ಶೀರೂರು ಮಠದ 31ನೇ ಯತಿಯಾಗಿ ಶ್ರೀವೇದವರ್ಧನ ತೀರ್ಥ: ಇಂದು ನಡೆಯಿತು ಪಟ್ಟಾಭಿಷೇಕ

ಉಡುಪಿ ಅಷ್ಟಮಠಗಳಲ್ಲಿ ಒಂದಾದ ಶೀರೂರು ಮಠದ 31ನೇ ಪೀಠಾಧಿಪತಿಯಾಗಿ ಶ್ರೀವೇದವರ್ಧನ ತೀರ್ಥರಿಗೆ ಸೋದೆ ವಾದಿರಾಜ ಮಠದ ಶ್ರೀವಿಶ್ವವಲ್ಲಭ ತೀರ್ಥ ಸ್ವಾಮೀಜಿ ಶುಕ್ರವಾರ ಅಪರಾಹ್ನ 12:35ಕ್ಕೆ ಶೀರೂರು ಮೂಲ ಮಠದಲ್ಲಿ ಪಟ್ಟಾಭಿಷೇಕ ನೆರವೇರಿಸಿದರು.

16ರ ಹರೆಯದ ಶ್ರೀವೇದವರ್ಧನ ತೀರ್ಥರು, 2018ರ ಜು.19ರಂದು ನಿಧನರಾದ ಶ್ರೀಲಕ್ಷ್ಮೀವರ ತೀರ್ಥರ ಉತ್ತರಾಧಿಕಾರಿಯಾಗಿರುವರು. ಗುರುವಾರ ಸೋದೆಶ್ರೀಗಳು ಉಡುಪಿಯ ಅನಿರುದ್ಧ ಸರಳತ್ತಾಯರಿಗೆ ಸನ್ಯಾಸ ದೀಕ್ಷೆ ನೀಡಿದ್ದರು. ಇಂದು ಅಕ್ಷಯ ತೃತಿಯಾ ಶುಭದಿನದಂದು ಮಧ್ವಾಚಾರ್ಯರ ಶಿಷ್ಯ ವಾಮನ ತೀರ್ಥರ ಪರಂಪರೆಯ ಶೀರೂರು ಮಠದ 31ನೇ ಪೀಠಾಧಿಪತಿಯಾಗಿ ನೂತನ ಯತಿಗೆ ನಾಮಕರಣ ಮಾಡಿದ ಬಳಿಕ ಶಿರೂರು ಮಠದ ಉತ್ತರಾಧಿಕಾರಿಯಾಗಿ ಪಟ್ಟಾಭಿಷೇಕ ನೆರವೇರಿಸಿದರು.

ಇದಕ್ಕೂ ಮುನ್ನ ಪುರುಷಸೂಕ್ತ ಹೋಮ, ವಿರಜಾ ಹೋಮ ಹಾಗೂ ವೇದವ್ಯಾಸ ಮಂತ್ರ ಹೋಮ ಇತ್ಯಾದಿ ಧಾರ್ಮಿಕ ಪ್ರಕ್ರಿಯೆಗಳು ಅವಧಾನಿ ಸುಬ್ರಹ್ಮಣ್ಯ ಭಟ್ ಗುಂಡಿಬೈಲು, ಗಿರಿರಾಜ ಉಪಾಧ್ಯಾಯ ಹಾಗೂ ನಾರಾವಿ ಗುರುರಾಜ ಭಟ್‌ರ ನೇತೃತ್ವದಲ್ಲಿ ನೆರವೇರಿದವು.

ಅಪರಾಹ್ನ 12:35ರ ಮುಹೂರ್ತದಲ್ಲಿ ಸೋದೆ ಶ್ರೀವಿಶ್ವವಲ್ಲಭ ತೀರ್ಥರು ತಲೆ ಮೇಲೆ ಶೀರೂರು ಮಠದ ಉಪಾಸ್ಯಮೂರ್ತಿ ಸಹಿತ ಸಾಲಿಗ್ರಾಮವನ್ನು ಇರಿಸಿಕೊಂಡಿದ್ದ ನೂತನ ಯತಿಗೆ ಪಟ್ಟಾಭಿಷೇಕದ ಅಂಗವಾಗಿ ಅಭಿಷೇಕ ನಡೆಸಿದರು. ಅನಂತರ ನೂತನ ಯತಿಯ ನಾಮಕರಣ ನಡೆಯಿತು.

