ಮುತ್ತಪ್ಪ ರೈ ಅಂತ್ಯಕ್ರಿಯೆ | ಗಾಳಿಯಲ್ಲಿ ಗುಂಡು- 7 ಮಂದಿ ಬಂಧನ

ಬೆಂಗಳೂರು: ಮಾಜಿ ಡಾನ್, ಜಯ ಕರ್ನಾಟಕ ಸಂಘಟನೆ ಸಂಸ್ಥಾಪಕ ಮುತ್ತಪ್ಪ ರೈ ಅಂತ್ಯಕ್ರಿಯೆ ವೇಳೆ ಗಾಳಿಯಲ್ಲಿ ಹಾರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಡದಿ ಪೊಲೀಸರು 7 ಜನರನ್ನು ಬಂಧಿಸಿದ್ದಾರೆ.

ಮೋನಪ್ಪ, ಗಿರೀಶ್, ಲಕ್ವಿರ್ ಸಿಂಗ್, ಚಾತರ್ ಸಿಂಗ್, ರಂಜಿತ್ ರೈ, ಸುನಿಲ್ ಹಾಗೂ ಪ್ರಕಾಶ್ ರೈ ಬಂಧಿತ ಆರೋಪಿಗಳು. ಗುಂಡು ಹಾರಿಸಲು ಬಳಸಿದ್ದ ಶಸ್ತ್ರಾಸ್ತ್ರಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಸೆಕ್ಯುರಿಟಿಗಳು ಗಾಳಿಯಲ್ಲಿ ಗುಂಡು ಹಾರಿಸಿದ್ದು, ಈ ಸಂದರ್ಭದಲ್ಲಿ ಆಯೋಜಕರು ಕಾನೂನು ಉಲ್ಲಂಘನೆ ತಡೆಗಟ್ಟುವಲ್ಲಿ ವಿಫಲರಾಗಿದ್ದರು.

ಈ ಘಟನೆಗೆ ಸಂಬಂಧಿಸಿದಂತೆ ಬಿಡದಿ ಠಾಣೆಯಲ್ಲಿ ಆರ್ಮ್ಸ್ ಆಕ್ಟ್ ಅಡಿ ಪ್ರಕರಣ ದಾಖಲಾಗಿದ್ದು, ಇದರಲ್ಲಿ ಆಯೋಜಕ ಪ್ರಕಾಶ್ ರೈ ಸೇರಿ ಏಳು ಜನರನ್ನು ದಸ್ತಗಿರಿ ಮಾಡಲಾಗಿದೆ. ಜೊತೆಗೆ ಆರೋಪಿಗಳಿಂದ ಶಸ್ತ್ರಾಸ್ತ್ರಗಳನ್ನು ಜಪ್ತಿ ಮಾಡಲಾಗಿದ್ದು, ಅವರನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಲಾಗುವುದು ಎಂದು ಬಿಡದಿ ಪೊಲೀಸರು ತಿಳಿಸಿದ್ದಾರೆ.


ಜಯಕರ್ನಾಟಕ ಸಂಘಟನೆ ಸಂಸ್ಥಾಪಕ ಮುತ್ತಪ್ಪ ರೈ(68) ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಈ ಹಿನ್ನೆಲೆ ಅನೇಕ ದಿನಗಳಿಂದ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಮುಂಜಾನೆ ಸುಮಾರು 2:10ಕ್ಕೆ ಮೃತಪಟ್ಟಿದ್ದು, ಅಂತ್ಯಕ್ರಿಯೆ ರಾಮನಗರ ಜಿಲ್ಲೆಯ ಬಿಡದಿಯ ತೋಟದ ಮನೆಯಲ್ಲಿ ನೆರವೇರಿತು. ಕಿರಿಯ ಮಗ ರಿಕಿ ರೈ ತಂದೆ ಮುತ್ತಪ್ಪ ರೈ ಚಿತೆಗೆ ಅಗ್ನಿಸ್ಪರ್ಶ ಮಾಡಿದರು.

ಈ ವೇಳೆ ಮುತ್ತಪ್ಪ ರೈ ಬೆಂಬಲಿಗರು ಕುಶಾಲತೋಪಿನ ರೀತಿಯಲ್ಲಿ ಐದು ಬಾರಿ ಗಾಳಿಯಲ್ಲಿ ಗುಂಡು ಹಾರಿಸಿ ಗೌರವ ಸಲ್ಲಿಸಿದ್ದರು. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿತ್ತು.

Leave A Reply

Your email address will not be published.