ನಾರಾವಿಯಲ್ಲಿ ಇಂದು ನೀರಾವಿ ತಣಿದು ‘ ಭೋ ‘ ಎಂದು ಮಳೆ !
ಬೆಳ್ತಂಗಡಿ ತಾಲೂಕಿನ ನಾರಾವಿಯಲ್ಲಿ ಇವತ್ತು ಗುಡುಗು ಸಹಿತ ಭಾರಿ ಮಳೆ ಬಿದ್ದಿದೆ. ಮಧ್ಯಾಹ್ನದವರಗೆ ಬೇಯುತ್ತಿದ್ದ ಬಿಸಿಲಿನಲ್ಲಿ ಗಂಟಲು ಒಣಗಿಸಿಕೊಂಡು ಜನರು ಓಡಾಡುತ್ತಿದ್ದರು.
![](https://hosakannada.com/wp-content/uploads/2024/07/First.jpeg)
ಆದರೆ ಸಂಜೆಯ ಹೊತ್ತಿಗೆ ಪೂರ್ತಿ ಚಿತ್ರಣವೇ ಬದಲಾಗಿ ಹೋಗಿದೆ. ಗುಡುಗು ಮಿಶ್ರಿತ ಭಾರಿ ಬರ್ಸ ಬಿದ್ದು ಮಳೆಗಾಲವನ್ನು ನೆನಪಿಸುವಂತಹಾ ಮಳೆಯಾಗಿದೆ. ಗುಡುಗು ಮಳೆಯ ಜೊತೆಗೆ ಹಲವು ಕಡೆ ಬೀಸು ಗಾಳಿಯು ಕೂಡ ಜೊತೆ ಸೇರಿಕೊಂಡಿದೆ. ‘ ಭೋ ‘ ಎಂದು ಸುರಿದ ಮಳೆಗೆ ಜನರು ‘ ಹೋ ‘ ಎಂದು ಸಂತೋಷದ ಕೇಕೆ ಹಾಕಿದ್ದಾರೆ.
![](https://hosakannada.com/wp-content/uploads/2024/07/Middle.jpeg)
ಈ ಮಳೆ ಜನರಲ್ಲಿ ಖುಷಿಯನ್ನು ತಂದಿದ್ದರೂ ನಾರಾವಿ ಗ್ರಾಮದ ಜೋಡಿಯ ರವಿ ಎಂಬವರ ಮನೆಗೆ ಸಿಡಿಲು ಬಡಿದಿದೆ. ಈ ಘಟನೆಯಲ್ಲಿ ಅವರ ಪತ್ನಿ ಸುಪ್ರೀತಾ ಅವರು ಗಾಯಗೊಂಡು ಚಿಕಿತ್ಸೆ ಪಡೆದುಕೊಂಡು ಈಗ ಚೇತರಿಸಿಕೊಳ್ಳುತ್ತಿದ್ದಾರೆ. ಮಿಂಚು ಬಡಿದು ಅವರ ಮನೆಯ ವಯರಿಂಗ್ ಮತ್ತು ಗೋಡೆಗಳಿಗೆ ಹಾನಿಯುಂಟಾಗಿದೆ.
ಇದೊಂದು ಘಟನೆ ಬಿಟ್ಟರೆ ಒಟ್ಟಾರೆಯಾಗಿ ರೈತಾಪಿ ವರ್ಗ ಖುಷಿಗೊಂಡಿದೆ. ಅಲ್ಲಲ್ಲಿ ಮೋಡಗಟ್ಟಿದ ವಾತಾವರಣವಿದ್ದುದರಿಂದ ಮತ್ತು ಕಳೆದ ಎರಡು ಸಲ ಅಕಾಲಿಕ ಮಳೆ ಬಿದ್ದು ಅಂಗಳದಲ್ಲಿ ಹಾಕಿದ್ದ ಒಣಗಿದ ಅಡಿಕೆ ಚಂಡಿ ಆದ ಅನುಭವ ಇರುವುದರಿಂದ ಈ ಸಾರಿ ಜನರು ಎಚ್ಚರದಿಂದಿದ್ದರು. ಎಲ್ಲರ ಮನೆಯಲ್ಲೂ ಪ್ಲಾಸ್ಟಿಕ್ ಶೀಟು ತಾರ್ಪಾಲ್ ರೆಡಿ ಮಾಡಿ ಇಟ್ಟಿದ್ದರು. ಆದುದರಿಂದ ಅಡಿಕೆಯ ಪೂಜುವ ಕೆಲಸವಿಲ್ಲದೆ ಜನರು ಮಳೆಯನ್ನು ಎಂಜಾಯ್ ಮಾಡುತ್ತಿರುವುದು ಕಂಡು ಬಂತು.