ಚಾರ್ಮಾಡಿ | ನದಿ ನೀರಿನ ಮಟ್ಟ ಏಕಾಏಕಿ ಏರಿಕೆಯಾಗಿ ಮುಳುಗಿದ ಪಿಕಪ್

ನದಿ ನೀರಿನ ಮಟ್ಟ ಒಮ್ಮೆಲೇ ಏರಿಕೆಯಾದ ಕಾರಣ ಪಿಕಪ್ ಒಂದು ನೀರಿನಲ್ಲಿ ಮುಳುಗಿದ ಘಟನೆ ನಡೆದಿದೆ. ಚಾರ್ಮಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಚಿಬಿದ್ರೆ ಗ್ರಾಮದ ಉರ್ಪೆಲ್ ಗುಡ್ಡೆ ಎಂಬಲ್ಲಿ ಮೇ 25 ರಂದು ಸಂಜೆ ಮೃತ್ಯುಂಜಯ ನದಿಯಲ್ಲಿ ಏಕಾಏಕಿ ನೀರಿನ ಏರಿಕೆ ಉಂಟಾದ ಕಾರಣ ಪಿಕಪ್ ವಾಹನ ನೀರಲ್ಲಿ ಮುಳುಗಿದ ಘಟನೆ ವರದಿಯಾಗಿದೆ.

ಅಳದಂಗಡಿಯ ಪಿಕಪ್ ವಾಹನದಲ್ಲಿ ಎಂ ಕೆ ದಯಾನಂದ ಎಂಬವರ ಮನೆಗೆ ನದಿ ಹಾದಿಯ ಮೂಲಕ ಸೆಂಟ್ರಿಂಗ್ ಸಾಮಗ್ರಿಗಳನ್ನು ಸಾಗಿಸಿ ವಾಪಸಾಗುತ್ತಿದ್ದ ಸಂದರ್ಭದಲ್ಲಿ ಪಿಕಪ್ ವಾಹನ ನದಿಯ ಮಧ್ಯಭಾಗಕ್ಕೆ ಬರುತ್ತಿದ್ದಂತೆಯೇ ಭಾರಿ ಪ್ರಮಾಣದ ನೀರು ಹರಿದು ಬಂದಿದೆ. ವಾಹನ ಚಲಾಯಿಸಲು ಸಾಧ್ಯವಾಗದಿದ್ದಾಗ ಅಪಾಯ ಅರಿತು ಕಂಗಾಲಾದ ಪಿಕಪ್ ಚಾಲಕ ಹಾಗೂ ಪಿಕಪ್ ನಲ್ಲಿದ್ದ ಇನ್ನೋರ್ವ ಸೈಡ್ ಗ್ಲಾಸ್ ಹಾಕಿ ಗಾಡಿಯಿಂದ ಇಳಿದು ನದಿಯಿಂದ ಮೇಲೆ ಪಾರಾಗಿ ಬಂದಿದ್ದಾರೆ.

ಪಿಕಪ್ ಅಲ್ಲಿಯೇ ಸಿಲುಕಿಕೊಂಡಿದ್ದು, ಚಾಲಕ ಕರೆಮಾಡಿ ಇತರರಿಗೆ ಮಾಹಿತಿ ನೀಡಿದ್ದಾರೆ.
ತಕ್ಷಣವೇ ಸ್ಥಳಕ್ಕೆ ಧಾವಿಸಿದ ಸ್ಥಳೀಯ ಯುವಕರು ನೀರಿಗೆ ಇಳಿದು ಪಿಕಪ್ ಗೆ ಹಗ್ಗ ಹಾಕಿ ಮರಕ್ಕೆ ಕಟ್ಟಿದರು. ನೀರಿನ ಮಟ್ಟ ಮತ್ತಷ್ಟು ಮೇಲೇರಿದ್ದು ಪಿಕಪ್ ಮಗುಚಿ ಬಿದ್ದಿದೆ. ಎರಡು ಮೂರು ಪಲ್ಟಿಯಾಗಿ ಹಗ್ಗದ ಸಹಾಯದಿಂದ ನಿಂತಿದೆ.
ಎಸ್.ಕೆ. ಎಸ್.ಎಸ್.ಎಫ್.ನ ವಿಖಾಯ ತಂಡದವರು ಹಗ್ಗ ಹಾಗೂ ರೋಪ್ ತಂದು ಉಕ್ಕಿ ಹರಿಯುತ್ತಿದ್ದ ನದಿಗೆ ಧುಮುಕಿ ಪಿಕಪ್ ನ್ನು ಸಾಹಸಪಟ್ಟು ಎಳೆದು ನದಿಯಿಂದ ಮೇಲೆತ್ತಿದ್ದಾರೆ.

