ಯುವಕನ ಕಪಾಳಕ್ಕೆ ಹೊಡೆದು ಮೊಬೈಲ್ ಕಸಿದ ಜಿಲ್ಲಾಧಿಕಾರಿ ಅಮಾನತು

ಕೊರೋನಾ ನಿಯಮ ಉಲ್ಲಂಘಿಸಿದ ಎಂಬ ಕಾರಣ ನೀಡಿ ಯುವಕನೊಬ್ಬನಿಗೆ ಕಪಾಳಮೋಕ್ಷ ಮಾಡಿದ್ದ ಜಿಲ್ಲಾಧಿಕಾರಿ ರಣಬೀರ್ ಶರ್ಮ ಅವರನ್ನು ಹುದ್ದೆಯಿಂದ ತೆಗೆದುಹಾಕಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಈ ಘಟನೆಯ ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ರಾಜ್ಯದ ಸಿಎಂ ಭೂಪೇಶ್ ಬಫೇಲ್ ಅವರು ಈ ಆದೇಶ ಹೊರಡಿಸಿದ್ದಾರೆ. ಮತ್ತೊಬ್ಬ ಐಎಎಸ್ ಅಧಿಕಾರಿ ಗೌರವ್ ಕುಮಾರ್ ಸಿಂಗ್ ಅವರನ್ನು ಸೂರಜ್‌ಪುರದ ಹೊಸ ಜಿಲ್ಲಾಧಿಕಾರಿಯಾಗಿ ನೇಮಿಸಲಾಗಿದೆ.

ರಣಬೀರ್ ಶರ್ಮ ಎಂಬ ಜಿಲ್ಲಾಧಿಕಾರಿ ಲಾಕ್‌ಡೌನ್ ನಡುವೆ ಕೆಲ ಯುವಕನ ಮೊಬೈಲ್ ಪಡೆದು ಜೋರಾಗಿ ನೆಲಕ್ಕೆ ಎಸೆದು ಒಡೆದು ಹಾಕಿದ್ದರು. ಅಷ್ಟೇ ಅಲ್ಲ, ಕಪಾಳಕ್ಕೆ ಬಾರಿಸಿ, ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿಗೆ ಅವನನ್ನು ಥಳಿಸುವಂತೆ ಹೇಳಿದ್ದರು. ನಂತರ ಆತನ ಮೇಲೆ ಎಫ್ಐಆರ್ ಕೂಡ ದಾಖಲಿಸಲು ಆದೇಶಿಸಿದ್ದರು. ಇದೆಲ್ಲದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜಿಲ್ಲಾಧಿಕಾರಿಗಳ ನಡೆಗೆ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದರು. ಐಎಎಸ್ ಅಸೋಸಿಯೇಷನ್ ಸಹ ಈ ಕೃತ್ಯವನ್ನು ಖಂಡಿಸಿತ್ತು.

ಔಷಧಿಗಳನ್ನು ತರಲು ಮನೆಯಿಂದ ಹೊರಬಂದಿದ್ದ ಎನ್ನಲಾದ ವಿಡಿಯೋ ವೈರಲ್ ಆದ ಬೆನ್ನಲ್ಲೇ, ಛತ್ತೀಸಘಡ ಸಿಎಂ ಭೂಪೇಶ್ ಬಫೇಲ್ ಅವರು ಈ ಘಟನೆಯನ್ನು ಖಂಡಿಸಿ, ಈ ರೀತಿಯ ವರ್ತನೆಗಳನ್ನು ರಾಜ್ಯದಲ್ಲಿ ಸಹಿಸಿಕೊಳ್ಳುವುದಿಲ್ಲ. ಸಂಬಂಧಿತ ಅಧಿಕಾರಿಯನ್ನು ಕೂಡಲೇ ಅವರ ಹುದ್ದೆಯಿಂದ ತೆಗೆಯಲಾಗುವುದು ಎಂದು ಟ್ವಿಟ್ ಮಾಡಿದ್ದರು.

ಈ ನಡುವೆ ರಣಬೀರ್ ಶರ್ಮ ಅವರು ತಮ್ಮ ನಡವಳಿಕೆ ಬಗ್ಗೆ ಕ್ಷಮೆ ಕೋರಿದ್ದಾರೆ. ಆದರೆ ಯುವಕನು ಉದ್ಧಟವಾಗಿ ನಡೆದುಕೊಂಡ ಎಂದು ದೂರಿದ್ದಾರೆ. “ಯುವಕನ ಉದ್ಧಟತನದ ವರ್ತನೆಯಿಂದಾಗಿ ನಾನು ಆಕ್ರೋಶಗೊಂಡು ಅವನ ಕಪಾಳಕ್ಕೆ ಹೊಡೆದೆ’ ಎಂದು ಶರ್ಮ ವಿವರಣೆ ನೀಡಿದ್ದಾರೆ. ಆದರೆ ಕಾಲ ಮಿಂಚಿ ಹೋಗಿದೆ ಈಗ ಜಿಲ್ಲಾಧಿಕಾರಿ ಅಮಾನತ್ ಆಗಿದ್ದಾರೆ.

ಆದರೆ ನಮ್ಮಲ್ಲಿ ಚಾಮರಾಜನಗರದಲ್ಲಿ 37 ಜನರ ನರಮೇಧ ನಡೆದು ಹೋದರು ಜಿಲ್ಲಾಧಿಕಾರಿ ಮೇಲೆ ಒಂದು ವಾಗ್ದಂಡನೆಯ ಶಿಕ್ಷೆಯು ಕೂಡ ಇಲ್ಲದೆ, ಚಾಮರಾಜನಗರದ ಜಿಲ್ಲಾಧಿಕಾರಿ ರವಿ ಅವರು ಇವತ್ತಿಗೂ ಆರಾಮವಾಗಿ ಕಾಲು ಚಾಚಿ ಕುಳಿತಿದ್ದಾರೆ. ನಮ್ಮ ರಾಜ್ಯದ ಆಡಳಿತಕ್ಕೂ ಬೇರೆ ರಾಜ್ಯಕ್ಕೂ ಎಷ್ಟು ಅಜಗಜಾಂತರ ವ್ಯತ್ಯಾಸ ಎಂಬುದು ಇದರಿಂದ ತಿಳಿಯುತ್ತದೆ.

Leave A Reply

Your email address will not be published.