ಪ್ರತೀಕಾರಕ್ಕೆ ನಡೆಯಿತು ವೈದ್ಯ ದಂಪತಿ ಹತ್ಯೆ | ಅಷ್ಟಕ್ಕೂ ಅವರು ಮಾಡಿದ್ದ ತಪ್ಪು ಏನು ಗೊತ್ತಾ ?

ರಾಜಸ್ತಾನದ ಭರತ್ ಪುರದಲ್ಲಿ ನಿನ್ನೆ ಇಳಿ ಸಂಜೆ ನಡು ರಸ್ತೆಯಲ್ಲಿ ನಾಡ ಬಂದೂಕು ನಾಲ್ಕು ಬಾರಿ ಮೊರೆದಿತ್ತು. ರಸ್ತೆಯ ಮಧ್ಯೆ ಕಾರನ್ನು ಹಿಂದಕ್ಕೆ ಹಾಕಿ ಮುಂದೆ ಬಂದು ಬೈಕ್ ನಿಲ್ಲಿಸಿದ ಹಂತಕರು ವೈದ್ಯ ದಂಪತಿಯನ್ನು ಹತ್ಯೆ ಮಾಡಿ ಸಾವಕಾಶವಾಗಿ ದ್ವಿಚಕ್ರ ವಾಹನ ಏರಿ ಹೋಗಿದ್ದರು.

ನಿನ್ನೆ ಸಂಜೆ ಸುದೀಪ್ ಗುಪ್ತ (46) ಮತ್ತು ಆತನ ಪತ್ನಿ ಸೀಮಾ ಗುಪ್ತಾ(44) ಅವರು ಕಾರಿನಲ್ಲಿ ಹೋಗುತ್ತಿದ್ದಾಗ ಅವರ ಕಾರಿನ ಎದುರು ದ್ವಿಚಕ್ರ ವಾಹನ ತಂದು ನಿಲ್ಲಿಸಿದ್ದರು ಆಗಂತುಕರು. ವೈದ್ಯ ಸುದೀಪ್ ಗುಪ್ತ ಕಾರು ನಿಲ್ಲಿಸಿದ್ದರು. ಕಾರು ನಿಲ್ಲಿಸಿ, ಕಿಟಕಿಯ ವಿಂಡೋ ಗ್ಲಾಸ್ ತೆಗೆದು ಏನಾಗುತ್ತದೆ ಎಂದು ನೋಡುವಷ್ಟರಲ್ಲಿ ಸೊಂಟದಿಂದ ಪಿಸ್ತೂಲು ಎಳೆದು ನಿಂತ ಮುಖದ ತುಂಬಾ ಮಾಸ್ಕ್ ಧರಿಸಿದ್ದ ವ್ಯಕ್ತಿ ಮೊದಲು ವೈದ್ಯರಿಗೆ ಶೂಟ್ ಮಾಡುತ್ತಾನೆ. ಆನಂತರ ಆತನ ಪತ್ನಿಯನ್ನು ಹತ್ಯೆ ಮಾಡಿ ಪರಾರಿಯಾಗುತ್ತಾನೆ.

ಯಾಕಾಯಿತು ಈ ಹತ್ಯೆ ?

ಇದೀಗ ಹತ್ಯೆಯಾದ ವೈದ್ಯ ದಂಪತಿ ಏನು ಸಾಚಾ ಅಲ್ಲ. ಅವರಿಬ್ಬರಿಗೂ 1 ಕ್ರಿಮಿನಲ್ ಇತಿಹಾಸವಿದೆ. ಈಮೊದಲು ವೈದ್ಯ ಸುದೀಪ್ ಗುಪ್ತಾ ರಿಗೆ ಒಂದು ಮಹಿಳೆಯ ಜೊತೆ ಸಂಪರ್ಕವಿತ್ತು. ಅವರಿಬ್ಬರೂ ಒಂದಷ್ಟು ದಿನ ಪರಸ್ಪರ ಪ್ರೀತಿಯಲ್ಲಿ ಇದ್ದರು. ಆದರೆ ಆ ವಿಷಯ ಆ ವೈದ್ಯನ ಪತ್ನಿ ಸೀಮಾಲಿಗೆ ತಿಳಿಯುವುದು ತಡವಾಗಲಿಲ್ಲ. ವಿಷಯ ತಿಳಿದ ಸಿಮಾ ತನ್ನ ತಾಯಿಗೆ ಆ ವಿಷಯವನ್ನು ತಿಳಿಸುತ್ತಾಳೆ. ತನ್ನ ಪತಿಯ ಅಕ್ರಮ ಸಂಬಂಧದ ಬಗ್ಗೆ ಪತ್ನಿಯ ಮನೆಯಲ್ಲಿ ದೊಡ್ಡಮಟ್ಟದ ಅಸಹನೆ ಮೂಡುತ್ತದೆ. ಕೊನೆಗೆ ಒಂದು ದಿನ ವೈದ್ಯೆ ಸೀಮಾ ಮತ್ತು ಆಕೆಯ ತಾಯಿ ಇಬ್ಬರೂ ಸೇರಿಕೊಂಡು ಆಕೆಯ ಪತಿಯ ಪ್ರೇಯಸಿಯ ಮನೆಗೆ ಬೆಂಕಿ ಇಡುತ್ತಾರೆ. ದುರದೃಷ್ಟವಶಾತ್ ಬೆಂಕಿಯಲ್ಲಿ ವೈದ್ಯನ ಪ್ರೇಯಸಿ ಮತ್ತು ಆಕೆಯ ಮಗು ಇಬ್ಬರೂ ಸಾವನ್ನಪ್ಪುತ್ತಾರೆ.

