ಕೆಡ್ಡಸ ಪರ್ಬ’ ಆಚರಣೆ ಮೂಲಕ ಪ್ರಕೃತಿ ಆರಾಧನೆ

? ಯಶವಂತ ಬಪ್ಪಳಿಗೆ ಪುತ್ತೂರು.

ಪುತ್ತೂರು: ತುಳುನಾಡಿನ ವಿಶಿಷ್ಟ ಆಚರಣೆಗಳು ಮರೆಯಾಗುತ್ತಿರುವ ಈ ಕಾಲಘಟ್ಟದಲ್ಲಿ ಕೆಲವೆಡೆ ಮುಖ್ಯವಾಗಿ ಗ್ರಾಮಾಂತರ ಭಾಗಗಳಲ್ಲಿ ಆಚರಿಸುವ ಹಬ್ಬಗಳು ವಿಶೇಷವೆಂದೆನಿಸತೊಡಗಿವೆ.

ಇದರಲ್ಲಿ ಮಕರ ಮಾಸದ 27ನೇ ದಿನದಿಂದ ಕುಂಭ ಸಂಕ್ರಮಣದವರೆಗೆ ಅಂದರೆ (ಈ ಬಾರಿ ಫೆ. 11ರಿಂದ 13ರ ವರೆಗೆ) ಮೂರು ದಿನಗಳ ಆಚರಿಸುವ ಕೆಡ್ಡಸ ಪರ್ಬ (ಹಬ್ಬ) ಕೂಡ ಒಂದಾಗಿದೆ. ಆದರೆ ಈ ಹಬ್ಬದ ಹಿನ್ನೆಲೆ, ಆಚರಣೆ ವಿಧಾನಗಳ ಬಗ್ಗೆ ಇಂದು ಹೆಚ್ಚಿನವರಿಗೆ ತಿಳಿದಿಲ್ಲ. ಹೀಗಾಗಿ ಈ ಹಬ್ಬದ ಆಚರಣೆಯೇ ಕಡಿಮೆಯಾಗಿದೆ.

ಪ್ರಕೃತಿಯ ಆರಾಧನೆಯ ರೂಪದಲ್ಲಿ ತುಳುವರು ಈ ಹಬ್ಬವನ್ನು ಆಚರಿಸುತ್ತಾರೆ. ಈ ಮೂರು ದಿನ ಭೂಮಿಯನ್ನು ಸ್ತ್ರೀ ಎಂಬ ರೂಪದಲ್ಲಿ ಕಾಣುವ ಜತೆಗೆ ಭೂಮಿ ತಾಯಿ ವರ್ಷಕ್ಕೊಮ್ಮೆ ರಜಸ್ವಾಲೆಯಾಗುವ ದಿನಗಳು ಎಂಬುದು ಹಿರಿಯರ ನಂಬಿಕೆ. ಇದನ್ನೂ ಶಾಸ್ತ್ರಗಳಲ್ಲಿಯೂ ಉಲ್ಲೇಖೀಸಲಾಗಿದೆ. ಈ ಮೂರು ದಿನಗಳಲ್ಲಿ ಮೊದಲನೇ ದಿನ ಪ್ರತಿ ಮನೆಯಲ್ಲೂ ನವ ಧಾನ್ಯಗಳನ್ನು ಹುರಿದು, ಬೆಲ್ಲ, ಕೊಬ್ಬರಿ ಬೆರೆಸಿ ತಿಂಡಿ ತಯಾರಿಸಿ (ಕುಡುಅರಿ) ಹಂಚುವ ಕ್ರಮವೂ ಇದೆ. ಆದರೆ ಈ ಕ್ರಮ ಇಂದು ಹೆಚ್ಚಿನ ಮನೆಗಳಲ್ಲಿ ಆಚರಣೆಯಲ್ಲೇ ಇಲ್ಲ. ಹೀಗಾಗಿ ಬಹುತೇಕ ಮಂದಿ ಇದನ್ನು ತಯಾರಿಸುವ ವಿಧಾನವನ್ನೂ ತಿಳಿದಿಲ್ಲ. ಪ್ರಕೃತಿಯೂ ಕೂಡ ಈ ದಿನ ವಿಶೇಷವಾಗಿ ವರ್ತಿಸುತ್ತದೆ. ಮುಖ್ಯವಾಗಿ ಶೀತ ಗಾಳಿ (ಕೆಡ್ಡಸದ ಗಾಳಿ) ಬೀಸುವುದರಿಂದ ಪ್ರಾಣಿ, ಪಕ್ಷಿಗಳಿಗೆ ಜ್ವರ ಬರುತ್ತದೆ. ಆ ವೇಳೆ ಅವುಗಳನ್ನು ಬೇಟೆಯಾಡುವುದು ಸುಲಭ ಎಂದು ಹಿರಿಯರು ಹೇಳುತ್ತಾರೆ. ಹಬ್ಬದ ಎರಡನೇ ದಿನ ಊರ ಜನರು ಸಾಮೂಹಿಕವಾಗಿ ಬೇಟೆಯಾಡಿ ಮಾಂಸವನ್ನು ಹಂಚಿಕೊಂಡು ಅಡುಗೆ ಮಾಡುವ ಕ್ರಮವೂ ಕೆಲವೆಡೆ ಇದೆ. ಇಂತಹ ಹಬ್ಬದ ಆಚರಣೆ ಇಂದು ಮರೆಯಾಗುತ್ತಿದೆ. ಮುಂದಿನ ಪೀಳಿಗೆಗೆ ಪ್ರಕೃತಿ ಆರಾಧನೆಯ ಜತೆಗೆ ಇಂಥ ಹಬ್ಬಗಳ ಮಹತ್ವವನ್ನು ತಿಳಿಸಿಕೊಡಬೇಕಿದೆ.