ಈ ಸಂರ್ಭದಲ್ಲಿ ಅಶೀರ್ವಚನ ನೀಡಿದ ಸೋದೆಶ್ರೀಗಳು, ನೂತನ ಯತಿಗಳು ಮಠದ ಸನಾತನ ಪರಂಪರೆಯನ್ನು ಬೆಳಗಲಿ ಎಂಬ ಉದ್ದೇಶ ದಿಂದ ವೇದವರ್ಧನ ತೀರ್ಥ ಎಂದು ನಾಮಕರಣ ಮಾಡಿದ್ದೇವೆ. ಇದರೊಂದಿಗೆ ಮಠದ ಪರಂಪರೆ ಹಾಗೂ ಶ್ರೀಗಳ ಕೀರ್ತಿಯೂ ವರ್ಧಿಸಲಿ ಎಂದು ಹಾರೈಸಿದರು. ಶೀರೂರು ಶ್ರೀಗಳೂ ಅನುಗ್ರಹ ಸಂದೇಶ ನೀಡಿದರು.

ಶೀರೂರು ಶ್ರೀಗಳ ಪೂರ್ವಾಶ್ರಮದ ತಂದೆ ಉದಯಕುಮಾರ ಸರಳತ್ತಾಯ, ತಾಯಿ ಶ್ರೀವಿದ್ಯಾ, ಸೋದೆ ಮಠ ಎಜುಕೇಶನ್ ಟ್ರಸ್ಟ್ ಕಾರ್ಯದರ್ಶಿ ರತ್ನಕುಮಾರ ಮೊದಲಾದವರು ಉಪಸ್ಥಿತರಿದ್ದರು.

ಶ್ರೀಕೃಷ್ಣಮಠಕ್ಕೆ ಆಗಮನ: ಇಂದು ಶೀರೂರು ಮೂಲಮಠದಲ್ಲಿ ಮಠದ 31ನೇ ಯತಿಯಾಗಿ ಪಟ್ಟಾಭಿಷೇಕಗೊಂಡ ಶ್ರೀವೇದವರ್ಧನತೀಥ ಸ್ವಾಮೀಜಿ ಅವರು ಸೋದೆ ಶ್ರೀಗಳೊಂದಿಗೆ ಉಡುಪಿ ಶ್ರೀಕೃಷ್ಣ ಮಠಕ್ಕೆ ಆಗಮಿಸಿ ದೇವರ ದರ್ಶನ ಪಡೆದರು.ರಥಬೀದಿಯಲ್ಲಿ ಮೆರವಣಿಗೆಯಲ್ಲಿ ವಾದ್ಯಘೋಷ, ವೇದಘೋಷಗಳೊಂದಿಗೆ ಆಗಮಿಸಿದ ಯತಿಗಳನ್ನು ಪರ್ಯಾಯ ಅದಮಾರು ಮಠದ ಶ್ರೀಈಶಪ್ರಿಯತೀರ್ಥರು ಬರ ಮಾಡಿಕೊಂಡರು.

ಶ್ರೀಅನಂತೇಶ್ವರ, ಶ್ರೀಕೃಷ್ಣ ಹಾಗೂ ಮುಖ್ಯಪ್ರಾಣರ ದರ್ಶನದ ಬಳಿಕ ಚಂದ್ರಶಾಲೆಯಲ್ಲಿ ಮಾಲಿಕೆ ಮಂಗಳಾರತಿ ನಡೆಯಿತು. ಯತಿಗಳು ಅನುಗ್ರಹ ಸಂದೇಶ ನೀಡಿದರು.

Leave A Reply

Your email address will not be published.