ಬಾವಿಗೆ ಬಿದ್ದು ತಾಯಿ ಮಕ್ಕಳು ಸಾವು | ಬಾವಿಗೆ ಬಿದ್ದ ಮಕ್ಕಳನ್ನು ರಕ್ಷಿಸಲು ನೀರಿಗಿಳಿದ ತಾಯಿಯೂ ಸಾವು

ತುಮಕೂರು: ಆಕಸ್ಮಿಕವಾಗಿ ಬಾವಿಗೆ ಬಿದ್ದು ತಾಯಿ, ಇಬ್ಬರು ಮಕ್ಕಳು ಸೇರಿ ಮೂವರು ಮೃತಪಟ್ಟಿರುವ ದಾರುಣ ಘಟನೆ ತಾಲೂಕಿನ ಕೋರ ಹೋಬಳಿಯ ಚಿಕ್ಕತೊಟ್ಲುಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಿರುಮಲಪಾಳ್ಯದಲ್ಲಿ ಗುರುವಾರ ಜರುಗಿದೆ.

ಮೃತರನ್ನು ತಿರುಮಲಪಾಳ್ಯದ ಕುಮಾರ್ ಅವರ ಪತ್ನಿ ಹೇಮಲತಾ (34) ಹಾಗೂ ಮಕ್ಕಳಾದ ಮಾನಸ (6), ಪೂರ್ವಿಕಾ (3) ಎಂದು ಗುರುತಿಸಲಾಗಿದೆ.

ಗುರುವಾರ ಕಾರ ಹುಣ್ಣಿಮೆ ನಿಮಿತ್ಯ ತೋಟದಲ್ಲಿ ಮೊಸರನ್ನ ಎಡೆ ಹಾಕಲು ಹೋಗಿದ್ದರು. ಆ ಸಂದರ್ಭದಲ್ಲಿ ಮಾನಸ ಬಾವಿಯ ದಡದಲ್ಲಿದ್ದ ಸೀಬೆ ಹಣ್ಣಿನ ಮರದಲ್ಲಿ ಹಣ್ಣು ಕೀಳಲು ಹೋಗಿ ಆಕಸ್ಮಿಕವಾಗಿ ಬಾವಿಗೆ ಬಿದ್ದಿದ್ದಾಳೆ.

ಈ ವೇಳೆ ಜೊತೆಯಲ್ಲಿದ್ದ ಪೂರ್ವಿಕಾಳು ಅಕ್ಕನಂತೆ ಬಾವಿಗೆ ಬಿದ್ದಿದ್ದಾಳೆ. ತನ್ನಿಬ್ಬರು ಮಕ್ಕಳು ಬಾವಿಗೆ ಬಿದ್ದಿದ್ದನ್ನು ಕಂಡು ಗಾಬರಿಗೊಂಡ ತಾಯಿ ಹೇಮಲತಾ ಮಕ್ಕಳನ್ನು ರಕ್ಷಿಸಲು ಬಾವಿಗೆ ಹಾರಿದ್ದಾರೆ. ಆದರೆ, ದುರದೃಷ್ಟಾವಶಾತ್ ಮೂವರು ಬಾವಿಯಿಂದ ಮೇಲೆ ಬರಲು ಸಾಧ್ಯವಾಗದೇ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ.

Leave A Reply

Your email address will not be published.