್ನೆ ಮಾಡುತ್ತಿದ್ದಾರೆ ! ತಕ್ಷಣ ಸ್ವಾಮೀಜಿಯ ಕಣ್ಣುಗಳು ತೆರೆದವು ಮತ್ತು ಅವರ ಹೃದಯದಲ್ಲಿ ಆನಂದ ತುಂಬಿತು. ಅದರೊಂದಿಗೆ ‘ಹೊರಡು’ ಎಂಬ ದೇವವಾಣಿಯು ಸುಸ್ಪಷ್ಟವಾಗಿ ಕೇಳಿಬಂತು. ಇದರಿಂದ ಅವರ ಮನಸ್ಸಿನಲ್ಲಿ ಪರದೇಶಕ್ಕೆ ಹೋಗುವ ಸಂಕಲ್ಪವು ಧೃಢವಾಯಿತು. ಅದು ಶಿಕಾಗೋ ಪ್ರಯಾಣದ ಬಗ್ಗೆ ಗುರುಗಳು ನೀಡಿದ ಪೂರ್ವಸೂಚನೆಯೇ ಆಗಿತ್ತು. ಅದರಂತೆಯೇ ಸ್ವಾಮಿ ವಿವೇಕಾನಂದರು ೩೧ ಮೇ ೧೮೯೩ರಂದು ‘ಪೆನೆನ್ಸುಲಾರ್’ ಹಡಗಿನಲ್ಲಿ ಮುಂಬಯಿಯ ತೀರವನ್ನು ಬಿಟ್ಟು ಅಮೇರಿಕಾದತ್ತ ಪ್ರಯಾಣಿಸಿದರು. ೧೪ ಜುಲೈ ರಂದು ಸ್ವಾಮೀಜಿ ಕೆನಡಾದ ವ್ಯಾಂಕೂವರ ಬಂದರನ್ನು ತಲುಪಿದರು. ಅಲ್ಲಿಂದ ರೈಲಿನ ಮೂಲಕ ಶಿಕಾಗೋ ಮಹಾನಗರಕ್ಕೆ ಬಂದರು. ಸೆಪ್ಟೆಂಬರ ೧೧ ರಂದು ಸರ್ವಧರ್ಮ ಸಮ್ಮೇಳನವು ಆರಂಭವಾಗಲಿದೆಯೆಂದು ಅವರಿಗೆ ತಿಳಿಯಿತು. ಆದರೆ ಅದರಲ್ಲಿ ಸಹಭಾಗಿಯಾಗಲು ಅವರ ಹತ್ತಿರ ಯಾವುದೇ ಪರಿಚಯ ಪತ್ರ ಇರಲಿಲ್ಲ, ಅಷ್ಟೇ ಅಲ್ಲದೇ ಪ್ರತಿನಿಧಿಯೆಂದು ಪುನಃ ಹೆಸರು ನೊಂದಾಯಿಸುವ ಸಮಯ ಕೂಡ ಮುಗಿದುಹೋಗಿತ್ತು. ಆದರೆ ಸ್ವಾಮೀಜಿಯವರ ವ್ಯಕ್ತಿತ್ವದಿಂದ ಜನರು ಆಕರ್ಷಿತರಾಗುತ್ತಿದ್ದರು. ‘ಹಾವರ್ಡ್ ವಿದ್ಯಾಪೀಠದ’ ಗ್ರೀಕ್ ಭಾಷೆಯ ಪ್ರಾಚಾರ್ಯರಾದ ಜೆ.ಎಚ್.