ನೀರಿನ ರಭಸಕ್ಕೆ ಪಿಕಪ್ ಸಂಪೂರ್ಣ ನುಜ್ಜುಗಿಜ್ಜಾಗಿದೆ. ಸ್ಥಳೀಯ ವಿಖಾಯ ತಂಡದ ಸಿರಾಜ್ ಚಿಬಿದ್ರೆ, ರಫೀಕ್, ನಝೀರ್ ಬಿಕೆ,ಇಕ್ಬಾಲ್ ಕೋನ, ಇಮ್ರಾನ್,ಆಸಿಫ್,ಅದ್ದು, ಉಸ್ಮಾನ್ ಹಾಗೂ ಇತರರು ಪಿಕಪ್ ನ್ನು ಮೇಲೆತ್ತಲು ಸಹಕರಿಸಿದರು.

ಕಳೆದ ಮೂರು ದಿನಗಳಿಂದ ಮೃತ್ಯುಂಜಯ ನದಿ ಹರಿಯುವ ಈ ಭಾಗದಲ್ಲಿ ಮಳೆ ಪ್ರಮಾಣ ಕಡಿಮೆ ಇದೆ. ಹಾಗಿದ್ದರೂ ನದಿಯಲ್ಲಿ ಭಾರಿ ಪ್ರಮಾಣದ ನೀರು ಏಕಾಏಕಿ ಏರಿಕೆಯಾಗಿದೆ.ಇದಕ್ಕೆ ಕಾರಣ ಏನೆಂಬುದು ತಿಳಿದು ಬಂದಿಲ್ಲ. 2019ರ ಪ್ರವಾಹದ ಬಳಿಕ ಇಲ್ಲಿನ ಮೃತ್ಯುಂಜಯ ಹಾಗೂ ನೇತ್ರಾವತಿ ನದಿಯ ನೀರಿನ ಮಟ್ಟ ಸಾಮಾನ್ಯ ಮಳೆಗೂ ಆಗಾಗ ಭಾರಿ ಏರಿಕೆಯಾಗುತ್ತಿರುವುದು ನದಿ ಪ್ರದೇಶದ ಜನರಲ್ಲಿ ಭೀತಿ ಹುಟ್ಟಿಸುತ್ತಿದೆ. ಈ ತಿಂಗಳಲ್ಲೇ ಮೂರನೇ ಬಾರಿ ನದಿ ಹರಿವಿನಲ್ಲಿ ಭಾರಿ ಏರಿಕೆ ಕಂಡುಬಂದಿದೆ.

ಮಳೆಗಾಲ ಆರಂಭಕ್ಕೂ ಮುನ್ನ ಈ ರೀತಿ ನದಿಯಲ್ಲಿ ನೀರು ಹೆಚ್ಚಳ ಕಂಡು ನದಿತೀರದ ಜನ ಕಂಗಾಲಾಗಿ ಹೋಗಿದ್ದಾರೆ. ಮಳೆಗಾಲದಲ್ಲಿ ಯಾವುದೇ ರೀತಿಯ ಪ್ರವಾಹ ಉಂಟಾಗದಿರಲಿ ಎಂದು ದೇವರಲ್ಲಿ ಪ್ರಾರ್ಥಿಸಿಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

Leave A Reply

Your email address will not be published.