ವಿದೇಶದಲ್ಲಿರುವ ಮಂಗಳೂರು ಮೂಲದವರ ಸಂಪರ್ಕ, ನೆರವಿಗಾಗಿ ಮಂಗಳೂರು ಪೊಲೀಸ್ ಕಮಿಷನರೇಟ್ ವತಿಯಿಂದ ಸಮನ್ವಯ ವೇದಿಕೆಯೊಂದನ್ನು ಆರಂಭಿಸಲಾಗಿದೆ.<br>ಉದ್ಯೋಗ ಸಹಿತ ವಿವಿಧ ಕಾರಣದಿಂದ ವಿದೇಶಗಳಲ್ಲಿ ನೆಲೆಸಿರುವ ಮಂಗಳೂರು ಮೂಲದ ಕುಟುಂಬಗಳ ತುರ್ತು ಸಂಕಷ್ಟಗಳಿಗೆ ಸ್ಪಂದಿಸುವ ಹಾಗೂ ನೆರವು ನೀಡುವ ಉದ್ದೇಶದೊಂದಿಗೆ ಕೋವಿಡ್ ‘ಸಮನ್ವಯ’ ಹೆಲ್ಪ್ಲೈನ್ಗೆ ಶುಕ್ರವಾರ ಚಾಲನೆ ನೀಡಲಾಯಿತು.
ಅನಿವಾಸಿ ಭಾರತೀಯರ (ಎನ್ಆರ್ಐ) ಜತೆ ಅವರ ಸಮಸ್ಯೆಗಳ ಬಗ್ಗೆ ಶುಕ್ರವಾರ ವೆಬಿನಾರ್ ನಡೆಸಿದ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಸಲಹೆ, ಸೂಚನೆ, ಅಹವಾಲುಗಳನ್ನು ಸ್ವೀಕರಿಸಿದರು.
ಎನ್ಆರ್ಐಗಳು ಸಹಾಯಕ್ಕಾಗಿ ಕೋವಿಡ್ ಸಮನ್ವಯ ಹೆಲ್ಪ್ಲೈನ್ ನಂ.9480802300 ಸಂಪರ್ಕಿಸಬಹುದು.
ಯಾವುದೇ ಸಹಾಯ, ನೆರವಿನ ನಿರೀಕ್ಷೆಗಾಗಿ, ಸಂದೇಶ, ಅಥವಾ ವಾಯ್ಸ್ ರೆಕಾರ್ಡ್, ವೀಡಿಯೋ ಸಂದೇಶ ಕಳುಹಿಸಿದಾಗ, ಸಂಬಂಧ ಪಟ್ಟವರಿಂದ ಪರಿಹಾರ ಒದಗಿಸಲು ಪ್ರಯತ್ನಿಸಲಾಗುವುದು. ಹೆಲ್ಪ್ಲೈನ್ಗೆ ಬರುವ ಕರೆಗಳಿಗೆ ಸ್ವಯಂ ಪ್ರೇರಿತವಾಗಿ ವ್ಯಕ್ತಿ ಅಥವಾ ಸಂಸ್ಥೆಗಳಿಂದ ಸ್ಪಂದಿಸಲು ಸಾಧ್ಯವಾಗದೆ ಇರುವ ಸಮಸ್ಯೆಯನ್ನು ಜಿಲ್ಲಾಡಳಿತ ಅಥವಾ ಇಲಾಖೆಗಳಿಗೆ ಗಮನಕ್ಕೆ ತರುವ ಮೂಲಕ ತುರ್ತು ಪರಿಸ್ಥಿತಿಯಲ್ಲಿ ಇರುವವರಿಗೆ ನೆರವು ಒದಗಿಸಲಾಗುವುದು. ಈ ಹೆಲ್ಪ್ಲೈನ್ 24×7 ಕಾರ್ಯ ನಿರ್ವಹಿಸಲಿದೆ. ಕೊರೋನ ತಲ್ಲಣಗಳನ್ನು ಸೃಷ್ಟಿಸಿದೆ. ಜನಸ್ನೇಹಿ ನಡೆಯ ನಿಟ್ಟಿನಲ್ಲಿ ಇದೊಂದು ಸಣ್ಣ ಪ್ರಯತ್ನ ಎಂದು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.
ಕುವೈಟ್, ಕೆನಡಾ, ಯುಎಸ್ಎ, ಯುಎಇ, ಕತಾರ್, ಓಮನ್, ಸೌದಿ ಅರೆಬಿಯಾ, ನ್ಯೂಜಿಲೆಂಡ್, ಆಸ್ಟ್ರೇಲಿಯಾ, ಲಂಡನ್,ಇಸ್ರೇಲ್, ಬಹರೇನ್, ಹಾಂಕಾಂಗ್, ಜಮರ್ನಿ ಸೇರಿದಂತೆ 20 ರಾಷ್ಟ್ರಗಳಿಂದ 100 ಅಧಿಕ ಮಂದಿ ವೆಬಿನಾರ್ನಲ್ಲಿ ಪಾಲ್ಗೊಂಡಿದ್ದರು.