ರೈಟ್‌ರವರು ಸ್ವಾಮೀಜಿಗಳ ಅಪ್ರತಿಮ ಬುದ್ಧಿಮತ್ತೆಯಿಂದ ಮಂತ್ರಮುಗ್ಧರಾಗಿ ಸ್ವಾಮೀಜಿಯವರಿಗೆ ಧರ್ಮಸಮ್ಮೇಳನದಲ್ಲಿ ಪ್ರತಿನಿಧಿಯೆಂದು ಪ್ರವೇಶವನ್ನು ಒದಗಿಸುವ ಜವಾಬ್ದಾರಿಯನ್ನು ವಹಿಸಿಕೊಂಡರು. ಭಾರತವೆಂಬ ಸುವರ್ಣಭೂಮಿಯ ಶ್ರೇಷ್ಠತಮವಾದ ಸನಾತನ ಧರ್ಮದ ಪರಿಚಯವನ್ನು ಜಗತ್ತಿಗೆ ಮಾಡಿಕೊಡುವುದು ಒಂದು ದೈವೀ ಯೋಗವೇ ಆಗಿತ್ತು. ಈ ಸಮ್ಮೇಳನದಲ್ಲಿ ಸ್ವಾಮೀ ವಿವೇಕಾನಂದರು ಯಾವುದೇ ವಿಶಿಷ್ಠ ಪಂಥದ ಪ್ರತಿನಿಧಿಯಾಗಿರಲಿಲ್ಲ. ಅವರು ಸಂಪೂರ್ಣ ಭಾರತವರ್ಷದ ಸನಾತನ ವೈದಿಕ ಧರ್ಮದ ಪ್ರತಿನಿಧಿಯಾಗಿ ಈ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಈ ಸಮ್ಮೇಳನದಲ್ಲಿ ೬ ರಿಂದ ೭ ಸಾವಿರ ಸ್ತ್ರೀ, ಪುರುಷ ಪ್ರತಿನಿಧಿಗಳು ಉಪಸ್ಥಿತರಿದ್ದರು. ಅಧ್ಯಕ್ಷರ ಸೂಚನೆಯ ಮೇರೆಗೆ ಗುರಗಳ ಸ್ಮರಣೆಯನ್ನು ಮಾಡುತ್ತಾ ಸ್ವಾಮೀಜಿಯವರು ವೇದಿಕೆಯನ್ನೇರಿದರು ಮತ್ತು “ಅಮೇರಿಕಾದ ನನ್ನ ಸಹೋದರ ಸಹೋದರಿಯರೇ” ಎಂದು ಸಭೆಯಲ್ಲಿರುವವರನ್ನು ಉದ್ಧೇಶಿಸಿ ಭಾಷಣವನ್ನು ಆರಂಭಿಸಿದಾಗ ಅವರ ಚೈತನ್ಯಪೂರ್ಣ ಹಾಗೂ ತೇಜಸ್ವಿ ವಾಣಿಯಿಂದ ಎಲ್ಲರೂ ಮಂತ್ರಮುಗ್ಧರಾದರು. ಆ ಶಬ್ಧಗಳನ್ನು ಉಚ್ಛರಿಸುತ್ತಲೇ ಸಾವಿರಾರು ಸ್ತ್ರೀ, ಪುರುಷರು ತಮ್ಮ ಸ್ಥಳದಿಂದ ಎದ್ದು ನಿಂತು ಚಪ್ಪಾಳೆಗಳ ಸುರಿಮಳೆಯನ್ನೇ ಹರಿಸಿದರು. ನಂತರ ಅವರು ಆಡಿದ ಮಾತುಗಳು ಭಾರತವನ್ನು ಹಾಗೂ ಹಿಂದೂ ಧರ್ಮವನ್ನು ಹೆಮ್ಮೆಪಡಿಸುವಂತಿದ್ದವು.
