ಮೇ ತಿಂಗಳಾಂತ್ಯಕ್ಕೆ ಲಾಕ್‌ಡೌನ್‌ ತೆರವಾದರೆ, ಮಧ್ಯ ಜುಲೈನಲ್ಲಿ ಕೋವಿಡ್‌ ಉಲ್ಬಣ: ತಜ್ಞರ ಅಭಿಪ್ರಾಯ

ಬೆಂಗಳೂರು: ಈಗ ಜಾರಿಯಲ್ಲಿರುವ ಲಾಕ್‌ಡೌನ್‌ ಅನ್ನು ಈ ತಿಂಗಳ ಕೊನೆಯಲ್ಲಿ ತೆರವುಗೊಳಿಸಿದರೆ, ಮಧ್ಯ ಜುಲೈ ವೇಳೆಗೆ ಭಾರತದಲ್ಲಿ ಕೋವಿಡ್‌ 19 ಪ್ರಕರಣಗಳು ಉಲ್ಬಣಗೊಳ್ಳುವ ಸಾಧ್ಯತೆಗಳಿವೆ. ಆದರೆ, ಕಳೆದ ಎರಡು ತಿಂಗಳಲ್ಲಿ ದೇಶ ಕೈಗೊಂಡಿರುವ ಸೋಂಕು ನಿಗ್ರಹ ಕ್ರಮಗಳಿಂದಾಗಿ ವೈರಸ್‌ ಕಡಿಮೆ ಪ್ರಮಾಣದಲ್ಲಿ ಪ್ರಸರಣೆಗೊಳ್ಳಲಿದೆ ಎಂದು ಸಾರ್ವಜನಿಕ ಆರೋಗ್ಯ ತಜ್ಞರು ಮತ್ತು ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ.

‘ಭಾರತದಲ್ಲಿ ಕೋವಿಡ್‌–19ನಿಂದ ಸಂಭವಿಸಿದ ಸಾವಿನ ಪ್ರಮಾಣವು ವಿಶ್ವದ ಯಾವುದೇ ದೇಶಕ್ಕೆ ಹೋಲಿಸಿದರೂ ಕಡಿಮೆ ಇದೆ. ಇದರರ್ಥ ದೇಶವು ವೈರಸ್ ಪ್ರಸರಣೆಯನ್ನು ದೊಡ್ಡ ಮಟ್ಟದಲ್ಲಿ ತಡೆದಿದೆ,’ ಎಂದು ಭಾರತೀಯ ಸಾರ್ವಜನಿಕ ಆರೋಗ್ಯ ಪ್ರತಿಷ್ಠಾನದ ಸಾಂಕ್ರಾಮಿಕ ರೋಗಶಾಸ್ತ್ರ ವಿಭಾಗದ ಮುಖ್ಯಸ್ಥರು ಗಿರಿಧರ ಆರ್ ಬಾಬು ಅಭಿಪ್ರಾಯಪಟ್ಟಿದ್ದಾರೆ.

‘ಮೇ 30ರಂದು ಲಾಕ್‌ಡೌನ್‌ ಅನ್ನು ತೆರವು ಮಾಡಿದರೆ, ಜುಲೈ ಮಧ್ಯದ ವೇಳೆಗೆ ವೈರಸ್‌ ಸೋಂಕು ಪ್ರಕರಣಗಳು ಉಲ್ಬಣಗೊಳ್ಳುತ್ತವೆ. ವೈರಸ್‌ ವ್ಯಾಪಕಗೊಳ್ಳಲು ಹದಿನೈದು ದಿನಗಳ ಮೂರು ಅವಧಿ ಸಾಕು,’ ಎಂದು ಅವರು ತಿಳಿಸಿದ್ದಾರೆ.


ನಗರ ಪ್ರದೇಶಗಳಿಂದ ಹಳ್ಳಿಗಳಿಗೆ ಸೋಂಕು ತಲುಪದಂತೆ ನಾವು ನೋಡಿಕೊಂಡಿದ್ದೇವೆ. ಹೀಗಾಗಿ ದೇಶದಲ್ಲಿ ಸೋಂಕು ಕಡಿಮೆ ಮಟ್ಟದಲ್ಲಿ ಪ್ರಸರಣೆಗೊಳ್ಳಲಿದೆ ಎನ್ನಬಹುದು. ಆದರೆ, ಕೋವಿಡ್‌ ವಿರುದ್ಧದ ಹೋರಾಟದಲ್ಲಿ ನಮ್ಮ ರಕ್ಷಣಾ ಕ್ರಮಗಳನ್ನು ನಾವು ಕೈಬಿಡಬಾರದು ಎಂದು ಅವರು ಹೇಳಿದ್ದಾರೆ.

ಗಿರಿಧರ ಆರ್ ಬಾಬು ಅವರು ಸಾಂಕ್ರಾಮಿಕ ರೋಗ ತಜ್ಞರಾಗಿದ್ದು, ಕ್ಯಾಲಿಫೋರ್ನಿಯಾ ಲಾಸ್‌ ಏಂಜಲಿಸ್‌ ವಿಶ್ವವಿದ್ಯಾಲಯದಲ್ಲಿ ತರಬೇತಿ ಪಡೆದಿದ್ದಾರೆ.

Leave A Reply

Your email address will not be published.