ಭೂಮಿ ತಾಯಿಗೆ ರಜಸ್ವಾಲೆಯಾಗಿರುವುದರಿಂದ ಈ ಸಂದರ್ಭ ಆಕೆಗೆ ನೋವು ಮಾಡಬಾರದು ಎಂಬ ಕಾರಣಕ್ಕೆ ಭೂಮಿಯನ್ನು ಅಗೆಯುವುದು, ಮರ ಕಡಿಯುವುದು, ಕೃಷಿ ಕೆಲಸ ಮಾಡುವುದು ನಿಷೇಧ ಎಂಬ ಸಂಪ್ರದಾಯ ಈಗಲೂ ಆಚರಣೆಯಲ್ಲಿದೆ. ಯಾಕೆಂದರೆ ಈ ವೇಳೆ ಭೂಮಿ ತಾಯಿಗೆ ನೋವು ನೀಡಿದರೆ ಆಕೆ ಬಂಜೆಯಾಗುತ್ತಾಳೆ ಎಂಬ ನಂಬಿಕೆ ತುಳುನಾಡಿನ ಜನರಲ್ಲಿದೆ.

ಇಂತಹ ಕೆಲಸ ಮಾಡಬಾರದು ಭೂಮಿ ತಾಯಿಗೆ ರಜಸ್ವಾಲೆಯಾಗಿರುವುದರಿಂದ ಈ ಸಂದರ್ಭ ಆಕೆಗೆ ನೋವು ಮಾಡಬಾರದು ಎಂಬ ಕಾರಣಕ್ಕೆ ಭೂಮಿಯನ್ನು ಅಗೆಯುವುದು, ಮರ ಕಡಿಯುವುದು, ಕೃಷಿ ಕೆಲಸ ಮಾಡುವುದು ನಿಷೇಧ ಎಂಬ ಸಂಪ್ರದಾಯ ಈಗಲೂ ಆಚರಣೆಯಲ್ಲಿದೆ. ಯಾಕೆಂದರೆ ಈ ವೇಳೆ ಭೂಮಿ ತಾಯಿಗೆ ನೋವು ನೀಡಿದರೆ ಆಕೆ ಬಂಜೆಯಾಗುತ್ತಾಳೆ ಎಂಬ ನಂಬಿಕೆ ತುಳುನಾಡಿನ ಜನರಲ್ಲಿದೆ.

Leave A Reply

Your email address will not be published.