ಹಿಂದೂ ಸಮಾಜವು ಬಡವಾಗಿರಬಹುದು, ಆದರೆ ಅದು ತಿರಸ್ಕರಿಸುವಂತಹದ್ದಲ್ಲ. ಅದು ದೀನವಾಗಿರಬಹುದು, ದುಃಖಿತವಾಗಿರಬಹುದು, ಆದರೆ ಅತ್ಯಮೂಲ್ಯವಾದಂತಹ ಪಾರಮಾರ್ಥಿಕ ಸಂಪತ್ತಿನ ಉತ್ತರಾಧಿಕಾರಿಯಾಗಿದೆ. ಧರ್ಮದ ಕ್ಷೇತ್ರದಲ್ಲಿ ಅದು ಜಗದ್ಗುರುವಾಗಬಲ್ಲದು, ಇದು ಹಿಂದೂ ಧರ್ಮದ ಯೋಗ್ಯತೆಯಾಗಿದೆ’ ಈ ಶಬ್ಧಗಳಿಂದ ಹಿಂದೂ ಧರ್ಮದ ಮಹತ್ವವನ್ನು ಬಣ್ಣಿಸಿದರು. ಹಿಂದೂ ಧರ್ಮವನ್ನು ಸರ್ವಧರ್ಮ ಸಮ್ಮೇಳನದಲ್ಲಿ ಸರ್ವೋಚ್ಛ ಸ್ಥಾನದಲ್ಲಿ ಕುಳ್ಳಿರಿಸಿದರು ! ಈ ಸಮ್ಮೇಳನದಲ್ಲಿ ಹಿಂದೂಸ್ಥಾನದ ಕುರಿತು ಮಾತನಾಡುವಾಗ ಅವರು ‘ಹಿಂದುಸ್ಥಾನವು ಪುಣ್ಯಭೂಮಿಯಾಗಿದೆ, ಕರ್ಮಭೂಮಿಯಾಗಿದೆ ಎಂಬುದು ನಿಚ್ಛಳವಾದ ಸತ್ಯ! ಯಾವುದಾದರೊಂದು ದೇಶವನ್ನು ‘ಅಂತರ್ದೃಷ್ಠಿ ಹೊಂದಿರುವ ಮತ್ತು ಆಧ್ಯಾತ್ಮದ ಮಾತೃಭೂಮಿ’ ಎಂದು ಕರೆಯಬಹುದಾದರೆ ಅದು ಕೇವಲ ಹಿಂದೂಸ್ಥಾನ ! ಪ್ರಾಚೀನ ಕಾಲದಿಂದಲೂ ಇಲ್ಲಿ ಅನೇಕ ಧರ್ಮಸಂಸ್ಥಾಪಕರ ಉದಯವಾಗಿದೆ. ತ್ರಾಹಿ-ತ್ರಾಹಿ ಎನ್ನುವ ಜಗತ್ತನ್ನು ಅವರು ಪರಮಪವಿತ್ರ ಮತ್ತು ಸನಾತನವಾದಂತಹ ಆಧ್ಯಾತ್ಮಿಕ ಸತ್ಯದ ಶಾಂತಿಜಲದಿಂದ ತೃಪ್ತರನ್ನಾಗಿಸಿದ್ದಾರೆ. ಇಡೀ ಜಗತ್ತಿನಲ್ಲಿ ಪರಧರ್ಮದ ಕುರಿತು ಸಹಿಷ್ಣುತೆಯನ್ನು ಮತ್ತು ಪ್ರೇಮವನ್ನು ಕೇವಲ ಭಾರತದಲ್ಲಿಯೇ ಅನುಭವಿಸಲು ಸಾಧ್ಯವಿದೆ’ ಎಂದು ನುಡಿದರು.

ಪ್ರವಚನಗಳ ಮೂಲಕ ಧರ್ಮ ಪ್ರಸಾರಕಾರ್ಯ –
ವಿದೇಶದಲ್ಲಿ ಭಾರತದ ಹೆಸರನ್ನು ಉಜ್ವಲಗೊಳಿಸಿ ಕೊಲ್ಕತ್ತಾಗೆ ಮರಳಿದ ಸ್ವಾಮೀಜಿಯನ್ನು ವಿಜೃಂಭಿಣೆಯಿಂದ ಸ್ವಾಗತಿಸಲಾಯಿತು.