ಆನಂತರ ಆಕೆಯನ್ನು ಮತ್ತು ಮಗುವನ್ನು ಹತ್ಯೆ ಮಾಡಿದ ಆರೋಪದ ಮೇಲೆ ವೈದ್ಯ ದಂಪತಿಗಳಿಗೆ ಜೈಲುಶಿಕ್ಷೆಯಾಗುತ್ತದೆ. ಹಾಗೆ ಸ್ವಲ್ಪ ಸಮಯ ಜೈಲು ಶಿಕ್ಷೆ ಅನುಭವಿಸಿದ ದಂಪತಿಗಳು ಇತ್ತೀಚೆಗೆ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದಿದ್ದರು. ಹಾಗೆ ಬಂದವರು ತಾವು ಈ ಹಿಂದೆ ನಡೆಸುತ್ತಿದ್ದ ಆಸ್ಪತ್ರೆಯನ್ನು ನೋಡಿಕೊಳ್ಳಲು ತೊಡಗಿದ್ದರು. ಆದರೆ ಅತ್ತ ಕಡೆ ಆ ಹುಡುಗಿ ಮತ್ತು ಮಗುವಿನ ಸಾವಿಗೆ ಪ್ರತೀಕಾರ ತೆಗೆದುಕೊಳ್ಳುವ ಪ್ರಯತ್ನಗಳು ನಡೆಯುತ್ತಿರುವುದು ಇವರ ಗಮನಕ್ಕೆ ಬಂದಿರಲಿಲ್ಲ. ಹಾಗೊಂದು ಸಣ್ಣ ಅನುಮಾನ ಕೂಡ ಇದ್ದಿದ್ದರೆ ಅವರು ಜಾಮೀನಿನ ಬಿಡುಗಡೆಯಾಗಿ ಬರುತ್ತಲೇ ಇರಲಿಲ್ಲ !

ಅತ್ತ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳುವ ತವಕದಲ್ಲಿ ಸತ್ತು ಹೋದ ಹುಡುಗಿಯ ಅಣ್ಣ ಅನುಜ್ ಗೂರ್ಜಾರ್ ಮತ್ತು ಚಿಕ್ಕಪ್ಪನ ಮಗ ಮಹೇಶ್ ಗುರ್ಜಾರ್ ಇಬ್ಬರೂ ಮಚ್ಚು ಮಸೆಯುತ್ತಿದ್ದರು. ಆದರೆ ಕಾಲ ಕೂಡಿ ಬಂದಿರಲಿಲ್ಲ. ಮೊನ್ನೆ ಜೈಲಿನಿಂದ ವೈದ್ಯ ದಂಪತಿ ಜಾಮೀನು ಪಡಕೊಂಡು ಹೊರಬಂದಾಗ ಪ್ರತೀಕಾರ ತೆಗೆದುಕೊಳ್ಳಲು ಕಾಲ ಪಕ್ವವಾಗಿ ತ್ತು. ಅಷ್ಟರಲ್ಲಿ ನಾಡ ಪಿಸ್ತೂಲು ದೊರಕಿಸಿ ಕೊಳ್ಳುವುದು ಹಂತಕ ಸಹೋದರರಿಗೆ ಕಷ್ಟವಾಗಿರಲಿಲ್ಲ.

ನಿನ್ನೆ ಒಂದು ಹಂತದ ಲೆಕ್ಕಾ ಚುಕ್ತಾ ಆಗಿದೆ. ಅಕ್ರಮ ಸಂಬಂಧ ವಿನಾಕಾರಣ ನಾಲ್ಕು ಬಲಿ ಪಡೆದಿದೆ.

Leave A Reply

Your email address will not be published.