ಧರ್ಮಸ್ಥಳ | 14 ಅಡಿ ಉದ್ದದ ಸಂಕಮಾಲ ಹಿಡಿದು ಕಾಡಿಗೆ ಬಿಟ್ಟ ಪುಟ್ನ೦ಜ ಸ್ನೇಕ್ ಲಿಂಗಪ್ಪ ನಾಯ್ಕ ಮತ್ತು ತಂಡ

ಧರ್ಮಸ್ಥಳ : ಧರ್ಮಸ್ಥಳ ಗ್ರಾಮದ ನಾರ್ಯ ಎಂಬಲ್ಲಿ ಬೃಹತ್ ಕಾಳಿಂಗ ಸರ್ಪವೊಂದು ಪತ್ತೆಯಾಗಿದ್ದು, ಅದನ್ನು ಸುರಕ್ಷಿತವಾಗಿ ರಕ್ಷಿಸಿ ಅರಣ್ಯಕ್ಕೆ ಬಿಡಲಾಯಿತು.

 

ಮೊಟ್ಟಮೊದಲಿಗೆ ಈ ಹಾವು ಸೋಮವಾರ ಸಂಜೆ 4 ಗಂಟೆಗೆ ಹಾಲು ತೆಗೆದುಕೊಂಡು ಡೈರಿಗೆ ಹೋಗುತ್ತಿದ್ದ ಊರಿನ ಜನರಿಗೆ ಕಾಣಿಸಿಕೊಂಡಿತು. ಸುಮಾರು 14 ಅಡಿ ಉದ್ದವಿರುವ ಈ ಹಾವನ್ನು ನಾರ್ಯದ ಕೆಲವರು ತಮ್ಮ ತೋಟದ ಬದಿಯಲ್ಲಿ ಗಮನಿಸಿದರು. ಅದಾಗಲೇ ಆ ಹಾವು ಹುಷಾರಿಲ್ಲದೆ ಒಂದೇ ಕಡೆ ಮಲಗಿದಂತಿತ್ತು. ಬಹುಶಃ ಅದು ಇನ್ನೊಂದು ವಿಷಪೂರಿತ ಹಾವನ್ನು ನುಂಗಿತ್ತು, ಆದುದರಿಂದ ವಿಷ ಏರಿ ಈ ರೀತಿ ಮಲಗಿದೆ ಎಂದು ಜನ ಮಾತಾಡಿಕೊಳ್ಳುತ್ತಿದ್ದರು.
ಒಟ್ಟಾರೆ, ‘ ಸಂಕಮಾಲೆ ಉಂಡುಗೆ ‘ ಎಂಬ ಪದವೇ ಜನ ಭಯಭೀತರಾಗುವಂತೆ ಮಾಡಿತ್ತು.

ಈ ಹಾವು ಮರುದಿನವು ಕೂಡ ಅದೇ ಜಾಗದಲ್ಲಿಯೇ ಇದ್ದುದರಿಂದ ಊರಿನ ಜನರು ಸ್ನೇಕ್ ಲಿಂಗಪ್ಪ ನಾಯ್ಕ, ಪುಟ್ನ೦ಜ ಆಟೋ ಮತ್ತವರ ತಂಡವನ್ನು ಕರೆದಿದ್ದಾರೆ. ಸತತ ಒಂದು ಗಂಟೆ ಕಾಲ ನಡೆದ ಕಾರ್ಯಾಚರಣೆಯಲ್ಲಿ ಕಾಳಿಂಗ ಸರ್ಪವನ್ನು ಸೆರೆಗೆ ಬೀಳಿಸಲಾಗಿದೆ. ನಂತರ ಅದನ್ನು ಸೆರೆ ಹಿಡಿದು ರಕ್ಷಿತಾರಣ್ಯಕ್ಕೆ ಬಿಡಲಾಗಿದೆ.

ಹಾವು ಹಿಡಿದ ಸ್ನೇಕ್ ಲಿಂಗಪ್ಪ ನಾಯ್ಕ, ಪುಟ್ನಜ ಆಟೋ ಮತ್ತು ಅವರ ತಂಡವು ಈವರೆಗೆ ಸುಮಾರು 720 ನಾಗರ ಹಾವು ಮತ್ತು 13 ಕಾಳಿಂಗ ಸರ್ಪ ಗಳನ್ನು ಹಿಡಿದು ಕಳೆದ ಹಲವು ವರ್ಷಗಳಿಂದ ಹಾವುಗಳನ್ನು ರಕ್ಷಿಸಿ ಕಾಡಿಗೆ ಮರಳಿಸುವ ಕೆಲಸ ಮಾಡುತ್ತಿದ್ದಾರೆ.

Leave A Reply

Your email address will not be published.