ಅವರು “ನನ್ನ ಚಳುವಳಿಯ ಯೋಜನೆ’ ಭಾರತೀಯ ಜೀವನದ ವೇದಾಂತ’ ನಮ್ಮ ಇಂದಿನ ಕರ್ತವ್ಯ’, ಭಾರತೀಯ ಮಹಾಪುರುಷ’, ಭಾರತದ ಭವಿಷ್ಯ, ಇಂತಹ ವಿಷಯಗಳ ಮೇಲೆ ಪ್ರವಚನಗಳನ್ನು ನೀಡಲು ಪ್ರಾರಂಭಿಸಿದರು. ಸ್ವಾಮಿ ವಿವೇಕಾನಂದರು ಭಾರತದ ಆಧ್ಯಾತ್ಮಿಕ ಸಂಸ್ಕೃತಿಯ ಕುರಿತು ಗಾಢವಾದ ಅಭಿಮಾನವನ್ನು ಹೊಂದಿದ್ದರು. ಆದರೆ ಅದರಲ್ಲಿ ನುಸುಳಿರುವ ಅನಿಷ್ಠ ರೂಢಿ, ಪರಂಪರೆ, ಜಾತಿಭೇದಗಳಂತಹ ಹೀನ ವಿಚಾರಗಳ ಮೇಲೆ ಅವರು ತಮ್ಮ ಭಾಷಣದಲ್ಲಿ ಕಟುವಾಗಿ ಟೀಕಿಸಿದರು ಮತ್ತು ನಿದ್ರಿಸ್ತ ಹಿಂದೂಗಳನ್ನು ಬಡಿದೆಬ್ಬಿಸಿದರು. ಇದೇ ಸಮಯದಲ್ಲಿ ಅವರು ಮಹಿಳೆಯರ ಕುರಿತು ಸಮಾಜದ ನಿಷ್ಕ್ರಿಯತೆಯ ಮೇಲೆ ಪ್ರಹಾರ ಮಾಡಿದರು. ಅವರು ತಮ್ಮ ಸ್ವಾಭಾವಿಕ ಪ್ರವೃತ್ತಿಯನ್ನು ಬಿಟ್ಟು ಜನಸಾಮಾನ್ಯರ ಸುಖ ದುಃಖಗಳ ಐಹಿಕ ವಿಷಯಗಳ ಕುರಿತು ವಿಚಾರವನ್ನು ಮಾಡಿದರು. ಮತ್ತು ಅವರ ಏಳ್ಗೆಗಾಗಿ ಚಡಪಡಿಸಿದರು. ಪರಹಿತಕ್ಕಾಗಿ ಸರ್ವಸ್ವವನ್ನು ಸಮಪಿಸುವುದೆಂದರೆ ನಿಜವಾದ ಸನ್ಯಾಸವೆನ್ನುವುದನ್ನು ಸಿದ್ಧಪಡಿಸಿದರು !

ಈಗಿನ ಯುವಕರು ಸ್ವಾಮಿ ವಿವೇಕಾನಂದರನ್ನು ಆದರ್ಶವಾಗಿಟ್ಟುಕೊಂಡು ರಾಷ್ಟ್ರ ಮತ್ತು ಧರ್ಮ ಕಾರ್ಯದಲ್ಲಿ ಸಹಭಾಗಿಯಾಗಬೇಕಿದೆ.

ಆಧಾರ – hindujagruti.org ಜಾಲತಾಣ

ಸಂಕಲನ –
ಶ್ರೀ. ಚಂದ್ರ ಮೊಗೇರ, ಸಮನ್ವಯಕರು, ಹಿಂದೂ ಜನಜಾಗೃತಿ ಸಮಿತಿ, ದಕ್ಷಿಣ ಕನ್ನಡ ಜಿಲ್ಲೆ ( ಸಂಪರ್ಕ : 7204082652 )

Leave A Reply

Your email address will not be published.