ಶಾಂತಿಮೊಗರು ಬ್ರಹ್ಮಕಲಶೋತ್ಸವಕ್ಕೆ ಭರದ ಸಿದ್ದತೆ: ಸೀತಾರಾಮ ರೈ

ಸವಣೂರು: ಕುಮಾರಧಾರ ನದಿತಟದಲ್ಲಿರುವ ಪುರಾತನವಾದ ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೀಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ಎಪ್ರಿಲ್ 3 ರಿಂದ 8 ರ ತನಕ ನಡೆಯಲಿದ್ದು, ವಿವಿಧ ಅಭಿವೃದ್ಧಿ ಕಾರ್ಯಗಳೊಂದಿಗೆ ಕಾರ್ಯಕ್ರಮಕ್ಕೆ ಭರದ ಸಿದ್ದತೆ ನಡೆಯುತ್ತಿದೆ ಎಂದು ಬ್ರಹ್ಮಕಲಶೋತ್ಸವ ಅಧ್ಯಕ್ಷ ಕೆ.ಸೀತಾರಾಮ ರೈ ಸವಣೂರು ಹೇಳಿದರು.

ಅವರು ಗುರುವಾರ ದೇಸ್ಥಾನದ ಬಳಿಯ ಸಭಾಭವನದಲ್ಲಿ ಭಕ್ತಾಧಿಗಳ ಸಭೆಯನ್ನು ಉದ್ಧೇಶಿಸಿ ಮಾತನಾಡುತ್ತಿದ್ದರು. 2002 ರಲ್ಲ ದೇವಾಲಯದ ಬ್ರಹ್ಮಕಲಶೋತ್ಸವ ನಡೆದು ಈಗ ಮತ್ತೆ ನಮಗೆಲ್ಲಾ ಸುವರ್ಣಾವಕಾಶ ಬಂದಿದೆ. ಈ ಹಿನ್ನೆಲೆಯಲ್ಲಿ ಮತ್ತೆ ದೇವಸ್ಥಾನದ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಸುಮಾರು 70 ಲಕ್ಷ ರೂ ವೆಚ್ಚದಲ್ಲಿ ಸುತ್ತು ಪೌಳಿ, ಭೋಜನ ಶಾಲೆ, ಅಡುಗೆ ಕೋಣೆ, ವಿಶೇಷ ಅತಿಥಿಗಳಿಗೆ ಕೊಠಡಿ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳು ಅಂತಿಮ ಹಂತದಲ್ಲಿವೆ, ಒಟ್ಟು ಸುಮಾರು ಒಂದು ಕೋಟಿ ರೂ ವೆಚ್ಚದಲ್ಲಿ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಕಾರ್ಯ ನಡೆಯಲಿದೆ. ಊರಿನ ಭಕ್ತಾಧಿಗಳು ಹಾಗೂ ಪ್ರಮುಖರು ಕಾರ್ಯಕ್ರಮದ ಯಶಸ್ಸಿಗೆ ಅಹರ್ನಿಶಿ ದುಡಿಯುತ್ತಿದ್ದಾರೆ.

ಊರ ಪರವೂರಿನ ಸುಮಾರು 15 ರಿಂದ 20 ಸಾವಿರ ಜನ ಕಾರ್ಯಕ್ರಮದಲ್ಲಿ ಭಾಗವಹಸುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ, ಬ್ರಹ್ಮಶ್ರೀ ನಾಗೇಶ್ ತಂತ್ರಿ ಹಾಗೂ ಲಕ್ಷ್ಮೀಶ ತಂತ್ರಿಯವರ ನೇತೃತ್ವದಲ್ಲಿ ಬ್ರಹ್ಮ ಕಲಶೋತ್ಸವ ನಡೆಯಲಿದ್ದು, ಆರು ದಿನಗಳ ಕಾಲ ನಡೆಯುವ ಕಾರ್ಯಕ್ರಮಗಳಲ್ಲಿ ನಾಲ್ಕು ದಿನಗಳಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ, ಪ್ರತೀ ದಿನ ಅನ್ನ ಸಂತರ್ಪಣೆ, ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ. ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರು, ಜನಪ್ರತಿನಿಧಿಗಳು, ಸಚಿವರು, ಸಂಸದರು, ದಾನಿಗಳು, ಧಾರ್ಮಿಕ ಚಿಂತಕರು ಭಾಗವಹಿಸಲಿದ್ದಾರೆ, ಕ್ಷೇತ್ರಕ್ಕೆ ಬರುವ ಭಕ್ತಾಧಿಗಳು ಹಾಗೂ ಗಣ್ಯರನ್ನು ಯತಿಗಳನ್ನು ಗೌರವಿಸಿ ಆತಿಥ್ಯ ನೀಡುವಲ್ಲಿ ಯಾವುದೇ ಲೋಪಗಳು ನಡೆಯಬಾರದು, ಈ ನಿಟ್ಟಿನಲ್ಲಿ ಸಮಿತಿ ಪ್ರಮುಖರು ಹಾಗೂ ಭಕ್ತಾಧಿಗಳು, ಸ್ವಯಂ ಸೇವಕರು ಪ್ರಾಮಾಣಿಕವಾಗಿ ತಮ್ಮ ಕರ್ತವ್ಯ ನಿರ್ವಹಿಸಬೇಕಾಗಿದೆ ಎಂದು ಸೀತಾರಾಮ ರೈ ಸೂಚನೆ ನೀಡಿದರು.

ಆಡಳಿತ ಸಮಿತಿಯ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ ಮಾತನಾಡಿ ಬೈಲುವಾರು ಸಮಿತಿಗಳು, ವಿವಿಧ ಸಂಘಟನೆಗಳ ಪ್ರಮುಖರು ಹಾಗೂ ಸದಸ್ಯರುಗಳಿಗೆ ಆರ್ಥಿಕ ಸಂಗ್ರಹಣೆಯ ಹೊಣೆಗಾರಿಕೆ, . ವಿವಿಧ ಕಾರ್ಯಕ್ರಮಗಳ ಜವಾಬ್ದಾರಿ ಹಂಚಿಕೆಯನ್ನು ಮಾಡಿದರು.

ವೇದಿಕೆಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ ಉಪಾಧ್ಯಕ್ಷ ಚಂದ್ರಶೇಖರ ಬರೆಪ್ಪಾಡಿ, ಕಾರ್ಯದರ್ಶಿ ವೆಂಕಟೇಶ್ ಭಟ್ ಕೊಯಕ್ಕಡೆ, ಆಡಳಿತ ಸಮಿತಿಯ ಕಾರ್ಯದರ್ಶಿ ಎಸ್.ಮದನ ಪೂಜಾರಿ, ಜತೆ ಕಾರ್ಯದರ್ಶಿ ಸೂರಪ್ಪ ಗೌಡ ಪಟ್ಟತ್ತಾಣ, ಪ್ರಮುಖರಾದ ಹರೀಶ್ ಆಚಾರ್ ನಗ್ರಿಗುತ್ತು, ಮಹಾಲಿಂಗೇಶ್ವರ ಶರ್ಮ ಕಜೆ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Leave A Reply

Your email address will not be published.